ADVERTISEMENT

ಕಮಲಾಪುರದಲ್ಲಿ ಬಿಜೆಪಿ ಅಬ್ಬರದ ಪ್ರಚಾರ

​ಪ್ರಜಾವಾಣಿ ವಾರ್ತೆ
Published 26 ಮೇ 2019, 15:07 IST
Last Updated 26 ಮೇ 2019, 15:07 IST
ಕಮಲಾಪುರ ಪಟ್ಟಣದಲ್ಲಿ ಭಾನುವಾರ ಸಂಜೆ ನಡೆದ ಬಿಜೆಪಿ ಪ್ರಚಾರ ಮೆರವಣಿಗೆಯಲ್ಲಿ ನೂರಾರು ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು
ಕಮಲಾಪುರ ಪಟ್ಟಣದಲ್ಲಿ ಭಾನುವಾರ ಸಂಜೆ ನಡೆದ ಬಿಜೆಪಿ ಪ್ರಚಾರ ಮೆರವಣಿಗೆಯಲ್ಲಿ ನೂರಾರು ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು   

ಹೊಸಪೇಟೆ: ತಾಲ್ಲೂಕಿನ ಕಮಲಾಪುರ ಪಟ್ಟಣ ಪಂಚಾಯಿತಿ ಚುನಾವಣೆಗೆ ಕೆಲವೇ ದಿನಗಳು ಉಳಿದಿದ್ದು, ಅದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಜೆಪಿ ಕ್ಷೇತ್ರದಾದ್ಯಂತ ಅಬ್ಬರದ ಪ್ರಚಾರ ನಡೆಸುತ್ತಿದೆ.

ದಿನಕ್ಕೊಬ್ಬ ಪಕ್ಷದ ಮುಖಂಡರು ಕ್ಷೇತ್ರದಾದ್ಯಂತ ಸುತ್ತಾಡಿ ಪ್ರಚಾರ ನಡೆಸುತ್ತಿದ್ದಾರೆ. ಶನಿವಾರ ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಘಟಕದ ಉಪಾಧ್ಯಕ್ಷೆ ರಾಣಿ ಸಂಯುಕ್ತಾ ಬಿರುಸಿನ ಪ್ರಚಾರ ಕೈಗೊಂಡರು. ಭಾನುವಾರ ಸಂಜೆ ಮಾಜಿ ಶಾಸಕ ಎಚ್‌.ಆರ್‌.ಗವಿಯಪ್ಪ ಕ್ಷೇತ್ರದಾದ್ಯಂತ ಪಾದಯಾತ್ರೆ ನಡೆಸಿ ಪಕ್ಷದ ಅಭ್ಯರ್ಥಿಗಳ ಪರ ಮತಯಾಚಿಸಿದರು.

ಪಟ್ಟಣದ ಬಸ್‌ ನಿಲ್ದಾಣದಿಂದ ಆರಂಭವಾದ ಪ್ರಚಾರ ಮೆರವಣಿಗೆ ಪ್ರಮುಖ ಬೀದಿಗಳ ಮೂಲಕ ಹಾದು ಪುನಃ ಅಲ್ಲಿಯೇ ಕೊನೆಗೊಂಡಿತು. ಮನ್ಮಥ ಕೇರಿಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಗವಿಯಪ್ಪ, ‘ಈ ಸಲದ ಚುನಾವಣೆಯಲ್ಲಿ ಪ್ರಾಮಾಣಿಕರನ್ನು ಕಣಕ್ಕಿಳಿಸಿದ್ದೇವೆ. ತಾರಾ–ತೀಗಡಿ ಮಾಡುವವರು ಯಾರೂ ಇಲ್ಲ. ಒಳ್ಳೆಯವರು ಗೆದ್ದು ಬಂದರೆ ಊರ ಅಭಿವೃದ್ಧಿಗೆ ಅನುಕೂಲವಾಗುತ್ತದೆ. ಹಾಗಾಗಿ ಎಲ್ಲರೂ ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.

ADVERTISEMENT

‘ಕಮಲಾಪುರ ಸೇರಿದಂತೆ ಜಿಲ್ಲೆಯ ಜನ ದೇವೇಂದ್ರಪ್ಪನವರನ್ನು ಭಾರಿ ಬಹುಮತದಿಂದ ಗೆಲ್ಲಿಸಿ, ನರೇಂದ್ರ ಮೋದಿಯವರ ಕೈ ಬಲಪಡಿಸಿದ್ದೀರಿ. ಶೀಘ್ರದಲ್ಲಿ ರಾಜ್ಯದಲ್ಲೂ ಬಿಜೆಪಿ ಸರ್ಕಾರ ಬಂದು ಯಡಿಯೂರಪ್ಪ ಮುಖ್ಯಮಂತ್ರಿಯಾಗುವರು. ಕಮಲಾಪುರ ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿಗೆ ಅಧಿಕಾರ ಕೊಟ್ಟರೆ, ಹೆಚ್ಚಿನ ಅನುದಾನ ತಂದು ಕೆಲಸ ಮಾಡಿಸಬಹುದು’ ಎಂದು ಹೇಳಿದರು.

ಮಂಡಲ ಅಧ್ಯಕ್ಷ ಅನಂತ ಪದ್ಮನಾಭ, ಮುಖಂಡರಾದ ಬಸವರಾಜ ನಾಲತ್ವಾಡ, ಅನಿಲ್‌ ಜೋಷಿ, ಎಸ್‌.ಎಸ್‌. ರಾಚಯ್ಯ, ಬಸವರಾಜ, ವೀರ್‌ ಅಂಜಿನಯ್ಯ, ಹನುವಾಳ್‌ ದೇವರಾಜ, ಕಾಕುಬಾಳು ಜಡೇಶ್‌, ಕೇಶವಗೌಡ, ಜಯತೀರ್ಥ, ವಿನಾಯಕ ಸ್ವಾಮಿ, ವೆಂಕಟೇಶ, ನಾಗಯ್ಯ, ಬಿ.ಎಸ್‌.ಆರ್‌. ನಾಗರಾಜಯ್ಯ, ನೂರುಲ್ಲಾ ಖಾದ್ರಿ, ಪಂಪಯ್ಯ, ಈರಣ್ಣ ಪೂಜಾರಿ, ಲಕ್ಷ್ಮಣ, ವಿರೂಪಾಕ್ಷಿ ಇದ್ದರು.

ಇಂದು ರಾಮುಲು ಪ್ರಚಾರ:ಸೋಮವಾರ (ಮೇ 27) ಬೆಳಿಗ್ಗೆ 10ಗಂಟೆಗೆ ಶಾಸಕ ಬಿ. ಶ್ರೀರಾಮುಲು ಅವರು ಕಮಲಾಪುರ ಪಟ್ಟಣದಲ್ಲಿ ಪ್ರಚಾರ ಕೈಗೊಳ್ಳುವರು. ಏಳು ಕೇರಿ ಸೇರಿದಂತೆ ಪಟ್ಟಣದಾದ್ಯಂತ ಪಾದಯಾತ್ರೆ ಮೂಲಕ ಮತಯಾಚಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.