ಬಳ್ಳಾರಿ: ಲಂಚ ಪಡೆದ ಆರೋಪ ಮೇಲ್ನೋಟಕ್ಕೆ ಸಾಬೀತಾಗಿರುವುದರಿಂದ, ಇಲಾಖಾ ವಿಚಾರಣೆಯನ್ನು ಕಾದಿರಿಸಿ ಇಲ್ಲಿನ ಮಹಾನಗರ ಪಾಲಿಕೆ ಆಯುಕ್ತೆ ಎಂ.ವಿ.ತುಷಾರಮಣಿ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ನಗರಾಭಿವೃದ್ಧಿ ಇಲಾಖೆ ಶುಕ್ರವಾರ ಆದೇಶ ನೀಡಿದೆ.
ಲಂಚ ಪಡೆಯಲು ಆಯುಕ್ತೆ ತಮ್ಮ ಸರ್ಕಾರಿ ಕಾರನ್ನೇ ಬಳಸಿದ್ದಾರೆ ಎನ್ನಲಾದ ವೀಡಿಯೋ ಮತ್ತು ಆ ಬಗೆಗಿನ ಸಂಭಾಷಣೆಯ ಜೊತೆಗೆ ನವಕರ್ನಾಟಕ ಯುವಶಕ್ತಿ ಸಂಘಟನೆಯು ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿತ್ತು. ಆರೋಪದ ಕುರಿತ ವಿದ್ಯಾಮಾನಗಳಿಂದ ಪಾಲಿಕೆಯ ದೈನಂದಿನ ಕೆಲಸಗಳ ಸಂದರ್ಭದಲ್ಲೂ ಮುಜುಗರ ಉಂಟಾಗುತ್ತಿರುವುದರಿಂದ ಆಯುಕ್ತೆ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಇಲಾಖೆಗೆ ಗುರುವಾರ ವರದಿ ಸಲ್ಲಿಸಿದ್ದರು.
ಅ.9ರಂದು ಪಾಲಿಕೆಯಲ್ಲೇ ₨ 50 ಸಾವಿರ ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ಆಯುಕ್ತರ ಆಪ್ತ ಸಹಾಯಕ ಮಲ್ಲಿಕಾರ್ಜುನ್ ಎಸ್.ಪಾಟೀಲ್ ಮತ್ತು ಡಿ. ದರ್ಜೆ ನೌಕರ ಎಸ್.ಬಾಷಾ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿದ್ದರು. ನಗರದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ್ದ ಬಾಡದ ಬದ್ರಿನಾಥ್ ಎಂಬುವವರು ಆಯುಕ್ತೆಗೆ 5ಲಕ್ಷ ಲಂಚ ನೀಡಿದ್ದಾಗಿ ಆರೋಪಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.