ವಿಜಯನಗರ (ಹೊಸಪೇಟೆ): ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೆ ತರುವಂತೆ ಆಗ್ರಹಿಸಿ ತಾಲ್ಲೂಕು ವಕೀಲರ ಸಂಘದವರು ಸೋಮವಾರ ನಗರದ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ರಾಜ್ಯಪಾಲ ವಜುಭಾಯಿ ವಾಲಾ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಗೃಹಸಚಿವ ಬಸವರಾಜ ಬೊಮ್ಮಾಯಿ ಅವರ ಹೆಸರಿಗೆ ಬರೆದ ಮನವಿ ಪತ್ರವನ್ನು ಗ್ರೇಡ್–2 ತಹಶೀಲ್ದಾರ್ ಮೇಘನಾ ಅವರಿಗೆ ಸಲ್ಲಿಸಿದರು.
‘ನ್ಯಾಯಾಲಯದ ಆವರಣದಲ್ಲಿ ವಕೀಲ ತಾರಿಹಳ್ಳಿ ವೆಂಕಟೇಶ್ ಅವರ ಹತ್ಯೆ ನಡೆದಿರುವುದು ಖಂಡನೀಯ. ತೆಲಂಗಾಣದಲ್ಲಿ ಇತ್ತೀಚೆಗೆ ವಕೀಲ ದಂಪತಿಯ ಕೊಲೆ ನಡೆದಿದೆ. ಅಲ್ಲಲ್ಲಿ ಹಲ್ಲೆ ಸೇರಿದಂತೆ ಇತರೆ ಘಟನೆಗಳು ವರದಿಯಾಗಿವೆ. ಹೀಗಿದ್ದರೂ ವಕೀಲರ ರಕ್ಷಣಾ ಕಾಯ್ದೆ ಜಾರಿಗೆ ತರದಿರುವುದು ದುರದೃಷ್ಟಕರ’ ಎಂದು ಹಿರಿಯ ವಕೀಲ ಪ್ರಭಾಕರ ರಾವ್ ಹೇಳಿದರು.
‘ಕೊಲೆಗೆ ಕಾರಣ ಏನೇ ಇದ್ದರೂ ಕಾನೂನಿನ ಅಡಿಯಲ್ಲಿ ರಕ್ಷಣೆ ಸಿಗಬೇಕು. ಎಲ್ಲ ವೃತ್ತಿನಿರತರಿಗೆ ರಕ್ಷಣೆ ಇದೆ. ಆದರೆ, ವಕೀಲರಿಗೆ ರಕ್ಷಣೆ ಇಲ್ಲ. ಕಕ್ಷಿದಾರರಿಗೆ ನ್ಯಾಯ ಕೊಡಿಸುವ ಭರದಲ್ಲಿ ವಕೀಲರು ಅವರ ರಕ್ಷಣೆ ಮರೆತು ಹೋಗುತ್ತಿದ್ದಾರೆ. ಸರ್ಕಾರ ಗಮನ ಹರಿಸಿ ಆದಷ್ಟು ಶೀಘ್ರ ಕಾನೂನು ಜಾರಿಗೆ ತರಬೇಕು’ ಎಂದು ಸಂಘದ ತಾಲ್ಲೂಕು ಅಧ್ಯಕ್ಷ ತಾರಿಹಳ್ಳಿ ಹನುಮಂತಪ್ಪ ಒತ್ತಾಯಿಸಿದರು.
‘ಸರ್ಕಾರದಿಂದ ವಕೀಲರಿಗೆ ರಕ್ಷಣೆ ಕೊಡಲು ಸಾಧ್ಯವಾಗುತ್ತಿಲ್ಲ. ವಕೀಲರ ಸಂರಕ್ಷಣಾ ಕಾಯ್ದೆ ಸದನದಲ್ಲಿ ಮಂಡಿಸಿ ಜಾರಿಗೆ ತರಬೇಕು’ ಎಂದು ವಕೀಲ ಪ್ರಹ್ಲಾದ್ ಆಗ್ರಹಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.