ಹೊಸಪೇಟೆ (ವಿಜಯನಗರ): ಪ್ರತಿಭಟನೆಗೆ ಮಣಿದು ನಗರಸಭೆಯು ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ (ಎಪಿಎಂಸಿ) ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಲು ಶುಕ್ರವಾರ ಕ್ರಮ ಕೈಗೊಂಡಿದೆ.
ಗುಂಡಿ ಬಿದ್ದಿರುವ ಸ್ಥಳದಲ್ಲಿ ಸಿಐಟಿಯುನ ಫೆಡರೇಶನ್ ಆಪ್ ಕರ್ನಾಟಕ ಆಟೊ ರಿಕ್ಷಾ ಡ್ರೈವರ್ಸ್ ಯೂನಿಯನ್, ಕರ್ನಾಟಕ ರಾಜ್ಯ ವಾಣಿಜ್ಯ ವಾಹನ ಚಾಲಕರ ಸಂಘದವರು ಪ್ರತಿಭಟನೆ ನಡೆಸಿದರು. ವಿಷಯ ತಿಳಿದು ನಗರಸಭೆ ಪೌರಾಯುಕ್ತ ಮನ್ಸೂರ್ ಅಲಿ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸೈಯದ್ ಮನ್ಸೂರ್ ಅಹಮ್ಮದ್, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಕಿಶೋರ್ ಕುಮಾರ್, ಟಿ.ಬಿ. ಡ್ಯಾಂ ಸಿಪಿಐ ಎ. ನಾರಾಯಣ ಅವರು ಸ್ಥಳಕ್ಕೆ ಭೇಟಿ ನೀಡಿದರು.
‘ನಗರದ ವಿವಿಧ ರಸ್ತೆಗಳಲ್ಲಿ ಬಿದ್ದಿರುವ ಗುಂಡಿ ಮುಚ್ಚಲು ಕ್ರಮ ಜರುಗಿಸಲಾಗುವುದು. ಪ್ರತಿಭಟನೆ ಕೈಬಿಡಿ’ ಎಂದು ಪೌರಾಯುಕ್ತರು ಮನವಿ ಮಾಡಿದರು. ‘ನಮ್ಮ ಸಮ್ಮುಖದಲ್ಲೇ ಆ ಕೆಲಸ ಆರಂಭವಾಗಬೇಕು. ಅದು ಕೂಡ ಈಗಲೇ’ ಎಂದು ಯೂನಿಯನ್ ಅಧ್ಯಕ್ಷ ಕೆ.ಎಂ. ಸಂತೋಷ್ ಕುಮಾರ್ ಪಟ್ಟು ಹಿಡಿದರು. ಅವರ ಒತ್ತಡಕ್ಕೆ ಮಣಿದು, ಸ್ಥಳಕ್ಕೆ ಕಾರ್ಮಿಕರನ್ನು ಕರೆಸಿ, ತಾತ್ಕಾಲಿಕವಾಗಿ ಮಣ್ಣು ಸುರಿದು ಗುಂಡಿಗಳನ್ನು ಮುಚ್ಚಲಾಯಿತು. ಇಷ್ಟರಲ್ಲೇ ರಸ್ತೆ ಡಾಂಬರೀಕರಣಗೊಳಿಸಿ ಸರಿಪಡಿಸುವ ಭರವಸೆ ಕೊಟ್ಟು ನಿರ್ಗಮಿಸಿದರು.
‘ಎಪಿಎಂಸಿ ರಸ್ತೆಯಲ್ಲಿ ಗುರುವಾರ ಸರಕು ಸಾಗಾಣಿಕೆ ಆಟೊ ಪಲ್ಟಿಯಾಗಿ ಅದರಲ್ಲಿದ್ದವರು ಗಾಯಗೊಂಡಿದ್ದರು. ಅದೃಷ್ಟವಶಾತ್ ಪ್ರಾಣ ಹಾನಿ ಆಗಿರಲಿಲ್ಲ. ನಿತ್ಯ ಈ ರೀತಿಯ ಘಟನೆಗಳು ಸಾಮಾನ್ಯವಾಗಿವೆ. ಅದರಿಂದ ಬೇಸತ್ತು ಪ್ರತಿಭಟನೆ ನಡೆಸಲಾಯಿತು. ಆದರೆ, ಈಗ ಗುಂಡಿ ಮುಚ್ಚುತ್ತಿರುವುದರಿಂದ ಕೈಬಿಡಲಾಗಿದೆ’ ಎಂದು ಸಂತೋಷ್ ಕುಮಾರ್ ತಿಳಿಸಿದರು.
ಆಟೊ ಯೂನಿಯನ್ ತಾಲ್ಲೂಕು ಉಪಾಧ್ಯಕ್ಷ ಹುಸೇನ್ ಸಾಬ್, ರಾಮಣ್ಣ, ಬಸವರಾಜ್, ಎನ್. ಯಲ್ಲಾಲಿಂಗ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.