ಬಳ್ಳಾರಿ: ‘ಜೀನ್ಸ್ ಗಾರ್ಮೆಂಟ್ ಕಾರ್ಮಿಕರು ಜಾಗೃತರಾಗಿ ಸರ್ಕಾರದ ಸೌಲಭ್ಯ ಪಡೆದುಕೊಳ್ಳಬೇಕು’ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಎನ್. ಹೊಸಮನೆ ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜೀನ್ಸ್ ಗಾರ್ಮೆಂಟ್ ಕಮ್ಯುನಿಟಿ ಡೆವೆಲಪ್ಮೆಂಟ್ ಅಸೋಸಿಯೇಷನ್, ರೀಚ್ ಸಂಸ್ಥೆ, ಕಾನೂನು ಇಲಾಖೆ, ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಮಕ್ಕಳ ಮತ್ತು ರಕ್ಷಣಾ ಘಟಕದ ಆಶ್ರಯದಲ್ಲಿ ನಗರದ ಬಿಡಿಎಸ್ ತರಬೇತಿ ಕೇಂದ್ರದಲ್ಲಿ ಈಚೆಗೆ ನಡೆದ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಬಳ್ಳಾರಿ ಜಿಲ್ಲೆಯಲ್ಲಿ ಮಹಿಳಾ ಕಾರ್ಮಿಕರಿಗೆ, ವಿಶೇಷವಾಗಿ ಜೀನ್ಸ್ ಗಾರ್ಮೆಂಟ್ಗಳಲ್ಲಿ ದುಡಿಯುವ ಮಹಿಳಾ ಕಾರ್ಮಿಕರು ಕಾರ್ಮಿಕ ಇಲಾಖೆಯಲ್ಲಿ ನೋಂದಣೆಯಾಗಿ ಸರ್ಕಾರದ ಸೌಲಭ್ಯ ಪಡೆಯಬೇಕು’ ಎಂದು ಕರೆ ನೀಡಿದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಸಿದ್ದಪ್ಪ ಖೈನೂರ ಮಾತನಾಡಿ, ‘ಅಸಂಘಟಿತ ವಲಯದಲ್ಲಿ ದುಡಿಯುವವರಿಗಾಗಿ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯನ್ನು ಸ್ಥಾಪಿಸಿದೆ. ಈ ಮಂಡಳಿಯಲ್ಲಿ ನೋಂದಣಿಯಾಗುವ ಕಾರ್ಮಿಕರಿಗೆ ಇಲಾಖೆಯು ಹಲವಾರು ಸಾಮಾಜಿಕ ಭದ್ರತೆಗಳನ್ನು ಒದಗಿಸುತ್ತದೆ’ ಎಂದರು.
ಜಿಲ್ಲಾ ಕಾರ್ಮಿಕ ಇನ್ಸ್ಪೆಕ್ಟರ್ ರಮೇಶ್ ಅವರು ಕಾರ್ಮಿಕ ಇಲಾಖೆಯಲ್ಲಿ ಸೌಲಭ್ಯ ಪಡೆಯಲು ಅನುಸರಿಸಬೇಕಾದ ಕ್ರಮಗಳ ಮಾಹಿತಿ ನೀಡಿದರು. ಜೀನ್ಸ್ ಗಾರ್ಮೆಂಟ್ನ ಮಹಿಳಾ ಕಾರ್ಮಿಕರಿಗೆ ಟೈಲರಿಂಗ್ ಕಾರ್ಡ್ಗಳನ್ನು ವಿತರಿಸಲಾಯಿತು.
ಜಿಲ್ಲಾ ಬಾಲಕಾರ್ಮಿಕ ಯೋಜನಾಧಿಕಾರಿ ಮೌನೇಶ್ ಮಾತನಾಡಿದರು. ರೀಚ್ ಸಂಸ್ಥೆಯ ಜಿ.ಎನ್.ಸಿಂಹ, ಜೀನ್ಸ್ ಗಾರ್ಮೆಂಟ್ ಕಮ್ಯುನಿಟಿ ಡೆವೆಲಪ್ಮೆಂಟ್ ಅಸೋಸಿಯೇಷನ್ನ ಅಧ್ಯಕ್ಷೆ ಸುನೀತಾ, ಪದಾಧಿಕಾರಿಗಳಾದ ಜಾನ್ ಸುಧಾಕರ್, ರೆಹಮಾನ್, ಸತ್ಯನಾರಾಯಣ, ಗೌಷ್, ರೀಚ್ ಸಂಸ್ಥೆಯ ಜಿಲ್ಲಾ ಸಂಯೋಜಕ ಹನುಮಂತಪ್ಪ, ಪದಾಧಿಕಾರಿಗಳಾದ ಲಕ್ಮೀದೇವಿ, ಬಸಮ್ಮ, ಡಾ.ಎರ್ರಿಸ್ವಾಮಿ ಎಚ್. ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.