ADVERTISEMENT

‘ಕಾರ್ಪೊರೇಟ್‌ ಕಂಪನಿ ಭಾರತ ಬಿಟ್ಟು ತೊಲಗಲಿ’: ನಾಗರಾಜ ಪತ್ತಾರ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2021, 9:52 IST
Last Updated 8 ಆಗಸ್ಟ್ 2021, 9:52 IST
ಹೊಸಪೇಟೆಯಲ್ಲಿ ಶನಿವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕ ನಾಗರಾಜ ಪತ್ತಾರ (ಬಲದಿಂದ), ಪ್ರಾಚಾರ್ಯ ಬಿ.ಜಿ. ಕನಕೇಶಮೂರ್ತಿ, ವಕೀಲ ಎ. ಕರುಣಾನಿಧಿ, ಸಮುದಾಯ ಸಾಂಸ್ಕೃತಿಕ ಸಂಘಟನೆಯ ಅಧ್ಯಕ್ಷ ದಯಾನಂದ ಕಿನ್ನಾಳ್ ಪಾಲ್ಗೊಂಡಿದ್ದರು
ಹೊಸಪೇಟೆಯಲ್ಲಿ ಶನಿವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕ ನಾಗರಾಜ ಪತ್ತಾರ (ಬಲದಿಂದ), ಪ್ರಾಚಾರ್ಯ ಬಿ.ಜಿ. ಕನಕೇಶಮೂರ್ತಿ, ವಕೀಲ ಎ. ಕರುಣಾನಿಧಿ, ಸಮುದಾಯ ಸಾಂಸ್ಕೃತಿಕ ಸಂಘಟನೆಯ ಅಧ್ಯಕ್ಷ ದಯಾನಂದ ಕಿನ್ನಾಳ್ ಪಾಲ್ಗೊಂಡಿದ್ದರು   

ಹೊಸಪೇಟೆ (ವಿಜಯನಗರ): ‘ಬ್ರಿಟಿಷರಂತೆ ದೇಶದ ಕಾರ್ಪೊರೇಟ್‌ ಕಂಪನಿಗಳು ದೇಶದ ಸಂಪತ್ತು ಲೂಟಿ ಮಾಡುತ್ತಿವೆ. 1942ರಲ್ಲಿ ನಡೆದ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳವಳಿ ಮಾದರಿಯಲ್ಲಿ ಕಾರ್ಪೊರೇಟ್‌ ಕಂಪನಿಗಳು ಭಾರತ ಬಿಟ್ಟು ತೊಲಗಿ ಚಳವಳಿ ಆರಂಭಿಸಬೇಕಿದೆ’ ಎಂದು ಪ್ರಾಧ್ಯಾಪಕ ನಾಗರಾಜ ಪತ್ತಾರ ಹೇಳಿದರು.

‘ಕ್ವಿಟ್‌ ಇಂಡಿಯಾ ಚಳವಳಿ ಚಾರಿತ್ರಿಕ ಮಹತ್ವ ಹಾಗೂ ಪ್ರಸ್ತುತತೆ’ ಕುರಿತು ಶನಿವಾರ ಸಂಜೆ ನಗರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಡಚ್ಚರು, ಪೋರ್ಚಗೀಸರು, ಫ್ರೆಂಚರು ಬ್ರಿಟಿಷರಿಗಿಂತ ಮೊದಲೇ ಭಾರತಕ್ಕೆ ಬಂದಿದ್ದರು. ಆದರೆ, ಅವರು ವ್ಯಾಪಾರಕ್ಕಷ್ಟೇ ಸೀಮಿತರಾಗಿದ್ದರು. ಆದರೆ, ಬ್ರಿಟಿಷರು ಅವರನ್ನು ಮೂಲೆಗುಂಪು ಮಾಡಿ ಈ ದೇಶದ ಸಂಪತ್ತು ಲೂಟಿ ಮಾಡಿದಲ್ಲದೇ ಭಾರತೀಯರನ್ನು ಕನಿಷ್ಠ ಸೌಜನ್ಯದಿಂದ ನಡೆಸಿಕೊಳ್ಳಲಿಲ್ಲ. ಬ್ರಿಟಿಷರಂತೆ ಈ ದೇಶದ ಕಾರ್ಪೊರೇಟ್‌ ಕಂಪನಿಗಳು ವರ್ತಿಸುತ್ತಿವೆ’ ಎಂದರು.

ADVERTISEMENT

ಶಂಕರ್ ಆನಂದ್‌ ಸಿಂಗ್‌ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಬಿ.ಜಿ.ಕನಕೇಶಮೂರ್ತಿ ಉದ್ಘಾಟಿಸಿ, ‘ಅಡಿಗರು ಹಾಗೂ ಬೇಂದ್ರೆಯವರು ಬ್ರಿಟಿಷರನ್ನು ಹಾಗೂ ಅಂದಿನ ಪರಿಸ್ಥಿತಿಯನ್ನು ಕವಿತೆಗಳ ಮೂಲಕ ಟೀಕಿಸಿದ್ದರು’ ಎಂದು ಹೇಳಿದರು.

ವಕೀಲ ಎ. ಕರುಣಾನಿಧಿ ಮಾತನಾಡಿ, ‘ಅಂದಿನಂತೆಯೇ ಇಂದು ಪರಿಸ್ಥಿತಿ ಬಿಗಡಾಯಿಸಿದೆ. ಬ್ರಿಟಿಷರ ಒಡೆದಾಳುವ ನೀತಿಯನ್ನೇ ಇಂದಿನ ರಾಜಕಾರಣಿಗಳು ಮಾಡುತ್ತಿದ್ದಾರೆ. ಕಾಳಸಂತೆಯಲ್ಲಿ ದಿನಸಿಗಳು ಮಾರಾಟವಾಗುತ್ತಿವೆ. ಪೆಟ್ರೋಲ್, ಡೀಸೆಲ್ ಬೆಲೆಗಳು ಗಗನಕ್ಕೇರಿವೆ. ಕೃಷಿಕರು, ಶ್ರಮಿಕರು ಹಾಗೂ ದಲಿತರು ಬದುಕುವುದು ದುಸ್ತರವಾಗಿದೆ’ ಎಂದರು.

ಸಮುದಾಯ ಸಾಂಸ್ಕೃತಿಕ ಸಂಘಟನೆಯ ಅಧ್ಯಕ್ಷ ದಯಾನಂದ ಕಿನ್ನಾಳ್, ‘ದೇಶದ ಸ್ವಾತಂತ್ರ್ಯಕ್ಕಾಗಿ ಅಂದು ಬಹಳಷ್ಟು ಜನ ಹುತಾತ್ಮರಾದರು. ಸ್ವಾತಂತ್ರ್ಯವೇನೋ ಬಂತು. ಆದರೆ ಅವರು ಕಂಡ ಕನಸುಗಳು ನನಸಾಗಲಿಲ್ಲ. ಅನ್ನ, ನೀರು, ಶಿಕ್ಷಣ ಇವುಗಳು ಇಂದಿಗೂ ಸಮಾಜಕ್ಕೆ ಮರೀಚಿಕೆಯಾಗಿದೆ’ ಎಂದರು.

ಪ್ರಾಧ್ಯಾಪಕ ಕಿಚಿಡಿ ಚನ್ನಪ್ಪ, ಯತ್ನಳ್ಳಿ ಮಲ್ಲಯ್ಯ, ಬಸವರಾಜ, ಕ್ಯಾದಿಗಿಹಾಳ್ ಉದೇದಪ್ಪ, ಧರ್ಮನಗೌಡ, ವಿ.ಪರಶುರಾಮ, ತಾಯಪ್ಪ ನಾಯಕ, ಭಾಸ್ಕರ್‌ ರೆಡ್ಡಿ, ಮಲ್ಲಿಕಾರ್ಜುನ ಮಾನ್ಪಡೆ, ಸೋ.ದಾ.ವಿರುಪಾಕ್ಷಗೌಡ, ರೀನಾ ನಂದನ್, ರಜಿಯಾ, ಉಮಾಮಹೇಶ್ವರ, ಎರಿಸ್ವಾಮಿ, ಅಂಜಲಿ ಬೆಳಗಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.