ADVERTISEMENT

ಭಿಕ್ಷಾಟನೆ ಮಾಡುತ್ತಿದ್ದ ಮಕ್ಕಳು: ಟ್ವೀಟ್‌ ಆಧರಿಸಿ ರಕ್ಷಣೆ!

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2025, 14:25 IST
Last Updated 7 ಫೆಬ್ರುವರಿ 2025, 14:25 IST
ನಗರದ ಬಸ್ ನಿಲ್ದಾಣದಲ್ಲಿ ಭಿಕ್ಷಾಟನೆಯಲ್ಲಿ ತೊಡಗಿದ್ದ ಇಬ್ಬರು ಬಾಲಕಿಯರನ್ನು ರಕ್ಷಿಸಿದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು. 
ನಗರದ ಬಸ್ ನಿಲ್ದಾಣದಲ್ಲಿ ಭಿಕ್ಷಾಟನೆಯಲ್ಲಿ ತೊಡಗಿದ್ದ ಇಬ್ಬರು ಬಾಲಕಿಯರನ್ನು ರಕ್ಷಿಸಿದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು.    

ಬಳ್ಳಾರಿ: ನಗರದಲ್ಲಿ ಭಿಕ್ಷಾಟನೆಯಲ್ಲಿ ತೊಡಗಿದ್ದ ಇಬ್ಬರು ಬಾಲಕಿಯರನ್ನು ಸಮಾಜ ಕಲ್ಯಾಣ ಇಲಾಖೆ  ಮತ್ತು ಪೊಲೀಸ್‌ ಅಧಿಕಾರಿಗಳು ಗುರುವಾರ ರಕ್ಷಣೆ ಮಾಡಿದ್ದು, ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿದ್ದಾರೆ. 

ನಗರದ ಹೊಸ ಬಸ್‌ ನಿಲ್ದಾಣದಲ್ಲಿ ಬಾಲಕಿಯೊಬ್ಬಳು ಭಿಕ್ಷಾಟನೆಯಲ್ಲಿ ತೊಡಗಿರುವುದಾಗಿ ‘ಎಕ್ಸ್‌’ ಬಳಕೆದಾರ ಮುಕ್ಕಣ್ಣ ಎಂಬುವವರು ಗುರುವಾರ ರಾತ್ರಿ 8.48ರಲ್ಲಿ ಪೋಸ್ಟ್‌ ಪ್ರಕಟಿಸಿದ್ದರು. ಇದನ್ನು ಗಮನಿಸಿದ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್‌, ಬಾಲಕಿಯನ್ನು ರಕ್ಷಿಸುವಂತೆ ಇಲಾಖೆ ಬಳ್ಳಾರಿ ಜಿಲ್ಲಾ ಉಪ ನಿರ್ದೇಶಕ ಮಲ್ಲಿಕಾರ್ಜುನ ಅವರಿಗೆ ತಿಳಿಸಿದ್ದರು. 

ಸಮಾಜ ಕಲ್ಯಾಣ ಇಲಾಖೆ ಮತ್ತು ಪೊಲೀಸ್‌ ಅಧಿಕಾರಿಗಳು ರಾತ್ರಿ 9.30ಕ್ಕೆ ಬಾಲಕಿಗಾಗಿ ಹುಡುಕಾಟ ನಡೆಸಿದ್ದರಾದರೂ ಸಿಕ್ಕಿರಲಿಲ್ಲ. ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಮತ್ತೆ ಹುಡುಕಾಟ ನಡೆಸಲಾಯಿತು. 11 ಗಂಟೆಗೆ ಬಾಲಕಿ ಬಸ್‌ ನಿಲ್ದಾಣದಲ್ಲಿ ಪತ್ತೆಯಾಗಿದ್ದಳು. ಜತೆಗೆ ಆಕೆಯ ಅಕ್ಕ ಕೂಡ ಭಿಕ್ಷಾಟನೆಯಲ್ಲಿ ತೊಡಗಿದ್ದದ್ದು ಕಂಡು ಬಂತು.

ADVERTISEMENT

ಇಬ್ಬರನ್ನೂ ರಕ್ಷಿಸಿದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಪೊಲೀಸರ ನೆರವಿನೊಂದಿಗೆ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸುಪರ್ದಿಗೆ ನೀಡಿದ್ದಾರೆ.

ಈ ಕುರಿತು ಟ್ವೀಟ್‌ ಪ್ರಕಟಿಸಿರುವ ಜಿಲ್ಲಾ ಪೊಲೀಸರು, ‘ಮಕ್ಕಳ ರಕ್ಷಣೆ ಮತ್ತು ಪೋಷಣೆಗಾಗಿ ಮಕ್ಕಳ ಕಲ್ಯಾಣ ಸಮಿತಿಗೆ ನೀಡಲಾಗಿದೆ’ ಎಂದು ತಿಳಿಸಿದ್ದಾರೆ. 

ಇಬ್ಬರೂ ಬಾಲಕೀಯರು ಕೌಲ್‌ಬಜಾರ್‌ನಲ್ಲಿ ತಂದೆ ತಾಯಿಯೊಂದಿಗೆ ನೆಲೆಸಿದ್ದಾರೆ. ನಿತ್ಯ ₹500 ಅನ್ನು ಭಿಕ್ಷಾಟನೆ ಮೂಲಕ ಸಂಗ್ರಹಿಸಿ ಪೋಷಕರಿಗೆ ನೀಡುತ್ತಿರುವುದಾಗಿ ಬಾಲಕಿಯರು ತಿಳಿಸಿದರು. 

‘ಪೋಷಕರು ಮಕ್ಕಳನ್ನು ಭಿಕ್ಷಾಟನೆಗೆ ದೂಡಬಾರದು. 16 ವರ್ಷದ ಒಳಗಿನವರನ್ನು ಇಂಥದ್ದಕ್ಕೆ ದೂಡುವುದು ಶಿಕ್ಷಾರ್ಹ ಅಪರಾಧವಾಗುತ್ತದೆ’ ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.