ADVERTISEMENT

ಬಿಜೆಪಿ ಅಧಿಕೃತ ಅಭ್ಯರ್ಥಿ ಬಳಿಯೇ ಮತ ಯಾಚಿಸಿದ ಬಂಡಾಯ ಅಭ್ಯರ್ಥಿ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2019, 11:24 IST
Last Updated 2 ಡಿಸೆಂಬರ್ 2019, 11:24 IST
ಬಿಜೆಪಿ ಬಂಡಾಯ ಅಭ್ಯರ್ಥಿ ಕವಿರಾಜ್‌ ಅರಸ್‌ ಅವರು ಬಿಜೆಪಿ ಅಧಿಕೃತ ಅಭ್ಯರ್ಥಿ ಆನಂದ್‌ ಸಿಂಗ್‌ ಬಳಿ ಮತ ಯಾಚಿಸುತ್ತಿರುವುದು
ಬಿಜೆಪಿ ಬಂಡಾಯ ಅಭ್ಯರ್ಥಿ ಕವಿರಾಜ್‌ ಅರಸ್‌ ಅವರು ಬಿಜೆಪಿ ಅಧಿಕೃತ ಅಭ್ಯರ್ಥಿ ಆನಂದ್‌ ಸಿಂಗ್‌ ಬಳಿ ಮತ ಯಾಚಿಸುತ್ತಿರುವುದು   

ಹೊಸಪೇಟೆ: ಬಿಜೆಪಿ ಬಂಡಾಯ ಅಭ್ಯರ್ಥಿ ಕವಿರಾಜ್‌ ಅರಸ್‌ ಅವರು ಸೋಮವಾರ ನಗರದಲ್ಲಿ ಬಿಜೆಪಿಅಧಿಕೃತ ಅಭ್ಯರ್ಥಿ ಆನಂದ್‌ ಸಿಂಗ್‌ ಅವರಿಗೆಮತ ನೀಡುವಂತೆ ಕೇಳಿಕೊಂಡರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಬಿಜೆಪಿ ಪ್ರಚಾರ ಸಭೆ ನಡೆಯುತ್ತಿತ್ತು. ಬಂಡಾಯ ಅಭ್ಯರ್ಥಿ ಕವಿರಾಜ್‌ ಅರಸ್‌ ಪ್ರವೇಶ ದ್ವಾರದಲ್ಲಿ ನಿಂತುಕೊಂಡು, ಅಲ್ಲಿಗೆ ಬಂದು ಹೋಗುತ್ತಿದ್ದ ಬಿಜೆಪಿ ಮುಖಂಡರು, ಕಾರ್ಯಕರ್ತರಿಗೆ ಕರಪತ್ರಗಳನ್ನು ಕೊಟ್ಟು ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಸಭೆ ಮುಗಿದ ನಂತರ ಅಲ್ಲಿಂದ ಹೊರ ಹೋಗುತ್ತಿದ್ದ ಆನಂದ್‌ ಸಿಂಗ್‌ ಅವರಿಗೆ ಅರಸ್‌ ಕೈಮುಗಿದು, ತಮ್ಮನ್ನು ಬೆಂಬಲಿಸಲು ಕೋರಿದರು. ಅದಕ್ಕೆ ಸಿಂಗ್‌ ಏನನ್ನೂ ಪ್ರತಿಕ್ರಿಯಿಸದೇ ಅಲ್ಲಿಂದ ನಿರ್ಗಮಿಸಿದರು. ಅದಾದ ನಂತರ ಸಂಸದ ವೈ.ದೇವೇಂದ್ರಪ್ಪ, ಶಾಸಕ ರಾಜುಗೌಡ ಅವರ ಕೈಕುಲುಕಿ, ಕರಪತ್ರ ಕೊಟ್ಟರು. ಅದನ್ನು ನೋಡುತ್ತಿದ್ದ ಕಾರ್ಯಕರ್ತರು ಮುಸಿಮುಸಿ ನಗುತ್ತಿದ್ದರು.

ADVERTISEMENT

‘ನಾನು ನಿಮ್ಮವನೇ. ಪಕ್ಷ ದ್ರೋಹಿಗೆ ಟಿಕೆಟ್‌ ಕೊಟ್ಟಿದ್ದಾರೆ. ನಾನು ಸ್ವಾಭಿಮಾನಕ್ಕಾಗಿ ಚುನಾವಣೆಗೆ ನಿಂತಿದ್ದೇನೆ. ನೀವೆಲ್ಲ ನನಗೆ ಖಂಡಿತವಾಗಿಯೂ ಬೆಂಬಲಿಸುತ್ತೀರಿ ಎಂಬ ಭರವಸೆ ಇದೆ’ ಎಂದು ಮುಖಂಡರು, ಕಾರ್ಯಕರ್ತರನ್ನು ಉದ್ದೇಶಿಸಿ ಅರಸ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.