ADVERTISEMENT

ಮನೆಯಲ್ಲೇ ಬಸವಣ್ಣನ ಪೂಜೆ, ಪ್ರಾರ್ಥನೆ

ಶ್ರದ್ಧಾ, ಭಕ್ತಿಯಿಂದ ಸರಳವಾಗಿ ಬಸವ ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 14 ಮೇ 2021, 10:19 IST
Last Updated 14 ಮೇ 2021, 10:19 IST
ಹೊಸಪೇಟೆ ತಾಲ್ಲೂಕು ಕಚೇರಿಯಲ್ಲಿ ಶುಕ್ರವಾರ ತಹಶೀಲ್ದಾರ್‌ ಎಚ್‌. ವಿಶ್ವನಾಥ್‌ ಅವರು ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು
ಹೊಸಪೇಟೆ ತಾಲ್ಲೂಕು ಕಚೇರಿಯಲ್ಲಿ ಶುಕ್ರವಾರ ತಹಶೀಲ್ದಾರ್‌ ಎಚ್‌. ವಿಶ್ವನಾಥ್‌ ಅವರು ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು   

ಹೊಸಪೇಟೆ (ವಿಜಯನಗರ): ನಗರ ಸೇರಿದಂತೆ ತಾಲ್ಲೂಕಿನ ಹಲವು ಕಡೆಗಳಲ್ಲಿ ಶುಕ್ರವಾರ ಬಸವೇಶ್ವರರ ಜಯಂತಿ ಶ್ರದ್ಧಾ, ಭಕ್ತಿ ಹಾಗೂ ಸರಳ ರೀತಿಯಲ್ಲಿ ಆಚರಿಸಲಾಯಿತು.

ದೇವಸ್ಥಾನ, ಮಠಗಳಲ್ಲಿ ಸಾಂಕೇತಿಕ ಆಚರಣೆಗಷ್ಟೇ ಬಸವ ಜಯಂತಿ ಸೀಮಿತವಾಗಿತ್ತು. ಬಸವ ಭಕ್ತರು ಮನೆಯಲ್ಲೇ ಸರಳವಾಗಿ ಪೂಜೆ, ಪ್ರಾರ್ಥನೆ ನೆರವೇರಿಸಿ ಜಯಂತಿ ಆಚರಿಸಿದರು.

ನಗರದ ಬಸವೇಶ್ವರ ಬಡಾವಣೆ, ಚಿತ್ತವಾಡ್ಗಿ, ಪಟೇಲ್‌ ನಗರ, ಸ್ಟೇಶನ್‌ ರಸ್ತೆ, ಅಮರಾವತಿ, ಆಕಾಶವಾಣಿ ಸೇರಿದಂತೆ ಇತರೆ ಬಡಾವಣೆಗಳಲ್ಲಿ ಜನ ಅವರ ಮನೆಯಲ್ಲೇ ಬಸವ ಜಯಂತಿ ಆಚರಿಸಿದರು. ವಿವಿಧೆಡೆ ಬಸವ ಜಯಂತಿ ಆಚರಿಸಿದ ವಿವರ ಇಂತಿದೆ.

ADVERTISEMENT

ತಾಲ್ಲೂಕು ಆಡಳಿತ

ನಗರದ ತಾಲ್ಲೂಕು ಕಚೇರಿಯಲ್ಲಿ ಏರ್ಪಡಿಸಿದ್ದ ಸರಳ ಕಾರ್ಯಕ್ರಮದಲ್ಲಿ ತಹಶೀಲ್ದಾರ್‌ ಎಚ್‌. ವಿಶ್ವನಾಥ್‌ ಅವರು ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪನಮನ ಸಲ್ಲಿಸಿದರು. ಗ್ರೇಡ್– 2 ತಹಶೀಲ್ದಾರ್ ಮೇಘನಾ, ಶಿರಸ್ತೇದಾರ ಶ್ರೀಧರ್, ರಮೇಶ್, ಆಹಾರ ಇಲಾಖೆಯ ಮಂಜುನಾಥ್, ಬಸವ ಬಳಗದ ಸದಸ್ಯ ಬಸವಲಿಂಗಪ್ಪ ಇದ್ದರು.

ಕೊಟ್ಟೂರುಸ್ವಾಮಿ ಮಠ

ನಗರದ ಕೊಟ್ಟೂರು ಸ್ವಾಮಿ ಮಠದಲ್ಲಿ ಬಸವೇಶ್ವರರ ಭಾವಚಿತ್ರಕ್ಕೆ ಸಂಗನಬಸವ ಸ್ವಾಮೀಜಿ, ಮುಪ್ಪಿನ ಬಸವಲಿಂಗ ದೇವರು ಹಾಲ್ಕೆರೆ ಪೂಜೆ ನೆರವೇರಿಸಿದರು.

ಸಂಗನಬಸವ ಸ್ವಾಮೀಜಿ ಮಾತನಾಡಿ, ‘ಮಠದಿಂದ ಪ್ರತಿವರ್ಷ ಬಸವ ಜಯಂತಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಸಾಮೂಹಿಕ ವಿವಾಹ, ಪ್ರವಚನ ಸೇರಿದಂತೆ ಇತರೆ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಆದರೆ, ಕೋವಿಡ್‌ನಿಂದ ಎರಡು ವರ್ಷಗಳಿಂದ ಸರಳವಾಗಿ ಜಯಂತಿ ಆಚರಿಸಲಾಗುತ್ತಿದೆ’ ಎಂದರು.

‘ಕೊರೊನಾ ಮಹಾಮಾರಿಯಿಂದ ಇಡೀ ಜಗತ್ತು ಸಂಕಷ್ಟಕ್ಕೆ ಒಳಗಾಗಿದೆ. ಈ ರೋಗ ದೂರವಾಗುವವರೆಗೆ ಪ್ರತಿಯೊಬ್ಬರೂ ಮಾಸ್ಕ್‌ ಧರಿಸಿ, ಅಂತರ ಕಾಯ್ದುಕೊಂಡು ವ್ಯವಹರಿಸಬೇಕು. ಬಡವರು, ನಿರ್ಗತಿಕರಿಗೆ ಕೈಲಾದಷ್ಟು ಸಹಾಯ ಮಾಡಬೇಕು. ಆದಷ್ಟು ಬೇಗ ಈ ರೋಗ ದೂರವಾಗಿ ಜನಜೀವನ ಸಹಜ ಸ್ಥಿತಿಗೆ ಮರಳಬೇಕು’ ಎಂದು ಹಾರೈಸಿದರು.

ಶರಣಯ್ಯ ಸ್ವಾಮಿ, ಶರಣು ಸ್ವಾಮಿ, ಕೊಟ್ಟೂರು ದೇಶಿಕರು ದರೂರು, ಕುಮಾರಸ್ವಾಮಿ, ಎಚ್‌.ಎಂ. ಜಂಬಯ್ಯ ಇತರರಿದ್ದರು.

ಇಷ್ಟಲಿಂಗ ಸಂಶೋಧನಾ ಕೇಂದ್ರ

ತಾಲ್ಲೂಕಿನ ಧರ್ಮದಗುಡ್ಡ ಬಳಿಯ ಇಷ್ಟಲಿಂಗ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದಲ್ಲಿ ಸರಳವಾಗಿ ಬಸವ ಜಯಂತಿ ಆಚರಿಸಲಾಯಿತು. ಡಾ. ಅಜಯಕುಮಾರ್‌ ತಾಂಡೂರು, ಬಸವರಾಜ, ಬಸವರಾಜ ಮಾವಿನಹಳ್ಳಿ, ಓಂಪ್ರಕಾಶ, ಶ್ರೀನಿವಾಸ ಇದ್ದರು.

ಅಕ್ಕನ ಬಳಗ

ನಗರದ ಬಸವೇಶ್ವರ ಬಡಾವಣೆಯ ಅಕ್ಕಮಹಾದೇವಿ ಭವನದಲ್ಲಿ ಅಕ್ಕನ ಬಳಗ ಹಾಗೂ ಬಸವ ಬಳಗದಿಂದ ಬಸವ ಜಯಂತಿ ಆಚರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.