ಬಳ್ಳಾರಿ: ಬಳ್ಳಾರಿಯ ಎಪಿಎಂಸಿಗೆ ಗುರುವಾರ ದಿಢೀರ್ ಭೇಟಿ ನೀಡಿದ ಉಪ ಲೋಕಾಯುಕ್ತ ಬಿ. ವೀರಪ್ಪ ಇಡೀ ವ್ಯವಸ್ಥೆ ಪರಿಶೀಲಿಸಿದರು.
ರೈತರಿಂದ ಅಕ್ರಮವಾಗಿ ಕಮಿಷನ್ ವಸೂಲಿ, ಮೂಲಸೌಕರ್ಯ ಇಲ್ಲದೇ ಇರುವುದನ್ನು ಕಂಡ ವೀರಪ್ಪ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
'ರೈತರಿಂದ ಕಮಿಷನ್ ವಸೂಲಿ ಮಾಡಲು ಎಪಿಎಂಸಿ ಕಾಯ್ದೆ, ಬೈಲಾದಲ್ಲಿ ಅವಕಾಶ ಇಲ್ಲ. ಖರೀದಿದಾರರಿಂದ ಕೇವಲ ₹2 ಕಮಿಷನ್ ಪಡೆಯಬೇಕು ಎಂದು ಕಾನೂನು ಹೇಳುತ್ತದೆ. ಆದರೆ ಇಲ್ಲಿ ನೇರವಾಗಿ ರೈತರಿಂದಲೇ ₹10 ವಸೂಲಿ ಮಾಡಲಾಗುತ್ತಿದೆ. ಇದು ಅಕ್ರಮ. ಬಳ್ಳಾರಿ ಎಪಿಎಂಸಿಯಲ್ಲಿ ರೈತರನ್ನು ಶೋಷಣೆ ಮಾಡಲಾಗುತ್ತಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.
'ಎಪಿಎಂಸಿಗೆ ನಿತ್ಯ 20 ಸಾವಿರ ಜನ ಬರುತ್ತಾರೆ. ನಿತ್ಯ ಎಷ್ಟು ಕಮಿಷನ್, ಸೆಸ್ ವಸೂಲಿ ಮಾಡಲಾಗುತ್ತಿದೆ, ಈ ವರೆಗೆ ಎಷ್ಟು ಸಂಗ್ರಹವಾಗುತ್ತಿದೆ ಎಂಬುದರ ಮಾಹಿತಿಯನ್ನು ಗುರುವಾರ ಸಂಜೆ ಒಳಗಾಗಿ ನೀಡಲು ಸೂಚಿಸಿದ್ದೇನೆ. ಅಧಿಕಾರಿ, ಆಡಳಿತ ಮಂಡಳಿ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ' ಎಂದು ತಿಳಿಸಿದರು.
ಉಪ ಲೋಕಾಯುಕ್ತ ವೀರಪ್ಪ ಎಪಿಎಂಸಿ ಪರಿಶೀಲಿಸುತ್ತಿದ್ದರೂ ಸ್ಥಳಕ್ಕೆ ಬಾರದ ಕಾರ್ಯದರ್ಶಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.