ADVERTISEMENT

ಮಂತ್ರಮುಗ್ದಗೊಳಿಸಿದ ಜ್ಞಾನೇಶ್ವರನ ಕಂಠಸಿರಿ

ಗಮನಸೆಳೆದ ಚಿಗುರು ಸಾಂಸ್ಕೃತಿಕ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2018, 14:44 IST
Last Updated 25 ಸೆಪ್ಟೆಂಬರ್ 2018, 14:44 IST
ಬೆಳಗಲ್ಲಿನಲ್ಲಿ ಮಂಗಳವಾರ ನಡೆದ ಚಿಗುರು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬಾಲಕಿಯ ನೃತ್ಯ ನೋಡುಗರ ಗಮನ ಸೆಳೆಯಿತು
ಬೆಳಗಲ್ಲಿನಲ್ಲಿ ಮಂಗಳವಾರ ನಡೆದ ಚಿಗುರು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬಾಲಕಿಯ ನೃತ್ಯ ನೋಡುಗರ ಗಮನ ಸೆಳೆಯಿತು   

ಬಳ್ಳಾರಿ: ಒಬ್ಬರಿಗಿಂತ ಒಬ್ಬರ ಕಂಠಸಿರಿ ಮತ್ತೆ ಮತ್ತೆ ಕೇಳುವಂತಿತ್ತು. ಅದರಲ್ಲೂಸರಿಗಮಪ ಖ್ಯಾತಿಯ ಎಮ್ಮಿಗನೂರಿನ ಜ್ಞಾನೇಶ್ವರನ ಧ್ವನಿ ಕೇಳುತ್ತಲೇ ಎಲ್ಲರೂ ಮಂತ್ರ ಮುಗ್ದರಾದರು. ತನ್ನ ಸುಮಧುರ ಕಂಠದಿಂದ ಹಾಡಿದ ಅಮ್ಮಾ ಎನ್ನುವ ಹಾಡು ಎಲ್ಲರನ್ನು ನಿಶ್ಯಬ್ದರನ್ನಾಗಿಸಿತು. ಹೀಗೆ ಒಂದರ ಮೇಲೊಂದು ನಿರಂತರ 40 ನಿಮಿಷಗಳ ಕಾಲ ತನ್ನ ಕಂಠಸಿರಿಯಿಂದ ಎಲ್ಲರನ್ನೂ ತನ್ನತ್ತ ಸೆಳೆದು ನಿಬ್ಬೆರಗಾಗುವಂತೆ ಮಾಡಿದ್ದ ಆ ಪುಟ್ಟ ಪೋರ.

ನಗರದ ಹೊರವಲಯದ ಬೆಳಗಲ್ಲು ಗ್ರಾಮದ ನಂದಿ ಇಂಟರ್‌ನ್ಯಾಷನಲ್ಶಾಲೆಯ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಏರ್ಪಡಿಸಿದ್ದ ಏರ್ಪಡಿಸಿದ್ದ ಚಿಗುರು ಸಾಂಸ್ಕೃತಿಕಕಾರ್ಯಕ್ರಮಗಳಲ್ಲಿ ಕೊಡಗನ ಕೋಳಿ ನುಂಗಿತ್ತ ನೋಡವ್ವ ತಂಗಿ.., ಕಾಣದ ಕಡಲಿಗೆ ಹಂಬಲಿಸಿದೆ ಮನ.., ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ ಸೇರಿದಂತೆ ವಿವಿಧ ಬಗೆಯ ಹಾಡುಗಳನ್ನು ಹಾಡಿ ತನ್ನತ್ತ ಸೆಳೆದಿದ್ದ.

ಪೂರ್ವಿ ಅರಳಕಟ್ಟಿ ಮತ್ತು ಸಂಗಡಿಗರು “ತಬಲಾ ಜುಗಲ್‍ಬಂದಿ” ನೆರೆದಿದ್ದವರನ್ನು ಆಕರ್ಷಿಸಿತು. ಭಾರತಿ ಸರ್ಜನ್ ಮತ್ತು ಸಂಗಡಿಗರು ಚನ್ನಪ್ಪ ಚನ್ನಗೌಡ ಕುಂಬಾರ ಮಾಡಿದ ಕೊಡನವ್ವ..ಹಾಡಿಗೆ ಪುಟ್ಟ ಮಕ್ಕಳ ಸಮೂಹ ನೃತ್ಯ ನೆರೆದಿದ್ದವರನ್ನು ಸೆಳೆದಿತ್ತು. ಭಾರತಿ ಸರ್ಜನ್ ಅವರು ಕಂಡೆನಾ ಗೋವಿಂದನಾ... ಹಾಡಿಗೆ ನೃತ್ಯ ಪ್ರದರ್ಶಿಸಿದರು.
ಕೆ.ಎಂ.ಅಜಯ್ ಎನ್ನುವ ಬಾಲಕ ಬಾಲಕೃಷ್ಣನ ಏಕಪಾತ್ರಾಭಿನಾಯ ಬಯಲಾಟ ಸನ್ನಿವೇಶವನ್ನು ಪ್ರಸ್ತುತಪಡಿಸಿದರು. ಕೆ.ಪ್ರತೀಕ್ಷಾ ಜಾನಪದ ಗೀತೆಗಳು ಹಾಡಿದರೇ, ಬಿ.ಸಿ.ಶ್ರೇಯಾ ಕರ್ನಾಟಕ ಶಾಸ್ತ್ರೀಯ ಸಂಗೀತ ಪ್ರಸ್ತುತಪಡಿಸಿದರು. ಮಹಾಲಕ್ಷ್ಮೀ ಓಡಿಸ್ಸಿ ನೃತ್ಯ ಪ್ರದರ್ಶಿಸಿದರು. ಡಿ.ಭುವನ್ ಸಾಯಿ ಮತ್ತು ಸಂಗಡಿಗರಿಂದ ಸೌಂಡ್ ಸರ್ ಸೌಂಡ್ ಹಾಸ್ಯ ನಾಟಕ ನಡೆಯಿತು.

ADVERTISEMENT

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ರಮೀಜಾ ಬಿ ಕಾರ್ಯಕ್ರಮ ಉದ್ಘಾಟಿಸಿದರು.

ಬೆಳಗಲ್ಲು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಕೆ.ಎಂ.ವಸಂತ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ. ಉಪಾದ್ಯಕ್ಷೆ ಸಣ್ಣ ತಾಯಮ್ಮ, ಸರಸ್ವತಿ ಎಜ್ಯುಕೇಶನ್ ಸೊಸೈಟಿಯ ಇಕ್ಬಾಲ್ ಅಹ್ಮದ್,ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ, ಬಿ.ನಾಗರಾಜ, ಎಸ್.ವಸ್ತ್ರದ, ನೃತ್ಯಗುರು ಜಿಲಾನಿಭಾಷಾ, ಬೆಳಗಲ್ಲು ಪಿಡಿಒ ಬಿ.ಉದ್ದನಗೌಡ, ನಂದಿ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಶೋಭಾರಾವ್, ನಿರ್ದೇಶಕ ಉಬೇದ್ ಅಹ್ಮದ್, ನಂದಿ ಇಂಟರ್‌ನ್ಯಾಷನಲ್ ಶಾಲೆಯ ಪ್ರಾಚಾರ್ಯ ಇಮ್ರಾನ್ ಜಾವೇದ್, ಚಿತ್ರಕಲಾವಿದ ಮಂಜುನಾಥ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.