ADVERTISEMENT

ಬಳ್ಳಾರಿ | ರಾಜಕಾರಣಿಗಳಿಗೆ ‘ಛೀಮಾರಿ ಸ್ವಾಗತ’ ನೀಡಿ: ಕುರುಬೂರು ಶಾಂತಕುಮಾರ್‌

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2024, 13:07 IST
Last Updated 28 ಮಾರ್ಚ್ 2024, 13:07 IST
   

ಬಳ್ಳಾರಿ: ‘ಬರಗಾಲದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರ ಸಮಸ್ಯೆಗಳ ಕಡೆಗೆ ಗಮನಹರಿಸದ ರಾಜಕೀಯ ಪಕ್ಷಗಳ ನಾಯಕರಿಗೆ ಹಳ್ಳಿಗಳಲ್ಲಿ ರೈತರು ಛೀಮಾರಿ ಸ್ವಾಗತ ನೀಡಬೇಕು’ ಎಂದು ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌ ಹೇಳಿದರು.

ಬಳ್ಳಾರಿ ನಗರದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಕುಡಿಯುವ ನೀರಿಗೆ ತತ್ವಾರ ಎದುರಾಗಿದೆ. ದನಕರುಗಳಿಗೆ ಮೇವಿಲ್ಲ. 40 ಲಕ್ಷ ಕೃಷಿ ಬೋರ್‌ವೆಲ್‌ಗಳ ಪೈಕಿ 10 ಲಕ್ಷ ಬೋರ್‌ವೆಲ್‌ಗಳ ಬತ್ತಿವೆ. ವಿದ್ಯುತ್ ಸಮಸ್ಯೆ ಇದೆ. ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜಕಾರಣಿಗಳು ಚುನಾವಣೆಯ ಗುಂಗಿನಲ್ಲಿದ್ದು, ಪ್ರಚಾರಕ್ಕೆಮದು ಹಳ್ಳಿಗಳಿಗೆ ಬಂದರೆ ‘ಛೀಮಾರಿ ಸ್ವಾಗತ’ ನೀಡಬೇಕು ಎಂದು ಮನವಿ ಮಾಡಿದರು.

‘ಬರಗಾಲದಲ್ಲಿ ರೈತರ ಸಾಲ ವಸೂಲಿ ಮಾಡಬಾರದು ಎಂದು ಎಲ್ಲ ಬ್ಯಾಂಕ್‌, ಸಹಕಾರ ಸಂಘಗಳಿಗೆ ಸರ್ಕಾರದ ಆದೇಶ ನೀಡಿದ್ದರು, ಬ್ಯಾಂಕುಗಳು ರೈತರನ್ನು ಸುಲಿಗೆ ಮಾಡುತ್ತಿವೆ. ಈ ಕೂಡಲೇ ಸಾಲ ವಸೂಲಾತಿ ನಿಲ್ಲಬೇಕು‘ ಎಂದು ಆಗ್ರಹಿಸಿದರು.

ADVERTISEMENT

‘ಕನಿಷ್ಠ ಬೆಂಬಲ ಜಾರಿಯೂ ಸೇರಿದಂತೆ ರೈತರಿಗೆ ತಾನೇ ನೀಡಿದ್ದ ಹಲವು ಭರವಸೆ ಮರೆತಿರುವ ಕೇಂದ್ರ ಸರ್ಕಾರ ದೆಹಲಿಯಲ್ಲಿ ರೈತರ ಗೋಲಿಬಾರ್‌ ಮಾಡುತ್ತಿದೆ. ಶುಭಕರಣ್ ಸಿಂಗ್ ಎಂಬ ರೈತನನ್ನು ಕೇಂದ್ರ ಸರ್ಕಾರ ಕೊಲೆ ಮಾಡಿದೆ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.