ADVERTISEMENT

ಆತ್ಮಹತ್ಯೆ ಯತ್ನ: ಸಾರಿಗೆ ಸಂಸ್ಥೆ ಕಿರಿಯ ಸಹಾಯಕ ಆಸ್ಪತ್ರೆಗೆ ದಾಖಲು

ವಜಾ ಆದೇಶ ಪಡೆಯದೆ ಆತ್ಮಹತ್ಯೆ ಯತ್ನ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2018, 8:36 IST
Last Updated 12 ಡಿಸೆಂಬರ್ 2018, 8:36 IST

ಬಳ್ಳಾರಿ: ಹಣ ದುರ್ಬಳಕೆ ಆರೋಪದ ಮೇರೆಗೆ ಸೇವೆಯಿಂದ ವಜಾ ಮಾಡಿ ಇಲ್ಲಿನ ಈಶಾನ್ಯ ಸಾರಿಗೆ ಸಂಸ್ಥೆ ವಿಭಾಗೀಯ ವ್ಯವಸ್ಥಾಪಕರು ಬುಧವಾರ ಹೊರಡಿಸಿದ್ದ ಆದೇಶವನ್ನು ಪಡೆಯದೇ ನಗರದ ಮೊದಲನೇ ಡಿಪೋ ಕಿರಿಯ ವ್ಯವಸ್ಥಾಪಕ ಮಲ್ಲಿಕಾರ್ಜುನ ಆತ್ಮಹತ್ಯೆಗೆ ಯತ್ನಿಸಿದ್ದು ವಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೂರು ವರ್ಷದ ಹಿಂದೆ ನಡೆದಿದ್ದ ಬಸ್‌ಪಾಸ್‌ ಹಣ ದುರ್ಬಳಕೆ ಸಂಬಂಧ ಹಿಂದಿನ ಸಂಚಾರ ನಿಯಂತ್ರಕ, ಈಗಿನ ಕಂಡಕ್ಟರ್‌ ಪಾರ್ಥಯ್ಯ ಮತ್ತು ಅಧೀಕ್ಷಕ ಶಿವಮೂರ್ತಿ ಎಂಬುವವರನ್ನೂ ಬುಧವಾರವೇ ಸೇವೆಯಿಂದ ವಜಾಗೊಳಿಸಲಾಗಿದೆ.

ವಜಾ ಆದೇಶ ಪತ್ರವನ್ನು ಸಿಬ್ಬಂದಿ ನೀಡಲು ತೆರಳಿದಾಗ ಮಲ್ಲಿಕಾರ್ಜುನ, ಕಾಲಾವಕಾಶ ಕೇಳಿ ಮನೆಗೆ ತೆರಳಿ ಕ್ರಿಮಿನಾಶಕ ಸೇವಿಸಿದರು. ಅದಕ್ಕೂ ಮುನ್ನ ಕಾರ್ಮಿಕ ಸಂಘಟನೆಯ ಮುಖಂಡರಿಗೆ ಕರೆ ಮಾಡಿ, ವಜಾ ಆದೇಶದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು ಎಂದು ಮುಖಂಡ ಆದಿಮೂರ್ತಿ ತಿಳಿಸಿದರು.

ADVERTISEMENT

ಮಲ್ಲಿಕಾರ್ಜುನ ಅವರಿಂದ ಹೇಳಿಕೆ ಪಡೆಯಲು ಕೌಲ್‌ಬಜಾರ್‌ ಠಾಣೆಯ ಪೊಲೀಸರು ಆಸ್ಪತ್ರೆಯಲ್ಲಿ ಬುಧವಾರ ಮಧ್ಯಾಹ್ನ ಕಾಯುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.