ಹೊಸಪೇಟೆ (ವಿಜಯನಗರ): ‘ಇ–ಪೋಷಣ್’ ಟ್ರ್ಯಾಕರ್ ಆ್ಯಪ್ಗೆ ತಳುಕು ಹಾಕಿ ಅಂಗನವಾಡಿ ಕಾರ್ಯಕರ್ತೆಯರಿಗೆ ವೇತನ ಪಾವತಿಸುವ ನಿರ್ಧಾರವನ್ನು ಸರ್ಕಾರ ಹಿಂಪಡೆಯಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ (ಸಿಐಟಿಯು ಸಂಯೋಜಿತ) ಕಾರ್ಯಕರ್ತೆಯರು ಶುಕ್ರವಾರ ನಗರದ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ಗೆ ಸಲ್ಲಿಸಿದರು.
ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಫಲಾನುಭವಿಗಳನ್ನು ಸಂಕಷ್ಟಕ್ಕೆ ದೂಡುವುದು ಸರಿಯಲ್ಲ. ಯೋಜನೆ ಜಾರಿಗೂ ಮುನ್ನ ಅದರಲ್ಲಿನ ದೋಷ ನಿವಾರಿಸಬೇಕು. ಇಲ್ಲವಾದರೆ ತಾಂತ್ರಿಕ ಕಾರಣಗಳಿಗೆ ಕಾರ್ಯಕರ್ತೆಯರನ್ನು ಹೊಣೆಗಾರರಾಗಿ ಮಾಡಿ ಕಷ್ಟಕ್ಕೆ ಸಿಲುಕಿಸಬಹುದು. ಹೊಸ ತಂತ್ರಜ್ಞಾನದಿಂದ ಕೆಲಸದ ಹೊರೆ ತಗ್ಗಿ, ದಕ್ಷತೆ ಹೆಚ್ಚಾಗಬೇಕು ಎಂದು ಆಗ್ರಹಿಸಿದ್ದಾರೆ.
ಮೊಬೈಲ್, ದತ್ತಾಂಶ ಸಂಗ್ರಹಕ್ಕೆ ತರಬೇತಿ ಸೇರಿದಂತೆ ಇತರೆ ಕಾರ್ಯಕ್ಕೆ ಅಗತ್ಯ ಹಣ ಬಿಡುಗಡೆಗೊಳಿಸಬೇಕು. ಈಗಾಗಲೇ ಸರ್ಕಾರ ಕಡಿತಗೊಳಿಸಿರುವ ಅನುದಾನ ಎಲ್ಲ ರಾಜ್ಯಗಳಿಗೂ ಮರು ಹಂಚಿಕೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಸಂಘದ ತಾಲ್ಲೂಕು ಅಧ್ಯಕ್ಷೆ ಕೆ. ನಾಗರತ್ನಮ್ಮ, ಪ್ರಧಾನ ಕಾರ್ಯದರ್ಶಿ ಕೆ.ಎಂ. ಸ್ವಪ್ನ, ಉಪಾಧ್ಯಕ್ಷೆ ಶಕುಂತಲಾ, ಕಾರ್ಯದರ್ಶಿಗಳಾದ ಕೆ. ಕೆಂಚಮ್ಮ, ಬಿ. ಸಕ್ರಮ್ಮ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.