ಹೊಸಪೇಟೆ: ‘ಈ ಸರ್ಕಾರ ಇರುತ್ತೋ, ಹೋಗುತ್ತೋ ಗೊತ್ತಿಲ್ಲ’ ಎಂದು ಅರಣ್ಯ ಸಚಿವ ಆನಂದ್ ಸಿಂಗ್ ಅನುಮಾನ ವ್ಯಕ್ತಪಡಿಸಿದರು.
ತಾಲ್ಲೂಕಿನ ಕಮಲಾಪುರದ ಅಟಲ್ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವನ್ಯಜೀವಿ ಸಪ್ತಾಹ ಉದ್ಘಾಟಿಸಿ ಮಾತನಾಡಿದ ಅವರು, ‘ನಾನು ಬೆಂಗಳೂರಿನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ, ನನ್ನ ಕ್ಷೇತ್ರದಲ್ಲಿ ಮೊದಲ ಕಾರ್ಯಕ್ರಮವಾದ್ದರಿಂದ ಇಲ್ಲೇ ಉಳಿದುಕೊಂಡೆ. ಈ ಸರ್ಕಾರ ಯಾವಾಗ ಇರುತ್ತೋ ಹೋಗುತ್ತೋ ಗೊತ್ತಿಲ್ಲ. ಮಾಧ್ಯಮದವರು ಇದನ್ನು ತಪ್ಪಾಗಿ ಭಾವಿಸಬಾರದು. ನನ್ನ ಕ್ಷೇತ್ರಕ್ಕೆ ಮೊದಲ ಆದ್ಯತೆ. ಹಾಗಾಗಿ ಇಲ್ಲೇ ಉಳಿದುಕೊಂಡೆ’ ಎಂದು ಬಳಿಕ ಸಾವರಿಸಿಕೊಂಡು ಹೇಳಿದರು.
ರಣಹದ್ದು ತಳಿ ಸಂವರ್ಧನೆಗೆ ₹2 ಕೋಟಿ:‘ರಾಮನಗರದಲ್ಲಿ ಅಳಿವಿನಂಚಿನ ರಣಹದ್ದು ತಳಿ ಸಂವರ್ಧನೆ, ಅವುಗಳ ರಕ್ಷಣೆಗೆ ₹2 ಕೋಟಿ ವೆಚ್ಚದಲ್ಲಿ ‘ಫೀಡಿಂಗ್ ಕ್ಯಾಂಪ್’ ನಿರ್ಮಿಸಲಾಗುತ್ತಿದೆ. ರಣಹದ್ದುಗಳ ಸಂರಕ್ಷಣೆಯ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆ’ ಎಂದು ಸಿಂಗ್ ಹೇಳಿದರು.
‘ಈ ಹಿಂದೆ ಅನೇಕ ಕಡೆ ರಣಹದ್ದುಗಳು ಕಾಣಿಸುತ್ತಿದ್ದವು. ಎಲ್ಲಾದರೂ ದನ ಸತ್ತು ಬಿದ್ದರೆ ಅದರ ಸುತ್ತ ರಣಹದ್ದುಗಳು ಮುತ್ತಿಕೊಳ್ಳುತ್ತಿದ್ದವು. ಈಗ ಒಂದೂ ಕೂಡ ಕಾಣಿಸುತ್ತಿಲ್ಲ. ಅವುಗಳನ್ನು ಉಳಿಸುವ ಹೊಣೆ ನಮ್ಮ ಮೇಲಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.