ADVERTISEMENT

ಬಳ್ಳಾರಿ: ಲಕ್ಷ ಎಕರೆಯಲ್ಲಿ ಮೆಣಸಿನಕಾಯಿ ಬೆಳೆ ನಷ್ಟ

ಬಳ್ಳಾರಿ ಜಿಲ್ಲೆಯಲ್ಲಿ ಅಕಾಲಿಕ ಮಳೆ ಪರಿಣಾಮ l ಆತಂಕದಲ್ಲಿ ರೈತರು

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2021, 4:28 IST
Last Updated 30 ನವೆಂಬರ್ 2021, 4:28 IST
ಬಳ್ಳಾರಿ ತಾಲೂಕಿನ ಲಕ್ಷ್ಮೀನಗರ ಕ್ಯಾಂಪ್‌ನಲ್ಲಿ ಅಕಾಲಿಕ ಮಳೆಗೆ ಸಿಕ್ಕಿ ನಾಶವಾಗಿರುವ ಮೆಣಸಿನಕಾಯಿ ಗಿಡಗಳು
ಬಳ್ಳಾರಿ ತಾಲೂಕಿನ ಲಕ್ಷ್ಮೀನಗರ ಕ್ಯಾಂಪ್‌ನಲ್ಲಿ ಅಕಾಲಿಕ ಮಳೆಗೆ ಸಿಕ್ಕಿ ನಾಶವಾಗಿರುವ ಮೆಣಸಿನಕಾಯಿ ಗಿಡಗಳು   

ಬಳ್ಳಾರಿ: ಜಿಲ್ಲೆಯಲ್ಲಿ ಅಕಾಲಿಕ ಮಳೆಯಿಂದಾಗಿ 42,644 ಹೆಕ್ಟೇರ್‌ನಲ್ಲಿ (1,06,610 ಎಕರೆ) ಮೆಣಸಿನಕಾಯಿ ಬೆಳೆ ನಾಶವಾಗಿದೆ. 11,563 ಹೆಕ್ಟೇರ್‌ನಲ್ಲಿ ಭತ್ತ, 1,209 ಹೆಕ್ಟೇರ್‌ನಲ್ಲಿ ಕಡಲೆ ಬೆಳೆಗೆ ಹಾನಿಯಾಗಿದ್ದು ರೈತರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.

ಅಂದಾಜಿನ ಪ್ರಕಾರ, ಜಿಲ್ಲೆಯಲ್ಲಿ ₹ 1,500 ಕೋಟಿ ಮೌಲ್ಯದ ಆಸ್ತಿಪಾಸ್ತಿ ಮತ್ತು ಬೆಳೆ ನಷ್ಟವಾಗಿದೆ. ಆದರೆ, ಜಿಲ್ಲಾ
ಡಳಿತ ನಡೆಸಿದ ಸಮೀಕ್ಷೆ ಪ್ರಕಾರ ₹ 75 ಕೋಟಿಗೂ ಅಧಿಕ ನಷ್ಟವಾಗಿದೆ.

‘ಜಿಲ್ಲೆಯಲ್ಲಿ ಪ್ರಮುಖವಾಗಿ 70 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆದಿದ್ದು, 42,644 ಹೆಕ್ಟೇರ್‌ನಲ್ಲಿ ಬೆಳೆ ಹಾಳಾಗಿದೆ’ ಎಂದು ಜಿಲ್ಲಾಧಿಕಾರಿ ಪವನ್‌ ಕುಮಾರ್‌ ಮಾಲಪಾಟಿ ತಿಳಿಸಿದ್ದಾರೆ.

ADVERTISEMENT

ಕುರುಗೋಡು ತಾಲ್ಲೂಕಿನ ಬಾದನಹಟ್ಟಿಯಲ್ಲಿ ಐದು ಎಕರೆಯಲ್ಲಿ ಮೆಣಸಿನಕಾಯಿ ಬೆಳೆದಿದ್ದ ರೈತರೊಬ್ಬರು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ‘ರೈತರು ಆತಂಕಕ್ಕೆ ಒಳಗಾಗಿ ಆತ್ಮಹತ್ಯೆಯಂಥ ದುಡುಕಿನ ಕ್ರಮಕ್ಕೆ ಮುಂದಾಗಬಾರದು. ಸರ್ಕಾರ ನೆರವಿಗೆ ಬರಲಿದೆ’ ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

ಆರಂಭದಲ್ಲಿ ಜಿಲ್ಲಾಡಳಿತ 10 ಸಾವಿರ ಹೆಕ್ಟೇರ್‌ನಲ್ಲಿ ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಿತ್ತು. ಸಮೀಕ್ಷೆಯಲ್ಲಿ ಒಂದು ಲಕ್ಷ ಎಕರೆಗೂ ಅಧಿಕ ಪ್ರದೇಶದಲ್ಲಿ ಮೆಣಸಿನಕಾಯಿ ನಾಶವಾಗಿದೆ ಎಂದು ತಿಳಿದಂತೆ, ಸತ್ಯಾಸತ್ಯತೆಯನ್ನು ಅರಿಯಲು ಜಿಲ್ಲೆಗೆ ತೋಟಗಾರಿಕೆ ಇಲಾಖೆಯ ಅಧಿಕಾರಿಗಳನ್ನು ಕರೆಸಿತು.

ಅದರಂತೆ, ಭಾನುವಾರ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕರಾದ ಧನರಾಜ್‌, ಮಂಜುನಾಥ್ ನಾರಾಯಣ
ಪುರ್‌ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಜಮೀನುಗಳಿಗೆ ತೆರಳಿ ತೆರಳಿ ಪರಿಶೀಲಿಸಿ, ಬೆಳೆ ನಷ್ಟ ದೃಢಪಡಿಸಿತು.

ಬಹುತೇಕ ರೈತರು ಎಕರೆಗೆ ಸರಾಸರಿ ₹ 30 ಸಾವಿರಕ್ಕೆ ಜಮೀನು ಗುತ್ತಿಗೆ ಹಿಡಿದಿದ್ದರು. ಎಕರೆಗೆ ₹ 1 ಲಕ್ಷಕ್ಕೂ ಅಧಿಕ ಖರ್ಚು ಮಾಡಿದ್ದಾರೆ. ಆದರೆ, ಸರ್ಕಾರಿ ನೀರಾವರಿ ಜಮೀನಿನಲ್ಲಿ ಎಕರೆಗೆ ₹13,500 ಹಾಗೂ ಮಳೆ ಆಶ್ರಿತ ಜಮೀನಿಗೆ ಎಕರೆಗೆ ₹ 6,500 ಪರಿಹಾರ ನಿಗದಿಪಡಿಸಿದೆ.‍ಗರಿಷ್ಠ ಐದು ಎಕರೆಯವರೆಗೆ ಪರಿಹಾರ ದೊರೆಯಲಿದೆ.

ಅಲ್ಲದೆ, ಜಿಲ್ಲೆಯಲ್ಲಿ ಮಳೆಗೆ 538 ಮನೆಗಳೂ ಬಿದ್ದಿವೆ. ಮನೆಗಳನ್ನು ಕಳೆದುಕೊಂಡವರಿಗೆ ಪರಿಹಾರ ವಿತರಿಸುವ ಕಾರ್ಯ ಆರಂಭವಾಗಿದೆ ಎಂದೂ ಜಿಲ್ಲಾಧಿಕಾರಿ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.