
ಬಳ್ಳಾರಿ: ‘ವಿದ್ಯಾರ್ಥಿಗಳಿಗೆ ಡ್ರಗ್ಸ್ ಪೂರೈಕೆಯಾಗುತ್ತಿದೆ’ ಎಂದು ಆರೋಪಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ನ ಕಾರ್ಯಕರ್ತರು ಶುಕ್ರವಾರ ನಗರದ ‘ಪ್ಯುಪಿಲ್ ಟ್ರೀ’ ಎಂಬ ಶಾಲೆಯಲ್ಲಿ ಗಲಾಟೆ ನಡೆಸಿದರು.
ನಗರದ ಹೊರವಲಯದ ತಾಳೂರು ಮುಖ್ಯರಸ್ತೆಯಲ್ಲಿರುವ ಶಾಲೆಯ ಆವರಣಕ್ಕೆ ಮೊದಲಿಗೆ ಗೋಮೂತ್ರ ಹಿಡಿದು ಬಂದಿದ್ದ ಕಾರ್ಯಕರ್ತರು, ಬಳಿಕ ಗೇಟನ್ನು ಬೇಧಿಸಿ ಒಳಹೊಕ್ಕರು. ಹೂಕುಂಡಗಳನ್ನು ಧ್ವಂಸಗೊಳಿಸಿದರು. ಕಚೇರಿಯ ಕಿಟಕಿ ಗಾಜು, ಚೇರುಗಳನ್ನು ಒಡೆದು ಪುಡಿಗಟ್ಟಿದರು. ಮೇಜುಗಳನ್ನು ಮೊದಲ ಮಹಡಿಯಿಂದ ಕೆಳ ಮಹಡಿಗೆ ಎಸೆದರು. ಸಿಬ್ಬಂದಿ ಸ್ವಲ್ಪದರಲ್ಲೇ ಅಪಾಯದಿಂದ ಪಾರಾದರು.
ವಿಷಯ ತಿಳಿಯುತ್ತಲೇ ಸ್ಥಳಕ್ಕೆ ಬಂದ ಮೂವರು ಸಿಪಿಐಗಳು ಕಾರ್ಯಕರ್ತರನ್ನು ವಶಕ್ಕೆ ಪಡೆದು ಕರೆದೊಯ್ದರು. ‘ನಾವು ಗೋಮೂತ್ರ ಹಾಕಿ ಶಾಲೆಯನ್ನು ಶುದ್ಧ ಮಾಡಲು ಬಂದಿದ್ದೆವು. ಆದರೆ, ನಮ್ಮನ್ನು ಕೆರಳಿಸಲಾಯಿತು. ಪ್ರತಿರೋಧಿಸಿದಾಗ ಹೀಗೆ ಆಗಿದೆ’ ಎಂದು ಎಬಿವಿಪಿ ಕಾರ್ಯಕರ್ತ ಅಭಿಷೇಕ್ ಹಿರೇಮಠ ಮಾಧ್ಯಮಗಳಿಗೆ ಹೇಳಿದರು.
ಬಳಿಕ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪಿ, ‘ಯಾವುದೇ ಮಾಹಿತಿ ಇಲ್ಲದೇ ಎಬಿವಿಪಿ ಪ್ರತಿಭಟನೆ ಆಯೋಜಿಸಿದೆ. ಅಲ್ಲದೇ, ಶಾಲೆಯಲ್ಲಿ ದಾಂಧಲೆ ಮಾಡಿದೆ. ಇದರ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ತಿಳಿಸಿದರು.
ಡ್ರಗ್ಸ್ ಪೂರೈಕೆ ಆರೋಪದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಶಾಲೆ ಆಡಳಿತ ಮಂಡಳಿ ಮುಖ್ಯಸ್ಥ ಪ್ರಭುರಾಜ ಜಾಗೀರದಾರ, ‘ನಾವು ಶಿಕ್ಷಣತಜ್ಞರು ರೌಡಿಗಳಲ್ಲ. ನಮ್ಮ ಶಾಲೆಯಲ್ಲಿ ಡ್ರಗ್ಸ್ ಬಳಕೆ ಇದೆ ಎಂದಾದರೆ ಪೊಲೀಸರಿಗೆ ನೀಡಲಿ. ಅದು ಬಿಟ್ಟು ಹೀಗೆ ದಾಂಧಲೆ ಮಾಡಿದ್ದು ಸರಿಯಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.