ಕುಡುತಿನಿ (ತೋರಣಗಲ್ಲು): ‘ಕುಡುತಿನಿಯ ರೈತರ ಭೂಮಿಗಳನ್ನು ಕಂಪನಿಗಳು ವಶಪಡಿಸಿಕೊಂಡು 12 ವರ್ಷಗಳಾದರೂ ಕೈಗಾರಿಕೆಗಳನ್ನು ಸ್ಥಾಪಿಸುತ್ತಿಲ್ಲ. ಭೂಸಂತ್ರಸ್ತ ಕುಟುಂಬಗಳಿಗೆ ಉದ್ಯೋಗ ಪರಿಹಾರ ನೀಡುತ್ತಿಲ್ಲ ಎಂದು ಆರೋಪಿಸಿ ಕೈಗೊಂಡ ಹೋರಾಟವು 160ನೇ ದಿನಗಳನ್ನು ಪೂರೈಸಿದೆ. ಇದೂವರೆಗೂ ಸರ್ಕಾರ, ಜಿಲ್ಲಾಡಳಿತವು ಹೋರಾಟದ ಸ್ಥಳಕ್ಕೆ ಆಗಮಿಸದೆ, ಭೂಸಂತ್ರಸ್ತರ ಬೇಡಿಕೆಗಳನ್ನು ಈಡೇರಿಸದೇ, ರೈತರ ವಿರೋಧಿ ನೀತಿ ಅನುಸರಿಸಿದೆ’ ಎಂದು ಭೂಸಂತ್ರಸ್ತ ಹೋರಾಟದ ಸಮಿತಿಯ ಮುಖಂಡ ಕೆ.ನಾಗದೇವಪ್ಪ ಆರೋಪಿಸಿದರು.
ಶನಿವಾರ ಪತ್ರಿಕಾಘೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲಾಡಳಿತವು ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ, ಚರ್ಚಿಸದೇ ಏಕಾಏಕಿ ಪರಿಸರ ಆಲಿಕೆ ಸಭೆ ಏರ್ಪಡಿಸಿರುವುದು ಎಷ್ಟು ಸರಿ? ಭೂಸಂತ್ರಸ್ತರ ಬೇಡಿಕೆಗಳು ಈಡೇರಿದ ನಂತರವೇ ಪರಿಸರ ಆಲಿಕೆ ಸಭೆ ನಡೆಸಬೇಕು ಇಲ್ಲದಿದ್ದರೇ ಜಿಲ್ಲಾಡಳಿತ, ಕಂಪನಿಗಳ ವಿರುದ್ಧ ಉಗ್ರಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.
‘ಭೂಸಂತ್ರಸ್ತರಿಂದ ವಶಪಡಿಸಿಕೊಂಡ ಜಮೀನುಗಳ ಬೆಲೆ ನಿಗದಿಯಲ್ಲಿ ಭಾರಿ ವಂಚನೆಯಾಗಿದ್ದು, ಅದನ್ನು ಸರ್ಕಾರವು ಶೀಘ್ರವಾಗಿ ಸರಿಪಡಿಸಬೇಕು. ಜಮೀನುಗಳಿಗೆ ಮರು ಬೆಲೆಯನ್ನು ನಿಗದಿ ಪಡಿಸಿ ಭೂಪರಿಹಾರವನ್ನು ನೀಡಬೇಕು’ ಎಂದು ಒತ್ತಾಯಿಸಿದರು.
‘ಪರಿಸರ ಆಲಿಕೆ ಸಭೆಯಲ್ಲಿ ಸ್ಥಳೀಯ ಪರಿಸರವಾದಿಗಳಿಗೆ, ಭೂಸಂತ್ರಸ್ತರಿಗೆ ಹಾಗೂ ಸ್ಥಳೀಯ ಸಂಘಟನೆಗಳ ಅಭಿಪ್ರಾಯಗಳಿಗೆ ಅವಕಾಶ ನೀಡಬೇಕೆ ಹೊರತು ಹೊರ ರಾಜ್ಯ, ಜಿಲ್ಲೆಯ ಪರಿಸರವಾದಿಗಳಿಗೆ, ಸಂಘಟನೆಗಳಿಗೆ ಅವಕಾಶ ನೀಡಬಾರದು. ಸರ್ಕಾರವು ಆಲಿಕೆ ಸಭೆ ನಡೆಸಿದ ತಕ್ಷಣ ಕೈಗಾರಿಕೆಗಳನ್ನು ಸ್ಥಾಪಿಸಿಲು ಮುಂದಾಗಬೇಕು. ಕಾಟಾಚಾರಕ್ಕೆ ಸಭೆ ನಡೆಸಿ, ಸುಳ್ಳು ಭರವಸೆ ನೀಡಿ, ಮತ್ತೆ ರೈತರನ್ನು ವಂಚಿಸುವ, ಮೋಸಮಾಡುವ ಕೆಲಸ ಮಾಡಬಾರದು’ ಎಂದು ಹೋರಾಟಗಾರ ಟಿ.ಕೆ.ಕಾಮೇಶ್ ಆಕ್ರೋಶ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಂಜಿನಪ್ಪ, ತಿಪ್ಪೇಸ್ವಾಮಿ, ಪಾಂಡು, ದೊಡ್ಡಬಸಪ್ಪ, ತಿಮ್ಮನಗೌಡ, ಹನುಂತಪ್ಪ, ಮೌನೇಶ್, ಹುಲಿಗೆಮ್ಮ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.