ಹೊಸಪೇಟೆ: ಬೆಂಗಳೂರಿನಲ್ಲಿ ಬುಧವಾರ ಅಯೋಜಿಸಿದ್ದ ಮದುವೆ ಸಮಾರಂಭದಲ್ಲಿ ಶಾಸಕ ಆನಂದ್ ಸಿಂಗ್ ಹಾಗೂ ಮಾಜಿ ಶಾಸಕ ಎಚ್.ಆರ್.ಗವಿಯಪ್ಪ ಮುಖಾಮುಖಿಯಾದರು.
ಗವಿಯಪ್ಪ ಸೋದರ ಎಚ್.ಆರ್. ಅಜೇಯ ಅವರ ಮದುವೆ ಸಮಾರಂಭವಿತ್ತು. ಅದಕ್ಕೆ ಆನಂದ್ ಸಿಂಗ್ ಅವರನ್ನು ಆಹ್ವಾನಿಸಲಾಗಿತ್ತು. ಈ ವೇಳೆ ಪರಸ್ಪರ ಎದುರಾದ ಗವಿಯಪ್ಪ ಮತ್ತು ಆನಂದ್ ಸಿಂಗ್ ಮುಗುಳ್ನಕ್ಕಿ ಉಭಯ ಕುಶಲೋಪರಿ ವಿಚಾರಿಸಿದರು. ಬಳಿಕ ನಗುತ್ತಲೇ ಛಾಯಾಚಿತ್ರಕ್ಕೆ ಪೋಸ್ ಕೂಡ ಕೊಟ್ಟರು.
ವಿಜಯನಗರ ಕ್ಷೇತ್ರದ ಉಪಚುನಾವಣೆಯಲ್ಲಿ ಎಚ್.ಆರ್. ಗವಿಯಪ್ಪ ಬಿಜೆಪಿ ಟಿಕೆಟ್ನ ಪ್ರಮುಖ ಆಕಾಂಕ್ಷಿಯಾಗಿದ್ದರು. ಆದರೆ, ಪಕ್ಷವು ಅವರನ್ನು ಕಡೆಗಣಿಸಿ ಆನಂದ್ ಸಿಂಗ್ಗೆ ಮಣೆ ಹಾಕಿತ್ತು. ಅದರಿಂದ ಮುನಿಸಿಕೊಂಡಿದ್ದ ಗವಿಯಪ್ಪ ಪಕ್ಷದ ಚಟುವಟಿಕೆಗಳಿಂದ ಅಂತರ ಕಾಯ್ದುಕೊಂಡಿದ್ದರು. ಉಪಚುನಾವಣೆ ಮುಗಿಯುವವರೆಗೆ ಕ್ಷೇತ್ರಕ್ಕೆ ಕಾಲಿಡುವುದಿಲ್ಲ ಎಂದು ಹೇಳಿದ್ದರು. ಅದರಂತೆ ಅವರು ನಡೆದುಕೊಂಡಿದ್ದರು. ಕ್ಷೇತ್ರದ ಮತದಾರರಾಗಿದ್ದರೂ ಅವರು ಬಂದು ಮತ ಹಾಕಿರಲಿಲ್ಲ.
ಆನಂದ್ ಸಿಂಗ್ ಇರುವ ಕಾರ್ಯಕ್ರಮದಲ್ಲಿ ಗವಿಯಪ್ಪ ವೇದಿಕೆ ಹಂಚಿಕೊಳ್ಳುವುದಿಲ್ಲ. ಮೊದಲಿನಿಂದಲೂ ಗವಿಯಪ್ಪ ಹಾಗೆಯೇ ನಡೆದುಕೊಂಡು ಬಂದಿದ್ದಾರೆ. ಆದರೆ, ಸೋದರನ ಮದುವೆಗೆ ಸಿಂಗ್ ಅವರನ್ನು ಆಹ್ವಾನಿಸಿರುವುದು ವಿಶೇಷ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.