ಸಿರುಗುಪ್ಪ (ಬಳ್ಳಾರಿ): ‘ಎಐ ಬಳಸಲು ನಿನಗೆ ಗೊತ್ತೇ?, ಅದನ್ನು ಬಳಸಿದರೆ ನಿನ್ನ ಅಮ್ಮ ಬಯ್ಯುವಳೇ’ ಹೀಗೆಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಬಾಗೇವಾಡಿ ಗ್ರಾಮದ ಅರಿವು ಕೇಂದ್ರದಲ್ಲಿ ಕಂಪ್ಯೂಟರ್ ಬಳಸುತ್ತಿದ್ದ ಆರನೇ ತರಗತಿ ವಿದ್ಯಾರ್ಥಿ ತರುಣ್ ಎಂಬಾತನನ್ನು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ತರುಣ್, ‘ಹಾಗೇನಿಲ್ಲ. ನನ್ನ ಅಮ್ಮ ಬಯ್ಯಲಾರಳು’ ಎಂದು ಉತ್ತರಿಸಿದ.
ಬಾಗೇವಾಡಿ ಗ್ರಾಮದ ‘ಅರಿವು ಕೇಂದ್ರ’ವು ಮಾದರಿ ಗ್ರಂಥಾಲಯವಾಗಿದ್ದು, ಡಿಜಿಟಲ್ ಸಲಕರಣೆಗಳ ಬಳಕೆಗೂ ಅವಕಾಶವಿದೆ. ‘ಅರಿವು ಕೇಂದ್ರ’ಕ್ಕೆ ಸಚಿವೆ ನಿರ್ಮಲಾ ಗುರುವಾರ ಭೇಟಿ ನೀಡಿದರು. ಈ ವೇಳೆ ವಿದ್ಯಾರ್ಥಿ ತರುಣ್ ಕಂಪ್ಯೂಟರ್ನಲ್ಲಿ ತಲ್ಲೀನನಾಗಿದ್ದ. ಕುತೂಹಲದಿಂದ ಆತನನ್ನು ಮಾತನಾಡಿಸಿದ ಅವರು ಅವನ ಉತ್ತರ ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲಿನ ಮಕ್ಕಳ ಇಂಗ್ಲಿಷ್ ಸಂವಹನ ಕೌಶಲ ಕುರಿತು ಅಚ್ಚರಿ ವ್ಯಕ್ತಪಡಿದಿರು.
ಬಳಿಕ ಮಾತನಾಡಿದ ಅವರು, ‘ಎ.ಐ ತಂತ್ರಜ್ಞಾನ ಬಳಕೆ ಕುರಿತು ಪೋಷಕರು, ಶಿಕ್ಷಕರು ಮಕ್ಕಳಿಗೆ ಮಾಹಿತಿ ನೀಡಿದರೆ ಅವರು ಭವಿಷ್ಯದಲ್ಲಿ ಉತ್ತಮ ಸಾಧನೆ ಮಾಡಲಿದ್ದಾರೆ. ಗ್ರಂಥಾಲಯದಲ್ಲಿ ವಿಷಯವಾರು ಅಧ್ಯಯನ ಹಾಗೂ ವಿಷಯಗಳ ಕುರಿತು ಚರ್ಚೆಗೂ ಅವಕಾಶ ಕಲ್ಪಿಸಿಕೊಡಬೇಕು’ ಎಂದರು.
ಶಾಸಕ ಬಿ.ಎಂ.ನಾಗರಾಜ, ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹ್ಯಾರಿಸ್ ಸುಮೇರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭರಾಣಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.