
ಬಳ್ಳಾರಿ: ಅಂಚೆ ಇಲಾಖೆಯ ಉತ್ತರ ಕರ್ನಾಟಕ ವಲಯದ 2024-25ನೇ ಸಾಲಿನ ವಿವಿಧ ಪ್ರಕಾರಗಳಲ್ಲಿ ಬಳ್ಳಾರಿ ವಿಭಾಗ 33 ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಈ ಮೂಲಕ ಉತ್ತರ ಕರ್ನಾಟಕ ವಲಯದ ಜಿಲ್ಲೆಗಳಲ್ಲೇ ಅತಿ ಹೆಚ್ಚಿನ ಪ್ರಶಸ್ತಿಗಳನ್ನು ಪಡೆದ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ನ. 21ರಂದು ಗೋಕರ್ಣದಲ್ಲಿ ನಡೆದ ಕರ್ನಾಟಕ ವೃತ್ತ ಮತ್ತು ವಲಯ ಮಟ್ಟದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಉತ್ತರ ಕರ್ನಾಟಕ ವಲಯದ ಅಂಚೆ ವಿಭಾಗಗಳಿಗೆ ಮತ್ತು ಸಿಬ್ಬಂದಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಬಳ್ಳಾರಿ ಅಂಚೆ ವಿಭಾಗವು ಅಂಚೆ ಜೀವ ವಿಮಾ ಯೋಜನೆಯ ವಿಭಾಗದಲ್ಲಿ ಒಟ್ಟು 14 ಪ್ರಶಸ್ತಿಗಳು, ಉಳಿತಾಯ ಯೋಜನೆಗಳ ವಿಭಾಗದಲ್ಲಿ ಒಟ್ಟು 13 ಪ್ರಶಸ್ತಿಗಳು ಮತ್ತು ಬಿ.ಡಿ. (ಬಿಸಿನೆಸ್ ಡೆವಲಪ್ಮೆಂಟ್) ಹಾಗೂ ಇತರೆ ವಿಭಾಗಗಳಲ್ಲಿ ಒಟ್ಟು ಐದು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿತು.
ಬಳ್ಳಾರಿ ಅಂಚೆ ವಿಭಾಗದ ಅಂಚೆ ಅಧೀಕ್ಷಕ ಪಿ.ಚಿದಾನಂದ, ಕೂಡ್ಲಿಗಿ ಉಪ ವಿಭಾಗದ ನಿರೀಕ್ಷಕ ಶಶಿಕುಮಾರ್ ಹಿರೇಮಠ್, ಬಳ್ಳಾರಿ ಪ್ರಧಾನ ಅಂಚೆಪಾಲಕ ಎ.ಜೆ.ಭೀಮಸೇನ, ಹೊಸಪೇಟೆ ಅಂಚೆಪಾಲಕ ಎಂ.ರಾಮರಾವ್, ಕೂಡ್ಲಿಗಿ ಅಂಚೆಪಾಲಕ ಕೆ ವೆಂಕಟೇಶ್, ವಿಮಾ ಅಭಿವೃದ್ಧಿ ಅಧಿಕಾರಿ ಮಾರುತಿ ಉಪ್ಪಾರಟ್ಟಿ, ಹನಸಿ ಶಾಖಾ, ಅಂಚೆಪಾಲಕ ಮೋಹಿದೀನ್, ನಿಡಗುರ್ತಿ ಶಾಖಾ ಅಂಚೆ ಪಾಲಕ ದಾದಾಪೀರ್, ಊರಮ್ಮ ಟೆಂಪಲ್ ಶಾಖಾ ಅಂಚೆ ಪಾಲಕಿ ವಿ. ಜಲಜಾಕ್ಷಿ ಹಾಗೂ ವಿಮಾ ಯೋಜನೆಯ ನೇರ ಪ್ರತಿನಿಧಿ ಮಲ್ಲೇಶ್ ಪ್ರಶಸ್ತಿಗಳನ್ನು ಸ್ವೀಕರಿಸಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಬಳ್ಳಾರಿ ವಿಭಾಗದ ಅಧೀಕ್ಷಕ ಪಿ.ಚಿದಾನಂದ, ‘ಕಳೆದ ಸಾಲಿನಲ್ಲಿ ಅಂಚೆ ಇಲಾಖೆಯ ವಿವಿಧ ಸೇವೆಗಳನ್ನು ಹೆಚ್ಚಿನ ಜನರಿಗೆ ತಲುಪಿಸಲಾಗಿದೆ. ಆದ್ದರಿಂದ ಈ ಹೆಚ್ಚಿನ ಸಂಖ್ಯೆಯ ಪ್ರಶಸ್ತಿಗಳು ಬರಲಿಕ್ಕೆ ಸಾಧ್ಯವಾಯಿತು. ಉತ್ತರ ಕರ್ನಾಟಕ ವಲಯದಲ್ಲಿ ಅತೀ ಹೆಚ್ಚಿನ ಸಂಖ್ಯೆಯ ಪ್ರಶಸ್ತಿಗಳನ್ನು ಬಳ್ಳಾರಿ ವಿಭಾಗ ಪಡೆದಿದೆ. ಇದು ಬಳ್ಳಾರಿ ಅಂಚೆ ವಿಭಾಗಕ್ಕೆ ಹೆಮ್ಮೆಯ ವಿಷಯ’ ಎಂದು ತಿಳಿಸಿದರು.
ಉತ್ತರ ಕರ್ನಾಟಕ ವಲಯದ ಪೋಸ್ಟ್ ಮಾಸ್ಟರ್ ಜನರಲ್ ಚಂದ್ರಶೇಖರ ಕಾಕುಮಾನು ಮತ್ತು ಅಂಚೆ ಸೇವೆಗಳ ನಿರ್ದೇಶಕಿ ವಿ. ತಾರಾ ರವರು ಪ್ರಶಸ್ತಿಗಳನ್ನು ವಿತರಿಸಿದರು. ಉತ್ತರ ಕರ್ನಾಟಕ ವಲಯದ ಎಲ್ಲಾ ಅಂಚೆ ವಿಭಾಗಗಳ ಅಂಚೆ ಅಧಿಕ್ಷಕರು ಹಾಗೂ ಸುಮಾರು 200ಕ್ಕೂ ಹೆಚ್ಚಿನ ಪ್ರಶಸ್ತಿ ವಿಜೇತರು ಈ ಅದ್ದೂರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.