ಹೊಸಪೇಟೆ: ರಾಜ್ಯ ಯುವಜನ ಆಯೋಗ ಸ್ಥಾಪನೆ ಕುರಿತು ಜಾಗೃತಿ ಮೂಡಿಸಲು ‘ಯುವಧ್ವನಿ’ ತಂಡವು ಸೋಮವಾರ ತಾಲ್ಲೂಕಿನ ಕಮಲಾಪುರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ತಂಡದ ಮುಖ್ಯಸ್ಥೆ ರೋಹಿಣಿ, ‘ಮಕ್ಕಳು, ಮಹಿಳೆಯರು ಮತ್ತು ಹಿರಿಯ ನಾಗರಿಕರಿಗೆ ವಿಶೇಷ ಹಕ್ಕುಗಳಿವೆ. ಆದರೆ, ರಾಜ್ಯದಲ್ಲಿರುವ 36 ಕೋಟಿ ಯುವಜನರಿಗೆ ಹಕ್ಕುಗಳಿಲ್ಲ. ಹಾಗಾಗಿ ಸರ್ಕಾರ ಯುವಜನರ ಹಕ್ಕುಗಳನ್ನು ಘೋಷಣೆ ಮಾಡಬೇಕು. ಯುವಜನರ ಹಕ್ಕುಗಳ ರಕ್ಷಣೆ, ಶಿಕ್ಷಣ ಮತ್ತು ಸಬಲೀಕರಣಕ್ಕೆ ಆದ್ಯತೆ ನೀಡಬೇಕು’ ಎಂದು ಆಗ್ರಹಿಸಿದರು.
‘ಯುವಜನರು ಆರ್ಥಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಹಲವಾರು ಒತ್ತಡಗಳನ್ನು ಎದುರಿಸುತ್ತಿದ್ದಾರೆ. ಶಿಕ್ಷಣಕ್ಕೆ ತಕ್ಕ ಕೆಲಸ, ಕೆಲಸಕ್ಕೆ ತಕ್ಕ ಸಂಬಳ ಸಿಗುತ್ತಿಲ್ಲ. ಕೆಲಸದ ಜಾಗದಲ್ಲಿ ಜಾತಿ, ಧರ್ಮ, ವರ್ಗದ ಕಾರಣಕ್ಕೆ ಅನ್ಯಾಯಕ್ಕೆ ಒಳಗಾಗುತ್ತಿದ್ದಾರೆ. ಲೈಂಗಿಕ ಅಲ್ಪಸಂಖ್ಯಾತರ ಸ್ಥಿತಿ ಇನ್ನೂ ಶೋಚನೀಯವಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
ಉಪಾಧ್ಯಕ್ಷೆ ಲಾವಣ್ಯ, ಕಾರ್ಯದರ್ಶಿ ವೆಂಕಟೇಶ್, ಸದಸ್ಯರಾದ ನಸ್ರೀನ್ ಮಿಠಾಯಿ, ಮೊಹಮ್ಮದ್ ಸೊಹೇಲ್, ನಿಂಗಪ್ಪ, ಯಲ್ಲಮ್ಮ, ಹೊನ್ನೂರ ಸ್ವಾಮಿ ಇದ್ದರು.
ಸ್ವಚ್ಛತೆಯ ಅರಿವು
ತಂಡದ ಸದಸ್ಯರು ತಾಲ್ಲೂಕಿನ ಕಾರಿಗನೂರು, ಇಂಗಳಗಿ, ವಡ್ಡರಹಳ್ಳಿಯಲ್ಲಿ ಸೋಮವಾರ ‘ಕಸಮುಕ್ತ ಸಮಾಜದೆಡೆಗೆ ನಮ್ಮ ನಡಿಗೆ’ ಹೆಸರಿನಲ್ಲಿ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಿದರು. ತಂಡದ ಮಂಜುಳಾ, ಮಾರೆಪ್ಪ, ರೇಣುಕಾ, ಜ್ಯೋತಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.