ADVERTISEMENT

ಸಾಂಸ್ಕೃತಿಕ ಸಂಭ್ರಮ: ಕೇಂದ್ರ ಕಾರಾಗೃಹದಲ್ಲಿ ನಗೆಗಡಲು!

ಹಂದ್ಯಾಳ್ ಮಹಾದೇವ ತಾತ ಕಲಾಸಂಘದ ಸಾಂಸ್ಕೃತಿಕ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2018, 13:43 IST
Last Updated 16 ಸೆಪ್ಟೆಂಬರ್ 2018, 13:43 IST
ಬಳ್ಳಾರಿಯ ಕೇಂದ್ರ ಕಾರಾಗೃಹದಲ್ಲಿ ಭಾನುವಾರ ಹಂದ್ಯಾಳ್‌ ಮಹಾದೇವ ತಾತ ಕಲಾಸಂಘದ ಕಲಾವಿದರು ಅಭಿನಯಿಸಿದ ‘ದ್ರೌಪದಿ ವಸ್ತ್ರಾಪಹರಣ’ ನಾಟಕದಲ್ಲಿ ದುಶ್ಯಾಸನ ಪಾತ್ರಧಾರಿ ವೇದಿಕೆಯಿಂದ ಕೆಳಗಿಳಿದು ಬಂದು ಸಭಿಕರಲ್ಲಿ ನಗೆಯುಕ್ಕಿಸಿದರು.
ಬಳ್ಳಾರಿಯ ಕೇಂದ್ರ ಕಾರಾಗೃಹದಲ್ಲಿ ಭಾನುವಾರ ಹಂದ್ಯಾಳ್‌ ಮಹಾದೇವ ತಾತ ಕಲಾಸಂಘದ ಕಲಾವಿದರು ಅಭಿನಯಿಸಿದ ‘ದ್ರೌಪದಿ ವಸ್ತ್ರಾಪಹರಣ’ ನಾಟಕದಲ್ಲಿ ದುಶ್ಯಾಸನ ಪಾತ್ರಧಾರಿ ವೇದಿಕೆಯಿಂದ ಕೆಳಗಿಳಿದು ಬಂದು ಸಭಿಕರಲ್ಲಿ ನಗೆಯುಕ್ಕಿಸಿದರು.   

ಬಳ್ಳಾರಿ: ನಗರದ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಭಾನುವಾರ ನಗೆಗಡಲು ಉಕ್ಕೇರಿತ್ತು.

ನಗೆಯ ಅಲೆಗಳ ಮೇಲೆ ಉಯ್ಯಾಲೆಯಾಡಿದ ನೂರಾರು ಕೈದಿಗಳು ತಮ್ಮ ನಿತ್ಯದ ಬಿಗುವಿನ ಹೊಣೆಯ ನಡುವೆ ಎಲ್ಲ ಚಿಂತೆ ಮರೆತು ಮನಸಾರೆ ನಕ್ಕರು.

ಕೈದಿಗಳ ಮನೋಲ್ಲಾಸಕ್ಕೆ ಕಾರಣವಾಗಿದ್ದು ಹಂದ್ಯಾಳ್‌ ಮಹಾದೇವ ತಾತ ಕಲಾಸಂಘ ಏರ್ಪಡಿಸಿದ್ದ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ. ಅದರಲ್ಲೂ ಶಂಕರನಾಯ್ಡು ಅವರ ‘ದ್ರೌಪದಿ ವಸ್ತ್ರಾಪಹರಣ’ ನಾಟಕವು ತನ್ನ ಆಧುನಿಕ ಸ್ವರೂಪದಿಂದ ವಿಶೇಷ ಗಮನ ಸೆಳೆಯಿತು. ನಾಟಕದ ಪಾತ್ರಧಾರಿಗಳು ವೇದಿಕೆಗಷ್ಟೇ ಸೀಮಿತವಾಗದೆ ಕೈದಿ ಸಭಿಕರ ನಡುವೆಯೂ ನಡೆದಾಡಿ ಹೊಸ ಹುರುಪು ತಂದರು.

ADVERTISEMENT

ಪೌರಾಣಿಕ ನಾಟಕಕ್ಕೆ ಆಧುನಿಕತೆಯ ಸ್ಪರ್ಷ ನೀಡಿದ್ದ ನಾಟಕದ ಸಂಭಾಷಣೆಗಳು ಕೈದಿಗಳಲ್ಲಿ ನಗೆ ಉಕ್ಕಿಸಿದವು. ಪುರುಷೋತ್ತಮ ಹಂದ್ಯಾಳ್ (ಸಾರಥಿ), ಚಂದ್ರಶೇಖರ್ ಆಚಾರಿ (ಗಣಪತಿ), ಅಂಬರೀಷ್(ದುರ್ಯೋಧನ), ಪಾರ್ವತಿ ಗೆಣಕಿಹಾಳ್ (ದುಶ್ಯಾಸನ), ವಿಜಯ್ ಆದೋನಿ (ದ್ರೌಪದಿ), ಎ.ಎರ್ರಿಸ್ವಾಮಿ (ಕೃಷ್ಣ), ಜಡೇಶ್ (ಭೀಮ), ಪುರುಷೋತ್ತಮ ಗೌಡ (ಗೌಡ), ಎಂ.ಅಹಿರಾಜ್‌ (ಕುಡುಕ) ಅವರೊಂದಿಗೆ ಕೈದಿಗಳಾದ ಸಿದ್ಧರೂಢ, ಸಿದ್ದಪ್ಪ ಅವರೂ ಅಭಿನಯಿಸಿ ಗಮನ ಸೆಳೆದರು. ಸಂಘದ ಜಡೇಶ ಮತ್ತು ತಂಡದವರು ಪ್ರಸ್ತುತಪಡಿಸಿದ ಜನಪದ ಮತ್ತು ತತ್ವ ಗೀತೆಗಳ ಗಾಯನವೂ ಗಮನ ಸೆಳೆಯಿತು.

‘ಕೈದಿಗಳ ಮನದ ನೋವು ಮರೆಯಲು ಇಂಥ ಸಾಂಸ್ಕೃತಿಕ ಕಾರ್ಯಕ್ರಮಗಳು ಅತ್ಯಗತ್ಯ’ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕ ಸಂಸ್ಥೆಯ ಉಪಾಧ್ಯಕ್ಷ ಬಿ.ಮಹಾರುದ್ರಗೌಡ ಹೇಳಿದರು.

ಕಾರಾಗೃಹದ ಅಧೀಕ್ಷಕ ಡಾ.ಪಿ.ರಂಗನಾಥ ಅಧ್ಯಕ್ಷತೆ ವಹಿಸಿದ್ದರು. ಕಾರಗೃಹದಲ್ಲಿ ಶಾಶ್ವತ ವೇದಿಕೆ ನಿರ್ಮಿಸಿಕೊಟ್ಟ ಉದ್ಯಮಿ ಟಪಾಲ್ ನವೀನ್‌ ಅವರನ್ನು ಗಣ್ಯರು ಸನ್ಮಾನಿಸಿದರು.

ಗ್ರಾಮೀಣ ಸಿಪಿಐ ಪ್ರಸಾದ್ ಗೋಖುಲೆ, ಕಲಾವಿದರಾದ ಸಿದ್ದಪ್ಪ ದಳವಾಯಿ, ಎನ್.ಮಂಜುನಾಥ ಸೋಮಸಮುದ್ರ, ಪಿಎಸ್‌ಐ ಎನ್.ಚಿದಾನಂದ, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.