ADVERTISEMENT

ಎತ್ತಿನ ಬಂಡಿ ಮೆರವಣಿಗೆ ನೋಡಿರಣ್ಣ...

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2021, 13:54 IST
Last Updated 3 ಅಕ್ಟೋಬರ್ 2021, 13:54 IST
ಹೊಸಪೇಟೆಯಲ್ಲಿ ಭಾನುವಾರ ಸಂಜೆ ನಡೆದ ಎತ್ತಿನ ಬಂಡಿಗಳ ಮೆರವಣಿಗೆ ಸಂದರ್ಭದಲ್ಲಿ ನಗರದ ರಾಮಾ ಟಾಕೀಸ್‌ ಬಳಿ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತು
ಹೊಸಪೇಟೆಯಲ್ಲಿ ಭಾನುವಾರ ಸಂಜೆ ನಡೆದ ಎತ್ತಿನ ಬಂಡಿಗಳ ಮೆರವಣಿಗೆ ಸಂದರ್ಭದಲ್ಲಿ ನಗರದ ರಾಮಾ ಟಾಕೀಸ್‌ ಬಳಿ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತು   

ಹೊಸಪೇಟೆ (ವಿಜಯನಗರ): ನಗರದಲ್ಲಿ ಎತ್ತಿನ ಬಂಡಿ ಓಡಾಡುವುದು ಸಾಮಾನ್ಯ. ಆದರೆ, ಭಾನುವಾರ ವಿಶಿಷ್ಟವಾಗಿ ಅಲಂಕರಿಸಿದ ಎತ್ತಿನ ಬಂಡಿಗಳು ಸಾಲು ಸಾಲಾಗಿ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.

ವಿಜಯನಗರ ಜಿಲ್ಲಾ ಉದ್ಘಾಟನಾ ಸಮಾರಂಭದ ಎರಡನೇ ದಿನವಾದ ಭಾನುವಾರ ನಗರದಲ್ಲಿ ಏರ್ಪಡಿಸಿದ್ದ ಎತ್ತಿನ ಬಂಡಿಗಳ ಮೆರವಣಿಗೆ ಎಲ್ಲರ ಗಮನ ಸೆಳೆಯಿತು.

ಎತ್ತುಗಳಿಗೆ ವಿಶೇಷ ರೀತಿಯಲ್ಲಿ ಅಲಂಕರಿಸಿ, ಬಂಡಿಗೆ ಬಣ್ಣ ಬಳಿದು, ಬಲೂನ್‌, ಹೂಗಳಿಂದ ಸಿಂಗರಿಸಿ ಮೆರವಣಿಗೆ ಮಾಡಲಾಯಿತು. ಸಹಜವಾಗಿಯೇ ಅವುಗಳು ಎಲ್ಲರ ಚಿತ್ತ ಕದ್ದವು.

ADVERTISEMENT

ನಗರದ ಎಪಿಎಂಸಿಯಿಂದ ಆರಂಭಗೊಂಡ ಎತ್ತಿನ ಬಂಡಿಗಳ ಮೆರವಣಿಗೆ ಟಿ.ಬಿ. ಡ್ಯಾಂ ರಸ್ತೆ, ವಾಲ್ಮೀಕಿ ವೃತ್ತ, ರಾಮಾ ಟಾಕೀಸ್‌, ಮಹಾತ್ಮ ಗಾಂಧಿ ವೃತ್ತ, ಬಸ್‌ ನಿಲ್ದಾಣ, ಕಾಲೇಜು ರಸ್ತೆ ಮೂಲಕ ಜಿಲ್ಲಾ ಕ್ರೀಡಾಂಗಣ ತಲುಪಿದವು. ಎತ್ತಿನ ಬಂಡಿಗಳು ಸಾಲಾಗಿ ಹೊರಟರೆ ಜನ ರಸ್ತೆ ಬದಿ, ಕಟ್ಟಡಗಳ ಬದಿ ನಿಂತುಕೊಂಡು ಕಣ್ತುಂಬಿಕೊಂಡರು. ಸೆಲ್ಫಿ, ಛಾಯಾಚಿತ್ರ ತೆಗೆದುಕೊಳ್ಳಲು ಮುಗಿ ಬಿದ್ದರು.

ಎತ್ತಿನ ಬಂಡಿಗಳ ಮೆರವಣಿಗೆಯಿಂದ ನಗರದ ರಾಮಾ ಟಾಕೀಸ್‌, ಕಾಲೇಜು ರಸ್ತೆ, ಬಸ್‌ ನಿಲ್ದಾಣ ರಸ್ತೆಯಲ್ಲಿ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ಇದಕ್ಕೂ ಮುನ್ನ ಕೃಷಿ ಸಚಿವ ಬಿ.ಸಿ. ಪಾಟೀಲ ಮಾತನಾಡಿ, ‘ವಿಜಯನಗರ ಜಿಲ್ಲೆ ಉದಯಗೊಂಡಿರುವುದು ಸಂತಸದ ವಿಷಯ. ಮತ್ತೆ ಅದರ ವೈಭವ ಮರುಕಳಿಸಲಿದೆ’ ಎಂದು ಹೇಳಿದರು. ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.