ADVERTISEMENT

‘ಭಗತ್‌ ವಿಚಾರಧಾರೆ ಸ್ಪೂರ್ತಿಯಾಗಲಿ’

ಜಿಲ್ಲೆಯಲ್ಲಿ ಕ್ರಾಂತಿಕಾರಿ ಹೋರಾಟಗಾರ ಭಗತ್‌ ಸಿಂಗ್‌ ಜನ್ಮದಿನ ಆಚರಣೆ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2024, 16:10 IST
Last Updated 28 ಸೆಪ್ಟೆಂಬರ್ 2024, 16:10 IST
ಬಳ್ಳಾರಿ ನಗರದ ಶಾಲೆಯೊಂದರ ವಿದ್ಯಾರ್ಥಿನಿಯರು ಭಗತ್‌ ಸಿಂಗ್‌ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಭ್ರಮಿಸಿದರು
ಬಳ್ಳಾರಿ ನಗರದ ಶಾಲೆಯೊಂದರ ವಿದ್ಯಾರ್ಥಿನಿಯರು ಭಗತ್‌ ಸಿಂಗ್‌ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಭ್ರಮಿಸಿದರು   

ಬಳ್ಳಾರಿ: ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ  (ಎಐಎಂಎಸ್‌ಎಸ್‌) ವತಿಯಿಂದ ಶನಿವಾರ ನಗರದಲ್ಲಿ ಕ್ರಾಂತಿಕಾರಿ ಹೋರಾಟಗಾರ ಶಹೀದ್ ಭಗತ್ ಸಿಂಗ್ ರವರ 117ನೇ ವರ್ಷದ ಜನ್ಮದಿನ ಆಚರಿಸಲಾಯಿತು. 

ಪೂಜಾ ನರ್ಸಿಂಗ್ ಕಾಲೇಜಿನಲ್ಲಿ ಜನ್ಮದಿನ ಕಾರ್ಯಕ್ರಮ ನಡೆಯಿತು.

ಈ ವೇಳೆ ಮಾತನಾಡಿದ ಎಂಎಸ್‌ಸಿಯ (ಮೆಡಿಕಲ್ ಸರ್ವಿಸ್ ಸೆಂಟರ್) ಜಿಲ್ಲಾ ಸಲಹೆಗಾರ ಡಾ.ಎನ್ ಪ್ರಮೋದ್ ‘ರಾಜಿ ರಹಿತ ಪಂಥದ ನಾಯಕ ಭಗತ್ ಸಿಂಗ್. ಭಗತ್‌ ಕೇವಲ ಒಂದು ಹೆಸರಲ್ಲ, ಅವರೊಬ್ಬ ಮಹಾನ್ ಚೇತನ. ಸ್ವಾತ್ರಂತ್ರ‍್ಯ ಹೋರಾಟದಲ್ಲಿ ಅವರ ಪಾತ್ರ ಅತ್ಯಂತ ಮಹತ್ವದ್ದು. ಬ್ರಿಟಿಷರಿಂದ ಸ್ವಾತಂತ್ರ‍್ಯ ಸಿಗುವುದು ಮಾತ್ರವಲ್ಲ, ದೇಶಕ್ಕೆ ಸಂಪೂರ್ಣ ಸ್ವಾತಂತ್ರ‍್ಯ ಬೇಕು ಎನ್ನುವುದು ಅವರ ನಿಲುವಾಗಿತ್ತು’ ಎಂದರು.

ADVERTISEMENT

‘ಭಗತ್ ಸಿಂಗ್ ಕನಸು ಇನ್ನೂ ನನಸಾಗಿಲ್ಲ. ಹಸಿವು, ಬಡತನ, ನಿರುದ್ಯೋಗ, ಮಹಿಳೆಯರ ಮೇಲಿನ ದೌರ್ಜನ್ಯ ನಡೆಯುತ್ತಲೇ ಇದೆ. ಈ ಹೊತ್ತಿನಲ್ಲಿ ಆ ಮಹಾನ್ ವ್ಯಕ್ತಿಯ ವಿಚಾರಗಳನ್ನು ಅರಿಯವುದು ಅಗತ್ಯ. ಸಮಾಜದಲ್ಲಿ ನಡೆಯುವ ಅನ್ಯಾಯಗಳ ವಿರುದ್ಧ ನಾವೆಲ್ಲರೂ ಧ್ವನಿ ಎತ್ತುವಂತಾಗಬೇಕ’ ಎಂದರು. 

ಕಾಲೇಜಿನ ಉಸ್ತುವಾರಿ ಪ್ರಚಾರ್ಯ ಸಾಬೀರ್ ಬಾಷಾ ಮಾತನಾಡಿ, ‘ಮಹಾನ್ ವ್ಯಕ್ತಿಗಳ ವಿಚಾರಗಳು ನಮಗೆಲ್ಲಾ ಅವಶ್ಯಕ. ಅವರ ಕನಸನ್ನು ನನಸು ಮಾಡುವ ಆಶಯದೊಂದಿಗೆ ಮುನ್ನಡೆಯೋಣ’ ಎಂದರು.

ಎಐಎಂಎಸ್ಎಸ್ ಜಿಲ್ಲಾ ಘಟಕದ ಅಧ್ಯಕ್ಷೆ ಕೆ.ಎಂ ಈಶ್ವರಿ, ಸಂಘಟನೆಯ ಪದಾಧಿಕಾರಿಗಳಾದ ಸೌಮ್ಯ ಜೆ, ಅಭಿಲಾಷ, ವಿದ್ಯಾವತಿ ಹಾಗೂ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಇದ್ದರು.

ರಾಜಿ ರಹಿತ ಹೋರಾಟಗಾರ

ಬಳ್ಳಾರಿ: ಎಐಡಿಎಸ್‌ಒ ಸಂಘಟನೆಯ ಬಳ್ಳಾರಿ ಜಿಲ್ಲಾ ಸಮಿತಿ ವತಿಯಿಂದ ನಗರದ ವಿಮ್ಸ್ ಮೈದಾನ ಐಟಿಐ ಗ್ರೌಂಡ್ ಹಾಗೂ ಇನ್ನಿತರ ವಾರ್ಡ್‌ಗಳಲ್ಲಿ ಶಾಲಾ ಕಾಲೇಜು ಹಾಸ್ಟೆಲ್‌ಗಳಲ್ಲಿ ಭಗತ್ ಸಿಂಗ್ ಜನ್ಮದಿನ ಆಚರಿಸಲಾಯಿತು.   ಸಂಘಟನೆ ಜಿಲ್ಲಾ ಕಾರ್ಯದರ್ಶಿ ಕಂಬಳಿ ಮಂಜುನಾಥ ಮಾತನಾಡಿ ‘ಶೋಷಿತರು ತಲೆಯೆತ್ತಿ ಜೀವಿಸುವ ಸಮಾಜವಾದಿ ಭಾರತ ನಿರ್ಮಾಣವಾಗಬೇಕು ಎಂಬ ಕನಸು ಕಂಡಿದ್ದ ಭಗತ್‌ ಸಿಂಗ್‌  ಬ್ರಿಟಿಷರ ವಿರುದ್ಧ ರಾಜೀರಹಿತ ಹೋರಾಟ ನಡೆಸಿ ನಗುನಗುತ್ತಲೇ ನೇಣುಗಂಬವೇರಿದ್ದರು. ಸಮಾಜದಲ್ಲಿ ಶಿಕ್ಷಣ ವ್ಯಾಪಾರೀಕರಣ ನಿರುದ್ಯೋಗ ಜಾತಿ ಹಾಗೂ ಕೋಮುವಾದದ ವಿರುದ್ಧ ದ್ವನಿ ಎತ್ತಲು ಭಗತ್ ಸಿಂಗ್ ವಿಚಾರಗಳು ಸ್ಫೂರ್ತಿಯಾಗಬೇಕಿದೆ’ ಎಂದರು.  ಎಐಡಿಎಸ್‌ಒ ಜಿಲ್ಲಾ ಉಪಾಧ್ಯಕ್ಷ‌ ಎಂ.ಶಾಂತಿ ಉಮಾ ಪ್ರಮೋದ್ ಖಜಾಂಚಿ ಅನುಪಮಾ ಮತ್ತು ವಿದ್ಯಾರ್ಥಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.