ಹೊಸಪೇಟೆ: ‘ಏಪ್ರಿಲ್ ಮೊದಲ ವಾರದಲ್ಲಿ ರೈಲ್ವೆ ಸುರಕ್ಷತಾ ಆಯುಕ್ತರು ಭೇಟಿ ನೀಡಿ ಮಾರ್ಗ ಪರಿಶೀಲನೆ ನಡೆಸುವರು. ಅದಾದ ನಂತರ ಹೊಸಪೇಟೆ–ಕೊಟ್ಟೂರು ಪ್ರಯಾಣಿಕರ ರೈಲು ಓಡಿಸುವ ದಿನಾಂಕವನ್ನು ಅಧಿಕೃತವಾಗಿ ಘೋಷಿಸಲಾಗುವುದು’ ಎಂದುನೈರುತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಅಜಯಕುಮಾರ್ ಸಿಂಗ್ ತಿಳಿಸಿದರು.
ವಿಜಯನಗರ ರೈಲ್ವೆ ಅಭಿವೃದ್ದಿ ಕ್ರಿಯಾ ಸಮಿತಿ ಹಾಗೂ ರೈಲ್ವೆ ಸಲಹಾ ಸಮಿತಿ ಸದಸ್ಯರಿಂದ ಭಾನುವಾರ ಇಲ್ಲಿ ಮನವಿ ಸ್ವೀಕರಿಸಿದ ನಂತರ ಮೇಲಿನಂತೆ ಭರವಸೆ ನೀಡಿದರು.
‘ಈ ಮಾರ್ಗದ 29 ಮಾನವ ರಹಿತ ಲೆವಲ್ ಕ್ರಾಸಿಂಗ್ಗಳಲ್ಲಿ ಅಫಘಾತಗಳು ಹೆಚ್ಚಾಗಿವೆ. ಕಡಿಮೆ ಬಳಕೆಯಲ್ಲಿರುವ ಕೆಲ ಲೆವಲ್ ಕ್ರಾಸಿಂಗ್ಗಳನ್ನು ಮುಚ್ಚಲಾಗುವುದು. 19 ಗೇಟುಗಳನ್ನು ಹತ್ತಿರದ ಗೇಟುಗಳೊಂದಿಗೆ ವಿಲೀನಗೊಳಿಸಿ, ನಾಲ್ಕು ಲೆವಲ್ ಕ್ರಾಸಿಂಗ್ಗಳಿಗೆ ಸೀಮಿತ ಎತ್ತರದ ಅಂಡರ್ ಪಾಸ್ ನಿರ್ಮಾಣ ಮಾಡುತ್ತಿದ್ದು, ಬಹುತೇಕ ಕೆಲಸ ಮುಗಿದಿದೆ’ ಎಂದು ಹೇಳಿದರು.
’ರೈಲು ನಿಲ್ದಾಣಗಳ ಆಧುನೀಕರಣ ಹಾಗೂ ಪ್ರಯಾಣಿಕರಿಗೆ ಮೂಲ ಸೌಲಭ್ಯ ಕಲ್ಪಿಸುವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಏಪ್ರಿಲ್ ಮೊದಲ ವಾರದಲ್ಲಿ ಪೂರ್ಣಗೊಳ್ಳಲಿದೆ. ರೈಲ್ವೆ ಸುರಕ್ಷತಾ ಆಯುಕ್ತರು ಮಾರ್ಗದಲ್ಲಿ ಸಂಚರಿಸಿ, ಪರಿಶೀಲಿಸಿದ ನಂತರ ಪ್ರಮಾಣ ಪತ್ರ ನೀಡುವರು’ ಎಂದರು.
ಹುಬ್ಬಳ್ಳಿ ವಿಭಾಗೀಯ ವ್ಯವಸ್ಥಾಪಕ ರಾಕೇಶ್ ಮೋಹನ್,ಪ್ರಾದೇಶಿಕ ರೈಲ್ವೆ ಅಧಿಕಾರಿಗಳಾದ ಸುನೀಲ್ ಕುಮಾರ್, ನಿಲ್ದಾಣದ ಮುಖ್ಯಸ್ಥ ಉಮರ್ ಬಾನಿ, ವಿಜಯನಗರ ರೈಲ್ವೆ ಅಭಿವೃದ್ದಿ ಕ್ರಿಯಾ ಸಮಿತಿ ಅಧ್ಯಕ್ಷ ವೈ. ಯಮುನೇಶ್, ಕಾರ್ಯದರ್ಶಿ ಕೆ.ಮಹೇಶ್, ಪದಾಧಿಕಾರಿಗಳಾದ ಎಂ.ಶ್ಯಾಮಪ್ಪ ಅಗೋಲಿ, ದೀಪಕ್ ಉಳ್ಳಿ, ಜಿ.ದೇವರೆಡ್ಡಿ, ಪೀರನ್ ಸಾಬ್, ಲೋಗನಾಥನ್, ಸೋಮಲಿಂಗಪ್ಪ, ಪಿ.ಪ್ರಭಾಕರ್, ಶೇಖರ್ ಮುದ್ಲಾಪುರ, ರಮೇಶ್ ಲಂಬಾಣಿ, ಸಿ.ಬಸವರೆಡ್ಡಿ, ಪಿ.ಲಿಂಗಣ್ಣ, ಅರವಿಂದ ಜಾಲಿ, ವಿಶ್ವನಾಥ ಕೌತಾಳ್, ಏಕನಾಥ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.