ಹೊಸಪೇಟೆ: ಡೆಂಗಿ, ಟೈಫಾಯ್ಡ ಪ್ರಕರಣಗಳು ಪತ್ತೆಯಾಗಿರುವ ತಾಲ್ಲೂಕಿನ ಸೀತಾರಾಮ ತಾಂಡಾಕ್ಕೆ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಭಾಸ್ಕರ್ ಅವರು ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸಾರ್ವಜನಿಕರು ನೀರು ಸಂಗ್ರಹಿಸಿ ಇಡುವ ತೊಟ್ಟಿ, ಕುಡಿಯುವ ನೀರು ಪೂರೈಕೆಯಾಗುವ ಪೈಪ್ಲೈನ್ ಹಾಗೂ ತೆರೆದ ಚರಂಡಿಗಳನ್ನು ಪರಿಶೀಲಿಸಿದರು.
‘ಗ್ರಾಮದಲ್ಲಿ ಅಶುದ್ಧ ಕುಡಿಯುವ ನೀರು ಪೂರೈಕೆಯಾಗುತ್ತಿರುವುದು ಪರೀಕ್ಷೆಯಿಂದ ದೃಢಪಟ್ಟಿದೆ. ಇದರಿಂದಾಗಿಯೇ ವಾರದ ಹಿಂದೆ ಎಂಟು ಜನರಿಗೆ ಡೆಂಗಿ, ಹಲವರಿಗೆ ಟೈಫಾಯ್ಡ್ ಆಗಿತ್ತು. ಯಾರೂ ನೀರು ಸಂಗ್ರಹಿಸಿ ಇಡಬಾರದು. ಕಾಯಿಸಿ, ಆರಿಸಿದ ನೀರು ಕುಡಿಯುವಂತೆ ಸಲಹೆ ಮಾಡಲಾಗಿದೆ. ಗ್ರಾಮದಲ್ಲಿಯೇ ಕ್ಲಿನಿಕ್ ತೆಗೆದು ಎಲ್ಲರ ಪರೀಕ್ಷೆ ನಡೆಸಲಾಗುತ್ತಿದೆ. ಈಗ ಹೊಸದಾಗಿ ಡೆಂಗಿ ಪ್ರಕರಣ ಪತ್ತೆಯಾಗಿಲ್ಲ. ಟೈಫಾಯ್ಡ್ ಪ್ರಕರಣಗಳಲ್ಲಿ ಸಾಕಷ್ಟು ಇಳಿಕೆಯಾಗಿದೆ’ ಎಂದು ಡಾ. ಭಾಸ್ಕರ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಸ್ವಚ್ಛತೆ ಕಾಯ್ದುಕೊಳ್ಳುವುದು, ಶುದ್ಧ ಕುಡಿಯುವ ನೀರು ಸೇವನೆ ಕುರಿತು ಗ್ರಾಮದಲ್ಲಿ ಡಂಗುರ ಸಾರಲಾಗಿದೆ. ಎಲ್ಲರೂ ಚೇತರಿಸಿಕೊಳ್ಳುವವರೆಗೆ ಗ್ರಾಮದಲ್ಲಿ ತೆಗೆದಿರುವ ತಾತ್ಕಾಲಿಕ ಕ್ಲಿನಿಕ್ ಮುಂದುವರೆಸಲಾಗುವುದು’ ಎಂದು ಮಾಹಿತಿ ಹಂಚಿಕೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.