ADVERTISEMENT

ಬಳ್ಳಾರಿ | ವಿವೇಚನಾ ರಹಿತ ನಿರ್ಧಾರ: ಜನ ಹೈರಾಣ

ರಾಯಲ್‌ ವೃತ್ತದಲ್ಲಿ ಏಕಾಏಕಿ ಸಂಚಾರ ನಿರ್ಬಂಧ | ಕೆ.ಸಿ ರಸ್ತೆ, ಹಳೇ ಕೋರ್ಟ್‌ ರಸ್ತೆಗಳಲ್ಲಿ ಸಂಚಾರ ದಟ್ಟಣೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2025, 5:49 IST
Last Updated 13 ಜುಲೈ 2025, 5:49 IST
ಬಳ್ಳಾರಿ ನಗರದ ಗಡಿಗಿ ಚೆನ್ನಪ್ಪ (ರಾಯಲ್‌) ವೃತ್ತದಲ್ಲಿ ಸಂಚಾರ ನಿರ್ಬಂಧಿಸಿರುವುದು 
ಬಳ್ಳಾರಿ ನಗರದ ಗಡಿಗಿ ಚೆನ್ನಪ್ಪ (ರಾಯಲ್‌) ವೃತ್ತದಲ್ಲಿ ಸಂಚಾರ ನಿರ್ಬಂಧಿಸಿರುವುದು    

ಬಳ್ಳಾರಿ: ಒಂದು ವಾರ ಸಂಚಾರಕ್ಕೆ ಮುಕ್ತ, ಇನ್ನೊಂದು ವಾರ ಸಂಚಾರ ನಿರ್ಬಂಧ... ಇದು ಬಳ್ಳಾರಿ ಹೃದಯ ಭಾಗದಲ್ಲಿ ಅಭಿವೃದ್ಧಿಗೊಳ್ಳುತ್ತಿರುವ ಗಡಿಗಿ ಚೆನ್ನಪ್ಪ (ರಾಯಲ್‌) ಸರ್ಕಲ್‌ನ ಹಣೆಬರಹ.

ಕಾಮಗಾರಿ ನಡೆಸುತ್ತಿರುವವರ, ಅವರ ತಾಳಕ್ಕೆ ಕುಣಿಯುತ್ತಿರುವ ಅಧಿಕಾರಿಗಳ ಬೇಜವಾಬ್ದಾರಿ, ವಿವೇಚನಾ ರಹಿತ ನಿರ್ಧಾರಗಳಿಂದಾಗಿ ಬಳ್ಳಾರಿ ನಾಗರಿಕರು ನಿತ್ಯ ಸಂಚಾರ ದಟ್ಟಣೆ ಸಮಸ್ಯೆ ಎದುರಿಸುವಂತಾಗಿದೆ.

ಹೇಗೆಂದರೆ ಹಾಗೇ ನುಗ್ಗುವ, ಸಂಚಾರ ನಿಯಮಗಳ ಜ್ಞಾನವಿಲ್ಲದ ವಾಹನ ಸವಾರರಿರುವ ನಗರದಲ್ಲಿ, ಹೀಗೆ ಏಕಾಏಕಿ ಸಂಚಾರ ನಿರ್ಬಂಧ ಮಾಡಿರುವುದರಿಂದ ನಗರದ ತುಂಬೆಲ್ಲ ಟ್ರಾಫಿಕ್‌ ಜಾಮ್‌ ಸಮಸ್ಯೆ ಉಂಟಾಗಿದ್ದು, ಜನ ತೀವ್ರ ತೊಂದರೆ ಎದುರಿಸುವಂತಾಗಿದೆ.

ADVERTISEMENT

ರಾಯಲ್‌ ಸರ್ಕಲ್‌ನಲ್ಲಿ ಸಂಚಾರ ಬಂದ್‌ ಮಾಡುವುದಕ್ಕೂ ಮೊದಲು ಪೊಲೀಸ್‌ ಇಲಾಖೆಯಾಗಲಿ, ಜಿಲ್ಲಾಧಿಕಾರಿಯಾಗಲಿ ಮಾರ್ಗ ಬದಲಾವಣೆ ಮಾಡಿರುವ ಕುರಿತು ಸಾರ್ವಜನಿಕರಿಗೆ ಮಾಹಿತಿ ಒದಗಿಸಬೇಕಾಗಿತ್ತು. ಆದರೆ, ಯಾವುದೇ ಮಾಹಿತಿ ಇಲ್ಲದೇ ಏಕಾಏಕಿ ಸರ್ಕಲ್‌ ಸುತ್ತ ಬ್ಯಾರಿಕೇಡ್‌ ಹಾಕಿ ಸಂಚಾರ ತಡೆಯಲಾಗಿದೆ.

ಹೀಗಾಗಿ, ಓಣಿಯಂಥ ಕೆಸಿ ರಸ್ತೆ, ಕೋರ್ಟ್‌ ರಸ್ತೆ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ತೀವ್ರ ಸಂಚಾರ ದಟ್ಟಣೆ ಉಂಟಾಗಿದೆ. ಕಿರಿದಾದ ಈ ರಸ್ತೆಗಳಲ್ಲಿ ಬೃಹತ್‌ ಟ್ರಕ್‌ಗಳು, ಬಸ್‌ಗಳು, ಓಡಾಡುತ್ತಿದ್ದು, ಸಮಸ್ಯೆ ಮತ್ತಷ್ಟು ಜಟಿಲವಾಗಿದೆ.

ಕೆ.ಸಿ ರಸ್ತೆ ನೋಡಿದ್ದಾರಾ ಅಧಿಕಾರಿಗಳು?: ರಾಯಲ್‌ ಸರ್ಕಲ್‌ ಬಂದ್‌ ಮಾಡುವುದಕ್ಕೂ ಮೊದಲು ಅಧಿಕಾರಿಗಳು ಕೆ.ಸಿ ರಸ್ತೆಯ ಪರಿಸ್ಥಿತಿಯನ್ನು ನೋಡಬೇಕಿತ್ತು. ಸಂಗಂ ಸರ್ಕಲ್‌ನಿಂದ ಕೆ.ಸಿ ರಸ್ತೆಗೆ ತೆರಳುವ ಮಾರ್ಗದಲ್ಲಿ ಚರಂಡಿಯೊಂದರ ಸ್ಲ್ಯಾಬ್‌ ಒಡೆದು ನಡು ರಸ್ತೆಯಲ್ಲೇ ದೊಡ್ಡ ಗುಂಡಿ ಸೃಷ್ಟಿಯಾಗಿದೆ.

ಮೊದಲೇ ಕಿರಿದಾದ ರಸ್ತೆ, ಅದರ ನಡುವೆ ಗುಂಡಿ. ಎಂದಿನ ಸಂಚಾರವನ್ನೇ ತಾಳಿಕೊಳ್ಳದ ರಸ್ತೆಗೆ ಈಗ ನಗರದ ವಾಹನಗಳನ್ನೆಲ್ಲ ತಿರುಗಿಸಲಾಗಿದೆ. ಪರಿಸ್ಥಿತಿಯನ್ನು ಸರಿಯಾಗಿ ಅವಲೋಕನ ಮಾಡಿದಿದ್ದರೆ ಈ ರಸ್ತೆಯಲ್ಲಿ ಸಂಚಾರವನ್ನು ತಿರುಗಿಸುವ ಕಾರ್ಯಕ್ಕೆ ಅಧಿಕಾರಿಗಳು ಕೈ ಹಾಕುತ್ತಿರಲಿಲ್ಲ. ಮನಸೋ ಇಚ್ಛೆ ನಿರ್ಧಾರಗಳಿಂದಾಗಿ ಈಗ ಜನ ತೊಂದರೆ ಅನುಭವಿಸುವಂತಾಗಿದೆ ಎಂದು ನಾಗರಾಜ್‌ ಎಂಬುವವರು ದೂರಿದ್ದಾರೆ.

ಸದ್ಯ ಭಾರೀ ದಟ್ಟಣೆ ಇರುವ ಕೆ.ಸಿ ರಸ್ತೆಯ ಉದ್ದಕ್ಕೂ ದೊಡ್ಡ ದೊಡ್ಡ ಕುಳಿಗಳು ಬಿದ್ದಿವೆ. ಕನಿಷ್ಠ ತೇಪೆ ಹಾಕುವ ಕಾರ್ಯವನ್ನೂ ಜಿಲ್ಲಾಡಳಿತ, ಸ್ಥಳೀಯ ಆಡಳಿತ ಮಾಡಿಲ್ಲ.  ಸ್ವತಃ ಜಿಲ್ಲಾಧಿಕಾರಿಯೇ ನಿತ್ಯ ಈ ರಸ್ತೆಯಲ್ಲಿ ಓಡಾಡುತ್ತಿದ್ದರೂ, ರಸ್ತೆಯ ಅವ್ಯವಸ್ಥೆ ಗಮನಿಸಿದಂತೆ ಕಾಣುತ್ತಿಲ್ಲ.

ಬಳ್ಳಾರಿ ನಗರದ ಕೆ.ಸಿ ರಸ್ತೆಯ ಮಧ್ಯ ಭಾಗದಲ್ಲಿ ಚರಂಡಿಯೊಂದರ ಸ್ಲ್ಯಾಬ್‌ ಕುಸಿದು ಗುಂಡಿ ಸೃಷ್ಟಿಯಾಗಿರುವುದು

‘ಕ್ಲಾಕ್‌ ಟವರ್‌’ ಎಂಬ ಬಿಳಿಯಾನೆ

ನಗರದ ಗಡಿಗಿ ಚೆನ್ನಪ್ಪ (ರಾಯಲ್‌) ವೃತ್ತದಲ್ಲಿ ಕ್ಲಾಕ್‌ ಟವರ್‌ ನಿರ್ಮಾಣ ಕಾಮಗಾರಿ ಆರಂಭಿಸಿ ವರ್ಷಗಳು ಉರುಳುತ್ತಿವೆ. ಅಂದಿನಿಂದಲೂ ಒಂದಿಲ್ಲೊಂದು ಸಮಸ್ಯೆ ಎದುರಿಸುತ್ತಿರುವ ನಾಗರಿಕರು ಇತ್ತೀಚೆಗಂತೂ ರೋಸಿ ಹೋಗಿದ್ದಾರೆ. ಇದರ ವಿರುದ್ಧ ಬಳ್ಳಾರಿ ನಾಗರಿಕ ಹೋರಾಟ ಸಮಿತಿ (ಬಿಎನ್‌ಎಚ್‌ಎಸ್‌) ಹೋರಾಟ ಮಾಡಿದೆ. ವರ್ಷಗಳಾದರೂ ಮುಗಿಯದ ಜನರನ್ನು ಬಾಧಿಸುತ್ತಲೇ ಇರುವ ಭಾರಿ ಜಾಗ ಆಕ್ರಮಿಸಿರುವ ಉದ್ಘಾಟನೆ ಭಾಗ್ಯ ಕಾಣದೇ ಪ್ರತಿಷ್ಠೆಗೆ ಈಡಾಗಿರುವ ಈ ಕ್ಲಾಕ್‌ ಟವರ್‌ ‘ಬಳ್ಳಾರಿಯ ಬಿಳಿಯಾನೆ’ ಎಂಬಂತೆ ಆಗಿದೆ ಎಂದು ನಾಗರಿಕರು ದೂರಿದ್ದಾರೆ.

ಬಳ್ಳಾರಿ ನಗರದ ಗಡಿಗಿ ಚೆನ್ನಪ್ಪ (ರಾಯಲ್‌) ವೃತ್ತದಲ್ಲಿ ಸಂಚಾರ ನಿರ್ಬಂಧಿಸಿರುವುದರಿಂದ ಕೆ.ಸಿ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.