ಸಂಡೂರು: ತಾಲ್ಲೂಕಿನ ಐತಿಹಾಸಿಕ ದರೋಜಿ ಕೆರೆಯ ನೀರು ಸಂಪೂರ್ಣ ಹಸಿರು ಬಣ್ಣಕ್ಕೆ ತಿರುಗಿದ್ದು, ರೈತಾಪಿ ಜನರು, ಮೀನಿನ ಗುತ್ತಿಗೆದಾರರು ಆತಂಕಕ್ಕೆ ಒಳಗಾಗಿದ್ದಾರೆ.
ಕೆರೆಯ ಸಮೀಪದಲ್ಲಿರುವ ಸಣ್ಣ, ಬೃಹತ್ ಪ್ರಮಾಣದ ಕೈಗಾರಿಕೆಗಳ ಘನ ತ್ಯಾಜ್ಯ, ಕಲುಷಿತ ನೀರು ಹಳ್ಳಗಳ ಮೂಲಕ ದರೋಜಿ ಕೆರೆ ಸೇರುವುರಿಂದ ಕೆರೆಯ ನೀರು ಹಸಿರು ಬಣ್ಣಕ್ಕೆ ತಿರುಗಿದೆ ಎಂಬುದು ಸ್ಥಳೀಯರ ಆರೋಪವಾಗಿದೆ.
ಕೆರೆಯಲ್ಲಿರುವ ಮೀನು ಸೇರಿದಂತೆ ಇತರ ಜಲಚರಗಳು ಸಾಯುವ ಹಂತಕ್ಕೆ ತಲುಪಿದ್ದು, ಸಂಬಂಧಪಟ್ಟ ಪರಿಸರ ಮಾಲಿನ್ಯ ಮಂಡಳಿಯ ಅಧಿಕಾರಿಗಳು ಕೈಗಾರಿಕೆಗಳ ಮಾಲೀಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಈ ಕೆರೆಯ ನೀರನ್ನು 10 ಗ್ರಾಮಗಳ ರೈತರು ನೂರಾರು ಎಕರೆಯ ಜಮೀನುಗಳಿಗೆ ನೀರಾವರಿಗಾಗಿ ಬಳಕೆ ಮಾಡಿಕೊಂಡು ಭತ್ತ, ಮೆಣಸಿನಕಾಯಿ, ಮೆಕ್ಕೆಜೋಳ, ಇತರ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಬೆಳೆಗಳ ಇಳುವರಿ ಕಡಿಮೆಯಾಗಿ ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗುವ ಭೀತಿ ರೈತರಲ್ಲಿ ಉಂಟಾಗಿದೆ.
ಮೀನುಗಾರಿಕೆ ಗುತ್ತಿಗೆದಾರರು ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಮೀನಿನ ಮರಿಗಳನ್ನು ಕೆರೆಯಲ್ಲಿ ಬಿಟ್ಟು ಮೀನುಗಾರಿಕೆ ನಡೆಸುತ್ತಿದ್ದು, ನೀರು ಹಸಿರು ಬಣ್ಣಕ್ಕೆ ತಿರುಗಿರುವುದರಿಂದ ಗುತ್ತಿಗೆದಾರರು ಸಹ ಆತಂಕಕ್ಕೆ ಒಳಗಾಗಿದ್ದಾರೆ.
ಈ ಪ್ರದೇಶದಲ್ಲಿ ಐತಿಹಾಸಿಕ ದರೋಜಿ ಕರಡಿ ಧಾಮವಿದ್ದು, ಈ ಕೆರೆಯು ಕರಡಿಗಳಿಗೆ, ಇತರ ವನ್ಯ ಜೀವಿಗಳಿಗೆ ದಾಹ ತಣಿಸುವ ಜಲಮೂಲವಾಗಿದೆ. ವನ್ಯ ಜೀವಿಗಳು ಈ ಹಸಿರು ಬಣ್ಣಕ್ಕೆ ತಿರುಗಿದ ನೀರನ್ನು ಸೇವಿಸುವುದರಿಂದ ಹೆಚ್ಚಿನ ಅನಾಹುತ ಸಂಭವಿಸಬಹುದು ಎಂದು ಜನರು ಆತಂಕ ವ್ಯಕ್ತಪಡಿಸಿದ್ದಾರೆ.
‘ಮಾಲಿನ್ಯಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಿ’ ‘
ಜಿಂದಾಲ್ ಕಾರ್ಖಾನೆ ಸೇರಿದಂತೆ ಇತರ ಸಣ್ಣ ಬೃಹತ್ ಪ್ರಮಾಣದ ಕೈಗಾರಿಕೆಗಳ ಘನತ್ಯಾಜ್ಯ ಕಲುಷಿತ ನೀರು ಹಳ್ಳಗಳ ಮೂಲಕ ದರೋಜಿ ಕೆರೆ ಸೇರುತ್ತಿರುವುದರಿಂದ ಕೆರೆಯ ನೀರು ಹಸಿರು ಬಣ್ಣಕ್ಕೆ ತಿರುಗಿರುವ ಸಾಧ್ಯತೆಯಿದೆ. ಪರಿಸರ ಇಲಾಖೆಯ ಅಧಿಕಾರಿಗಳು ಜಿಲ್ಲಾಡಳಿತ ಮಾಲಿನ್ಯಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಿಪಿಎಂ ಸಂಡೂರು ತಾಲ್ಲೂಕು ಘಟಕದ ಕಾರ್ಯದರ್ಶಿ ಎ. ಸ್ವಾಮಿ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.