ಹೊಸಪೇಟೆ: ಕೋವಿಡ್ ಲಸಿಕೆ ಹಾಕುವ ಪ್ರಯೋಗದ (ಡ್ರೈ ರನ್) ಅಣಕು ಪ್ರದರ್ಶನ ನಗರ ಹೊರವಲಯದ ಟಿಎಂಎಇ ಆಯುರ್ವೇದಿಕ್ ಕಾಲೇಜಿನಲ್ಲಿ ಶುಕ್ರವಾರ ನಡೆಯಿತು.
ಮಾಸ್ಕ್ ಧರಿಸುವಿಕೆ, ಅಂತರ ಕಾಯ್ದುಕೊಳ್ಳುವಿಕೆ, ಪದೇ ಪದೇ ಕೈತೊಳೆದುಕೊಳ್ಳುವ ಸೂಚನಾ ಫಲಕ ಹೊರಭಾಗದಲ್ಲಿ ಗಮನ ಸೆಳೆಯಿತು. ನೋಂದಣಿ ಕೊಠಡಿ, ನಿರೀಕ್ಷಣಾ ಕೊಠಡಿ, ಲಸಿಕಾ ಕೊಠಡಿಗಳೆಂದು ಆಯಾ ಕೊಠಡಿಗಳ ಮೇಲೆ ಹೆಸರು ನಮೂದಿಸಲಾಗಿತ್ತು. ಅಂತರದಿಂದ ಜನ ನಿಂತುಕೊಳ್ಳಲು ಜಾಗ ಗುರುತಿಸಲಾಗಿತ್ತು.
ನರ್ಸ್ ಒಬ್ಬರು ಸಾಂಕೇತಿಕವಾಗಿ ಯುವತಿಗೆ ಲಸಿಕೆ ಹಾಕುವ ವಿಧಾನ ತೋರಿಸಿದರು. ಲಸಿಕೆ ಸಂಗ್ರಹ, ಲಸಿಕೆ ಹಾಕಿದ ನಂತರ ಅವುಗಳ ವಿಲೇವಾರಿ ಮಾಡುವ ಬಗೆ ತೋರಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಭಾಸ್ಕರ್, ‘ಶೀಘ್ರದಲ್ಲೇ ಲಸಿಕೆ ಬರುವ ಸಾಧ್ಯತೆ ಇರುವುದರಿಂದ ರಾಜ್ಯ ಸರ್ಕಾರದ ಸೂಚನೆ ಮೇರೆಗೆ ಲಸಿಕೆ ಹಾಕುವುದರ ಬಗ್ಗೆ ಅಣಕು ಪ್ರಯೋಗ ಮಾಡಲಾಗುತ್ತಿದೆ. ಲಸಿಕೆ ಹೊರತುಪಡಿಸಿ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅದರ ಅಣಕು ಪ್ರಯೋಗ ಮಾಡಲಾಗಿದೆ. ಇನ್ನು ಕೆಲವು ದಿನಗಳ ವರೆಗೆ ಇದೇ ರೀತಿ ನಡೆಯಲಿದೆ. ಯಾವುದಾದರೂ ಕುಂದು ಕೊರತೆಗಳು ಕಂಡು ಬಂದರೆ ಸರಿಪಡಿಸಲಾಗುವುದು. ಲಸಿಕೆಯನ್ನು ವ್ಯವಸ್ಥಿತವಾಗಿ ಹಾಕುವುದು ಇದರ ಮುಖ್ಯ ಉದ್ದೇಶ’ ಎಂದು ಹೇಳಿದರು.
‘ತಾಲ್ಲೂಕು ವ್ಯಾಪ್ತಿಯಲ್ಲಿ ಸರ್ಕಾರಿ ಆಸ್ಪತ್ರೆಯ 1,600, ಖಾಸಗಿ ಆಸ್ಪತ್ರೆಯ 900 ಸಿಬ್ಬಂದಿಗೆ ಮೊದಲು ಲಸಿಕೆ ನೀಡಲಾಗುತ್ತದೆ. ಸರ್ಕಾರದ ಪೋರ್ಟಲ್ನಲ್ಲಿ ಹೆಸರು ನೋಂದಣಿ ಮಾಡಿಸಿಕೊಂಡವರಿಗೆ ಬಳಿಕ ಲಸಿಕೆ ಕೊಡಲಾಗುತ್ತದೆ’ ಎಂದು ಮಾಹಿತಿ ಹಂಚಿಕೊಂಡರು.
ಟಿಎಂಎಇ ಆಯುರ್ವೇದಿಕ್ ಕಾಲೇಜಿನ ಪ್ರಾಚಾರ್ಯ ಡಾ. ಕೇದಾರೇಶ್ವರ ದಂಡಿನ್, ಡಾ. ನಟರಾಜ, ಡಾ. ಸಂತೋಷ, ಡಾ. ಕಾರ್ತಿಕ್, ಡಾ. ವಿಜಯಕುಮಾರ, ಡಾ. ಮಹೇಶ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.