ADVERTISEMENT

9ರಂದು ‘ಸೂರಿಗಾಗಿ ನಮ್ಮ ನಡಿಗೆ’

ರೈಲ್ವೆ ಜಾಗದಿಂದ ತೆರವಾಗುವವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2019, 12:57 IST
Last Updated 6 ಆಗಸ್ಟ್ 2019, 12:57 IST

ಹೊಸಪೇಟೆ: ‘ನಗರದ ರೈಲು ನಿಲ್ದಾಣಕ್ಕೆ ಹೊಂದಿಕೊಂಡಂತಿರುವ 88 ಮುದ್ಲಾಪುರದ ಜನರಿಗೆ ಬೇರೆಡೆ ಸೂರು ಕಲ್ಪಿಸಲು ನಗರಸಭೆ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಆ. 9ರಂದು ‘ಸೂರಿಗಾಗಿ ನಮ್ಮ ನಡಿಗೆ’ ಹೋರಾಟ ಹಮ್ಮಿಕೊಳ್ಳಲಾಗಿದೆ’ ಎಂದುಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಕೇಂದ್ರ ಸಮಿತಿ ಸದಸ್ಯ ಕರಿಯಪ್ಪ ಗುಡಿಮನಿ ಹೇಳಿದರು.

ಮಂಗಳವಾರ 88 ಮುದ್ಲಾಪುರದಲ್ಲಿ ಸ್ಥಳೀಯ ಜನರನ್ನು ಭೇಟಿ ಮಾಡಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಂದು ಬೆಳಿಗ್ಗೆ ಹತ್ತು ಗಂಟೆಗೆ ಮುದ್ಲಾಪುರದಿಂದ ನಗರಸಭೆ ವರೆಗೆ ಪ್ರತಿಭಟನಾ ರ್‍ಯಾಲಿ ನಡೆಸಲಾಗುವುದು. ನಂತರ ಪೌರಾಯುಕ್ತರಿಗೆ ಮನವಿ ಪತ್ರ ಸಲ್ಲಿಸಲಾಗುವುದು. ಒಂದುವೇಳೆ ಅವರಿಂದ ಖಚಿತ ಭರವಸೆ ಸಿಗದಿದ್ದರೆ ನಗರಸಭೆ ಆವರಣದಲ್ಲೇ ಠಿಕಾಣಿ ಹೂಡಲಾಗುವುದು. ಬೇಡಿಕೆ ಈಡೇರುವವರೆಗೆ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು’ ಎಂದು ತಿಳಿಸಿದರು.

‘ತುಂಗಭದ್ರಾ ಜಲಾಶಯ ಹಾಗೂ ಅದರ ಕಾಲುವೆಗಳ ನಿರ್ಮಾಣದ ಸಂದರ್ಭದಲ್ಲಿ ಆಂಧ್ರ ಪ್ರದೇಶ, ತಮಿಳುನಾಡು ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಸುಮಾರು 200 ಕುಟುಂಬಗಳು ಇಲ್ಲಿಗೆ ವಲಸೆ ಬಂದಿದ್ದವು. ಅಂದಿನಿಂದ ಇಂದಿನ ವರೆಗೆ ಆ ಕುಟುಂಬಗಳು ರೈಲ್ವೆ ಇಲಾಖೆಗೆ ಸೇರಿದ ಜಾಗದಲ್ಲಿ ಬದುಕು ನಡೆಸುತ್ತಿವೆ. ಈಗ ಆ ಜಾಗವನ್ನು ರೈಲ್ವೆ ಇಲಾಖೆಯು ಅಭಿವೃದ್ಧಿ ಪಡಿಸಲು ಮುಂದಾಗಿದೆ. ಮನೆಗಳನ್ನು ತೆರವುಗೊಳಿಸುವುದು ಅನಿವಾರ್ಯವಾಗಿದ್ದು, ಆ ಎಲ್ಲ ಕುಟುಂಬದವರಿಗೆ ನಗರದ ಬೇರೆ ಭಾಗದಲ್ಲಿ ಸೂರು ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಅಭಿವೃದ್ಧಿ ಕೆಲಸಗಳಿಗೆ ನಮ್ಮ ವಿರೋಧವಿಲ್ಲ. ನಗರ ಬೆಳೆಯುತ್ತಿದೆ. ಸಹಜವಾಗಿಯೇ ರೈಲು ನಿಲ್ದಾಣವನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಇಷ್ಟು ದಿನ ರೈಲ್ವೆ ಇಲಾಖೆಯವರು ಯಾವುದೇ ಕಿರಿಕಿರಿಯಿಲ್ಲದೆ ವಾಸಿಸಲು ಬಿಟ್ಟಿದ್ದಾರೆ. ಈಗ ಅವರು ಮನೆಗಳನ್ನು ತೆರವುಗೊಳಿಸುವಂತೆ ನೋಟಿಸ್‌ ಕೊಟ್ಟಿದ್ದಾರೆ. ಮನೆಗಳನ್ನು ತೆರವುಗೊಳಿಸಲು ಎಲ್ಲರೂ ಸಿದ್ಧರಿದ್ದಾರೆ. ಆದರೆ, ನಗರಸಭೆ ಬೇರೆಡೆ ನಿವೇಶನ ಕೊಟ್ಟು, ಮನೆ ನಿರ್ಮಿಸಿಕೊಡುವ ಖಚಿತ ಭರವಸೆ ಕೊಡಬೇಕು’ ಎಂದು ಆಗ್ರಹಿಸಿದರು.

‘ಎಲ್ಲ ಕುಟುಂಬದವರು ನಗರಕ್ಕೆ ಬಂದು ಸುಮಾರು 70ರಿಂದ 80 ವರ್ಷಗಳಾಗುತ್ತ ಬಂದಿವೆ. ಎಲ್ಲರ ಬಳಿ ರೇಷನ್‌, ಆಧಾರ್ ಕಾರ್ಡು, ಮತದಾರರ ಗುರುತಿನ ಚೀಟಿಗಳಿವೆ. ಅವರು ನಗರದ ಪ್ರಜೆಗಳಾಗಿದ್ದಾರೆ ಎನ್ನುವುದಕ್ಕೆ ಅವುಗಳೇ ಸಾಕ್ಷಿ. ಅವರನ್ನು ನಡು ನೀರಿನಲ್ಲಿ ಬಿಡುವುದು ಸರಿಯಲ್ಲ. ಈ ಕುರಿತು ಸ್ಥಳೀಯ ಜನಪ್ರತಿನಿಧಿಗಳು ನಗರಸಭೆಯ ಪೌರಾಯುಕ್ತರಿಗೆ ಸೂಚನೆ ಕೊಡಬೇಕು. ಯಾರೊಬ್ಬರೂ ಬೀದಿ ಪಾಲಾಗದಂತೆ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಮುಖಂಡರಾದ ಚೆನ್ನಮ್ಮ, ವಸಂತರಾಜ ಕಹಳೆ, ಶೇಖರ್‌, ಮಹದೇವ, ದೇವಪ್ಪ, ಸಂತೋಷ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.