ಕೂಡ್ಲಿಗಿ: ‘ರೈತರ ಉತ್ಪನ್ನಗಳಲ್ಲಿ ಬಾಜು ತೆಗೆಯುವುದು, ತೂಕದಲ್ಲಿ ವ್ಯತ್ಯಾಸ ಮಾಡುವುದನ್ನು ತಡೆದು, ಎಪಿಎಂಸಿಯಲ್ಲಿ ಸರಿಯಾದ ವ್ಯಾಪಾರ ವಹಿವಾಟು ಮಾಡುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣ ವೇದಿಕೆಯ ಕಾರ್ಯಕರ್ತರು ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿಗೆ ಶುಕ್ರವಾರ ಮನವಿ ಸಲ್ಲಿಸಿದರು.
‘ತಾಲ್ಲೂಕಿನ ಎಲ್ಲ ಹಳ್ಳಿಗಳಿಗೆ ಹೋಗಿ ರೈತರಿಂದ ವ್ಯಾಪಾರ ಮಾಡುವ ವ್ಯಾಪಾರಿಗಳು ತೂಕದಲ್ಲಿ ವ್ಯತ್ಯಾಸ ಮಾಡಿ, ಕ್ವಿಂಟಲ್ಗೆ 4 ಕೆ.ಜಿ. ಬಾಜು ತೆಗೆದು ಮೋಸ ಮಾಡುತ್ತಿದ್ದಾರೆ. ತಾಲ್ಲೂಕು ಕೇಂದ್ರ ಸ್ಥಾನದಲ್ಲಿ ಎಪಿಎಂಸಿ ಇದ್ದರೂ ದಲ್ಲಾಳಿ ಅಂಗಡಿ ಮಾಲೀಕರು ತಮ್ಮ ಅಂಗಡಿಗಳನ್ನು ತೆರೆಯದೆ ರೈತರಿದ್ದಲ್ಲಿಗೆ ಹೋಗಿ ಕಾಳುಗಳನ್ನು ತೂಕ ಮಾಡಿಕೊಂಡು ಬರುತ್ತಿದ್ದಾರೆ. ಎಪಿಎಂಸಿಗೆ ಬಂದು ಉತ್ಪನ್ನಗಳನ್ನು ಮಾರಾಟ ಮಾಡುವಂತೆ ರೈತರಲ್ಲಿ ಜಾಗೃತಿ ಮೂಡಿಸಬೇಕು. ಮೋಸ ಮಾಡುವ ದಲ್ಲಾಳಿಗಳ ಅಂಗಡಿಗಳ ಪರವಾನಗಿಯನ್ನು ಶಾಶ್ವತವಾಗಿ ರದ್ದುಪಡಿಸಬೇಕು. ಪರವಾನಗಿ ಇಲ್ಲದೆ ವ್ಯಾಪಾರ ಮಾಡುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು’ ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಎಪಿಎಂಸಿ ಅಧ್ಯಕ್ಷ ಕುರಿಹಟ್ಟಿ ಬೋಸಯ್ಯ ಹಾಗೂ ಕಾರ್ಯದರ್ಶಿ ಎಸ್.ಸಿ ಬಸವಾರಜ್ ಮನವಿ ಸ್ವೀಕರಿಸಿದರು.
ಇದಕ್ಕೂ ಮೊದಲು ಗಾಂಧಿ ಚಿತಾಭಸ್ಮವಿರುವ ಹುತಾತ್ಮರ ಸ್ಮಾರಕದಿಂದ ಮೆರವಣಿಗೆ ಹೊರಟ ಪ್ರತಿಭಟನಾ ಮೆರವಣಿಗೆಗೆ ಕೂಡ್ಲಿಗಿ ಹಿರೇಮಠದ ಪ್ರಶಾಂತ ಸಾಗರ ಸ್ವಾಮಿ ಚಾಲನೆ ನೀಡಿದರು.
ಕರವೇ ತಾಲ್ಲೂಕು ಅಧ್ಯಕ್ಷ ಕಟೇರ್ ಹಾಲೇಶ್, ಈ. ರಮೇಶ, ಮೆಹಬೂಬ್ ಬಾಷಾ, ನಾಗರಾಜ, ಸಾಲುಮನಿ ರಾಗವೇಂದ್ರ, ಓಬಳೇಶ, ಕಾಶಿ ಮಹರಾಜ, ಲಕ್ಷ್ಮೀದೇವಿ, ಮಹೇಶ, ಶಿವಕುಮಾರ್, ಮಾಜಿ ಸೈನಿಕ ರಮೇಶ್, ಕಕ್ಕುಪಿ ಬಸವರಾಜ, ಸೂರ್ಯಪಾಪಣ್ಣ, ಎಚ್.ರೇವಣ್ಣ ಎನ್. ಅಜೇಯ,ನಿರ್ಕಲ್ ನಿಂಗಪ್ಪ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.