ಹೊಸಪೇಟೆ: ಹಾಥರಸ್ನಲ್ಲಿ ನಡೆದಿದೆ ಎನ್ನಲಾದ ಯುವತಿಯ ಅತ್ಯಾಚಾರ, ಕೊಲೆ ಘಟನೆಯ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಶನಿವಾರ ಇಲ್ಲಿನ ರೋಟರಿ ವೃತ್ತದ ಧ್ವಜಸ್ತಂಭ ಕಟ್ಟೆಯಲ್ಲಿ ನಡೆಸಿದ ಪ್ರತಿಭಟನೆಯ ಸ್ಥಳವನ್ನು ಬಿಜೆಪಿ ಕಾರ್ಯಕರ್ತರು ಸಂಜೆ ನೀರಿನಿಂದ ತೊಳೆದು, ಹಾಲಿನ ಅಭಿಷೇಕ ಮಾಡಿದರು.
ಬಳಿಕ ಹೂವಿನಿಂದ ಅಲಂಕರಿಸಿ, ಕುಂಬಳಕಾಯಿ ಒಡೆದು, ದೀಪ ಬೆಳಗಿದರು. ‘ಕಾಂಗ್ರೆಸ್ ಪ್ರತಿಭಟನೆ ವೇಳೆ ಆ ಪಕ್ಷದ ಮುಖಂಡರು, ಕಾರ್ಯಕರ್ತರು ಧ್ವಜಸ್ತಂಭದ ಕಟ್ಟೆಯ ಮೇಲೆ ನಿಂತು ಮಾತನಾಡಿ ಪಾವಿತ್ರ್ಯತೆಗೆ ಧಕ್ಕೆ ತಂದಿದ್ದಾರೆ. ಅದು ಖಂಡನಾರ್ಹ’ ಎಂದು ಸಚಿವ ಆನಂದ್ ಸಿಂಗ್ ಅವರ ಅಳಿಯ, ಬಿಜೆಪಿ ಯುವ ಮುಖಂಡ ಸಂದೀಪ್ ಸಿಂಗ್ ತಿಳಿಸಿದ್ದಾರೆ.
‘ಧ್ವಜಸ್ತಂಭ ಕಟ್ಟೆಯ ಸುತ್ತಲೂ ಬಸವಣ್ಣ, ಕಿತ್ತೂರು ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕದೇವಿ, ಸಂಗೊಳ್ಳಿ ರಾಯಣ್ಣ, ಡಾ.ಬಿ.ಆರ್. ಅಂಬೇಡ್ಕರ್, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸಂದೇಶಗಳನ್ನು ಒಳಗೊಂಡ ಕೆತ್ತನೆ ಇದೆ. ಅದರ ಮೇಲೆ ನಿಂತು ಅಗೌರವ ತೋರಿರುವುದು ಅಕ್ಷಮ್ಯ. ಭವಿಷ್ಯದಲ್ಲಿ ಈ ರೀತಿಯ ಘಟನೆಗಳು ಆಗಬಾರದು’ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.