ಹೊಸಪೇಟೆ (ವಿಜಯನಗರ): ನಗರದಲ್ಲಿ ಉಲ್ಬಣಗೊಳ್ಳುತ್ತಿರುವ ಕೋವಿಡ್–19 ಪ್ರಕರಣಗಳನ್ನು ನಿಯಂತ್ರಿಸಲು ಹಾಗೂ ರೋಗಲಕ್ಷಣ ಇರುವವರನ್ನು ಪತ್ತೆಹಚ್ಚಲು ಜಿಲ್ಲಾಡಳಿತವು ಹಮ್ಮಿಕೊಂಡಿರುವ ಕೊರೊನಾ ಸಮೀಕ್ಷೆಗೆ ಶುಕ್ರವಾರ ನಗರದಲ್ಲಿ ಚಾಲನೆ ನೀಡಲಾಯಿತು.
ಸಮೀಕ್ಷೆಗೆ ರಚಿಸಲಾಗಿರುವ ಐದು ಜನರನ್ನು ಒಳಗೊಂಡ 20 ತಂಡಕ್ಕೆ ಮಾಸ್ಕ್, ಥರ್ಮಲ್ ಸ್ಕ್ಯಾನರ್, ಆಕ್ಸಿಮೀಟರ್ ವಿತರಿಸಿ ಮಾತನಾಡಿದ ಉಪವಿಭಾಗಧಿಕಾರಿ ಸಿದ್ದರಾಮೇಶ್ವರ, ‘ರೋಗಲಕ್ಷಣ ಇರುವವರನ್ನು ಪತ್ತೆ ಹತ್ತಲು ಸಮೀಕ್ಷೆ ಸಹಾಯಕವಾಗಿದೆ. ಸಮೀಕ್ಷೆ ಕೈಗೊಳ್ಳುವ ಪ್ರತಿಯೊಬ್ಬರು ಮಾಹಿತಿಗಳನ್ನು ಶೀಘ್ರವಾಗಿ ಪಡೆದರೆ ವೈದ್ಯರಿಗೆ ಚಿಕಿತ್ಸೆ ಒದಗಿಸಲು ಸಾಧ್ಯವಾಗುತ್ತದೆ. ಸೋಂಕು ಹರಡುವಿಕೆಯನ್ನು ತಡೆಗಟ್ಟಬಹುದು. ಸಮೀಕ್ಷೆ ಚುರುಕಾಗಿ ನಡೆಸಬೇಕು’ ಎಂದು ಹೇಳಿದರು.
ತಾಲ್ಲೂಕು ಮಟ್ಟದ ನೋಡಲ್ ಅಧಿಕಾರಿ, ಅಂಗನವಾಡಿ, ಆಶಾ ಕಾರ್ಯಕರ್ತೆ ಹಾಗೂ ಸ್ವಯಂ ಸೇವಕರನ್ನು ಒಳಗೊಂಡ ಪ್ರತಿ ತಂಡವು ನಗರದ ಎಲ್ಲಾ ವಾರ್ಡಿಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಲಿದೆ. ಕಳೆದ ಎರಡು ತಿಂಗಳಿಂದ ನಗರಕ್ಕೆ ವಲಸೆ ಬಂದವರ, ವರ್ಗಾವಣೆಗೊಂಡು ಇಲ್ಲಿಗೆ ಬಂದವರು ಹಾಗೂ ರೋಗಲಕ್ಷಣ ಹೊಂದಿದವರು, ಸೋಂಕಿನಿಂದ ಗುಣಮುಖರಾದವರ ಮಾಹಿತಿ ಕಲೆ ಹಾಕಲಾಗುತ್ತದೆ.
ತಹಶೀಲ್ದಾರ್ ಎಚ್.ವಿಶ್ವನಾಥ್, ನಗರಸಭೆ ಪೌರಾಯುಕ್ತ ಮನ್ಸೂರ್ ಅಲಿ, ಕಂದಾಯ ಇಲಾಖೆಯ ಮಲ್ಲಿಕಾರ್ಜುನ ಗೌಡ, ಬಸವರಾಜ ಬೆಣ್ಣೆ, ತಾಲ್ಲೂಕು ನೋಡಲ್ ಅಧಿಕಾರಿಗಳು, ಸ್ವಯಂ ಸೇವಕರು ಇದ್ದರು.
ಆನ್ ಲೈನ್ ಸಮೀಕ್ಷೆ
ಕೋವಿಡ್–19 ಸಮೀಕ್ಷೆಯು ಗೂಗಲ್ ಡಾಕುಮೆಂಟ್ಸ್ ಮೂಲಕ ಆನ್ ಲೈನ್ನಲ್ಲಿ ಮೊದಲ ಬಾರಿಗೆ ನಡೆಸಲಾಗುತ್ತಿದೆ. ಕುಟುಂಬ ಸದಸ್ಯರ ಮಾಹಿತಿ ಹಾಗೂ ಚಿಕಿತ್ಸೆ ಪಡೆಯುತ್ತಿರುವವರ ಕುರಿತ ಪ್ರಶ್ನೋತ್ತರಗಳನ್ನು ಮೂಲಕ ವಿವರ ದಾಖಲಿಸಲಾಗುತ್ತದೆ. ಸಮೀಕ್ಷೆ ಪೂರ್ಣಗೊಳಿಸಿದ ನಂತರ ವೈದ್ಯರ ತಂಡಕ್ಕೆ ಮಾಹಿತಿ ನೀಡಲಾಗುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.