ADVERTISEMENT

ವಿಜಯನಗರ: ಎಲ್‌ಪಿಜಿ ಗ್ಯಾಸ್‌ ಬಂಕ್‌ ಹೆಚ್ಚಳಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2022, 11:04 IST
Last Updated 4 ಫೆಬ್ರುವರಿ 2022, 11:04 IST
ವಿಜಯನಗರ ಆಟೊ ಚಾಲಕರ ಸಂಘದವರು ಶುಕ್ರವಾರ ಹೊಸಪೇಟೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು
ವಿಜಯನಗರ ಆಟೊ ಚಾಲಕರ ಸಂಘದವರು ಶುಕ್ರವಾರ ಹೊಸಪೇಟೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು   

ಹೊಸಪೇಟೆ (ವಿಜಯನಗರ): ವಾಹನಗಳ ಸಂಖ್ಯೆ ಆಧರಿಸಿ ಎಲ್‌ಪಿಜಿ ಗ್ಯಾಸ್‌ ಬಂಕ್‌ಗಳ ಸಂಖ್ಯೆ ಹೆಚ್ಚಿಸಬೇಕೆಂದು ವಿಜಯನಗರ ಆಟೊ ಚಾಲಕರ ಸಂಘ ಆಗ್ರಹಿಸಿದೆ.

ನಗರದಲ್ಲಿ ಸಾವಿರಕ್ಕಿಂತ ಹೆಚ್ಚು ಆಟೊಗಳು ಎಲ್‌ಪಿಜಿ ಗ್ಯಾಸ್‌ಗಳ ಮೇಲೆ ಚಲಿಸುತ್ತವೆ. ಆದರೆ, ನಗರದಲ್ಲಿ ಒಂದೇ ಗ್ಯಾಸ್‌ ಬಂಕ್‌ ಇದೆ. ಅದು ಕೂಡ ಕೆಟ್ಟು ಹೋದರೆ ಬಹಳ ಸಮಸ್ಯೆ ಉಂಟಾಗುತ್ತದೆ. ಹೇಳಿ ಕೇಳಿ ನಗರ ಪ್ರವಾಸಿ ತಾಣ. ದೇಶ–ವಿದೇಶಗಳಿಂದ ನಿತ್ಯ ನೂರಾರು ಜನ ಬಂದು ಹೋಗುತ್ತಾರೆ. ಬಂಕ್‌ ಸಂಖ್ಯೆ ಹೆಚ್ಚಿಸಿದರೆ ಅನುಕೂಲವಾಗುತ್ತದೆ ಎಂದು ಶುಕ್ರವಾರ ಜಿಲ್ಲಾಧಿಕಾರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಒತ್ತಾಯ ಮಾಡಿದೆ.

ಒಂದೇ ಬಂಕ್‌ ಇರುವುದರಿಂದ ಗ್ಯಾಸ್‌ ತುಂಬಿಸಿಕೊಳ್ಳಲು ತಡಹೊತ್ತು ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಇದೆ. ವಾಹನಗಳ ಸಂಖ್ಯೆಗೆ ತಕ್ಕಂತೆ ಹೆಚ್ಚಿಸಬೇಕು. ರಾತ್ರಿ ವೇಳೆಯೂ ಸೇವೆ ಕಲ್ಪಿಸಬೇಕು. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ನಮ್ಮಲ್ಲಿ ಬೆಲೆ ಹೆಚ್ಚಿದ್ದು, ಅದನ್ನು ಮರು ಪರಿಶೀಲಿಸಬೇಕು. ಆಟೊ ನಿಲ್ದಾಣ ಮೇಲ್ದರ್ಜೆಗೇರಿಸಬೇಕು. ಆಟೊ ಚಾಲಕರಿಗೆ ಆಶ್ರಯ ಮನೆ ಕೊಡಬೇಕು. ಆಟೊ ಕನಿಷ್ಠ ದರ ಹೆಚ್ಚಿಸಬೇಕು ಎಂದು ಸಂಘ ಆಗ್ರಹಿಸಿದೆ.

ADVERTISEMENT

ಸಂಘದ ಉಪಾಧ್ಯಕ್ಷ ಎಸ್‌.ತಿಪ್ಪೆಸ್ವಾಮಿ, ಪ್ರಧಾನ ಕಾರ್ಯದರ್ಶಿ ವೈ. ರಾಮಚಂದ್ರಬಾಬು, ಮುಖಂಡ ಡಿ. ವೆಂಕಟರಮಣ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.