ADVERTISEMENT

ಸಬ್ಸಿಡಿ ರೈತರಿಗೇ ವರ್ಗಾವಣೆಗೆ ಪೈಲಟ್‌ ಯೋಜನೆ: ಖೂಬಾ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2021, 13:23 IST
Last Updated 19 ಆಗಸ್ಟ್ 2021, 13:23 IST
ಭಗವಂತ ಖೂಬಾ ಅವರ ಸಾಂದರ್ಭಿಕ ಚಿತ್ರ
ಭಗವಂತ ಖೂಬಾ ಅವರ ಸಾಂದರ್ಭಿಕ ಚಿತ್ರ   

ಬಳ್ಳಾರಿ: ‘ಕಾರ್ಖಾನೆಗಳಿಗೆ ಕೊಡುತ್ತಿರುವ ರಸಗೊಬ್ಬರ ಸಬ್ಸಿಡಿಯನ್ನು ರೈತರ ಖಾತೆಗಳಿಗೆ ನೇರವಾಗಿ ವರ್ಗಾವಣೆ ಮಾಡುವ ಕುರಿತು ಪೈಲಟ್‌ ಯೋಜನೆ ರೂಪಿಸುವ ಚಿಂತನೆ ಇದೆ’ ಎಂದು ಕೇಂದ್ರ ರಸಗೊಬ್ಬರ ಖಾತೆ ಸಚಿವ ಭಗವಂತ ಖೂಬಾ ಗುರುವಾರ ತಿಳಿಸಿದರು.

ಬಳ್ಳಾರಿಯಲ್ಲಿ ಗುರುವಾರ ಏರ್ಪಡಿಸಿದ್ದ ‘ಜನಾಶೀರ್ವಾದ ಯಾತ್ರೆ’ಯಲ್ಲಿ ಭಾಗವಹಿಸಿದ ಬಳಿಕ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಚಿಂತನೆ ಅಷ್ಟೇ, ಯಾವಾಗ ಯೋಜನೆ ಜಾರಿ ಮಾಡಬೇಕು ಎಂಬ ಕುರಿತು ಇನ್ನೂ ಖಚಿತ ತೀರ್ಮಾನವಾಗಿಲ್ಲ ಎಂದು ಹೇಳಿದರು.

ಮುಂಗಾರು ಹಂಗಾಮಿಗೆ ರಸಗೊಬ್ಬರದ ಸಮಸ್ಯೆ ಇಲ್ಲ. ಹಿಂಗಾರು ಹಂಗಾಮಿಗೂ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಚೀನಾ ರಸಗೊಬ್ಬರ ರಫ್ತಿನ ಮೇಲೆ ನಿರ್ಬಂಧ ಹೇರಿದ್ದರೂ ಆತಂಕಪಡಬೇಕಾದ ಅಗತ್ಯವಿಲ್ಲ. ಜೋರ್ಡಾನ್‌, ರಷ್ಯಾ ಮತ್ತಿತರ ದೇಶಗಳಿಂದ ಕೇಂದ್ರ ಸರ್ಕಾರದ ‘ಸ್ಟ್ರೇಟ್‌ ಟ್ರೇಡಿಂಗ್‌ ಎಂಟರ್‌ ‍ಪ್ರೈಸಸ್‌’ (ಎಸ್‌ಟಿಇ) ಮುಖಾಂತರ ಡಿಎಪಿ ಹಾಗೂ ಇದರ ಉತ್ಪಾದನೆಗೆ ಬೇಕಾದ ಕಚ್ಚಾವಸ್ತುಗಳನ್ನು ತರಿಸಿಕೊಳ್ಳಲು ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ ಎಂದರು.

ADVERTISEMENT

‘ರೈತರಿಗೆ ಯಾವುದೇ ಕಾರಣಕ್ಕೂ ರಸಗೊಬ್ಬರದ ಸಮಸ್ಯೆಯಾಗಲು ಬಿಡುವುದಿಲ್ಲ. ರೈತರು ಆತಂಕಪಡಬೇಕಿಲ್ಲ. ಹೊರಗಿನಿಂದ ರಸಗೊಬ್ಬರ ಆಮದು ಮಾಡಿಕೊಳ್ಳುವುದರಿಂದ ದರ ನಿಯಂತ್ರಣ ನಮ್ಮ ಕೈಯಲ್ಲಿ ಇರುವುದಿಲ್ಲ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಡಿಎಪಿ ಬದಲು ಎಸ್‌ಎಸ್‌ಪಿ ಬಳಸಲು ರೈತರಿಗೆ ಜಾಗೃತಿ ಮೂಡಿಸಲಾಗುವುದು. ಎಸ್‌ಎಸ್‌ಪಿಯೂ ಡಿಎಪಿ ಅಷ್ಟೇ ಪರಿಣಾಮಕಾರಿ’ ಎಂದು ಸಚಿವರು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.