ADVERTISEMENT

ದೇವದಾರಿ: ಕಾಡು ಕಡಿತಲೆ ಪ್ರಕ್ರಿಯೆ ಶುರು

ಜನಸಂಗ್ರಾಮ ಪರಿಷತ್‌, ರಾಜ್ಯ ರೈತ ಸಂಘದಿಂದ ತೀವ್ರ ವಿರೋಧ | ಎಣಿಕೆ ಬಂದವರನ್ನು ಹಿಮ್ಮೆಟ್ಟಿಸಿದ ಹೋರಾಟ

ಆರ್. ಹರಿಶಂಕರ್
Published 14 ಅಕ್ಟೋಬರ್ 2025, 23:36 IST
Last Updated 14 ಅಕ್ಟೋಬರ್ 2025, 23:36 IST
ಸಂಡೂರಿನ ಸ್ವಾಮಿಮಲೈ ಅರಣ್ಯ ಪ್ರದೇಶದಲ್ಲಿ ಸೋಮವಾರ ಮರಗಳ ಎಣಿಕೆಗೆ ಬಂದಿದ್ದ ಸಿಬ್ಬಂದಿಯನ್ನು ಹಿಡಿದಿಟ್ಟುಕೊಂಡು ಪ್ರತಿಭಟನೆ ಕುಳಿತಿರುವ ಜಸಂಗ್ರಾಮ ಪರಿಷತ್‌, ರೈತ ಸಂಘದ ಹೋರಾಟಗಾರರು  
ಸಂಡೂರಿನ ಸ್ವಾಮಿಮಲೈ ಅರಣ್ಯ ಪ್ರದೇಶದಲ್ಲಿ ಸೋಮವಾರ ಮರಗಳ ಎಣಿಕೆಗೆ ಬಂದಿದ್ದ ಸಿಬ್ಬಂದಿಯನ್ನು ಹಿಡಿದಿಟ್ಟುಕೊಂಡು ಪ್ರತಿಭಟನೆ ಕುಳಿತಿರುವ ಜಸಂಗ್ರಾಮ ಪರಿಷತ್‌, ರೈತ ಸಂಘದ ಹೋರಾಟಗಾರರು     

ಬಳ್ಳಾರಿ: ಸಂಡೂರು ತಾಲೂಕಿನ ಸ್ವಾಮಿಮಲೈ ಅರಣ್ಯ ಪ್ರದೇಶದಲ್ಲಿ ‘ದೇವದಾರಿ’ ಗಣಿಗಾರಿಕೆಗೆ ಮುಂದಾಗಿರುವ ಕುದುರೆಮುಖ ಕಬ್ಬಿಣ ಅದಿರು ಕಂಪನಿ (ಕೆಐಒಸಿಎಲ್‌) ಅದಕ್ಕಾಗಿ ಕಾಡು ಕಡಿತಲೆಯ ಪ್ರಕ್ರಿಯೆಯನ್ನು ಮಂಗಳವಾರದಿಂದ ಆರಂಭಿಸಿದೆ. 

401.57 ಹೆಕ್ಟೇರ್ ಅರಣ್ಯದ 338 ಹೆಕ್ಟರ್‌ ವಿಶಾಲ ಪ್ರದೇಶದಲ್ಲಿ ಕೆಐಒಸಿಎಲ್‌ ಗಣಿಗಾರಿಕೆಗೆ ಸಿದ್ಧತೆ  ನಡೆಸಿದೆ. ಅರಣ್ಯ ಭೂಮಿ ಗುತ್ತಿಗೆ ಒಡಂಬಡಿಕೆಯೂ ಆಗಿದೆ. ಆದರೆ, ಗಣಿಗಾರಿಕೆಗೆ ಕಾರ್ಯಾದೇಶ ಇನ್ನೂ ಸಿಕ್ಕಿಲ್ಲ.

ಅದಕ್ಕೂ ಮೊದಲೇ ಅರಣ್ಯ ಪ್ರದೇಶದಲ್ಲಿ ಮರಗಳನ್ನು ಉರುಳಿಸುವ ಕಾರ್ಯಕ್ಕೆ ಕೆಐಒಸಿಎಲ್‌ ಚಾಲನೆ ನೀಡಿದ್ದು, ಏಜೆನ್ಸಿಗೆ ಗುತ್ತಿಗೆ ಕೊಟ್ಟಿದೆ.  ಮರಗಳ ಎಣಿಕೆ, ಕಡಿತಕ್ಕೆ ಅರಣ್ಯ ಇಲಾಖೆಯಿಂದ ಪಡೆಯಬೇಕಾದ ಅನುಮತಿ ಮತ್ತು ಪ್ರಕ್ರಿಯೆಗಾಗಿ ₹8.99 ಲಕ್ಷಕ್ಕೆ (ಜಿಎಸ್‌ಟಿ ಸಹಿತ) ಗುತ್ತಿಗೆ ನೀಡಲಾಗಿದೆ.  

ADVERTISEMENT

ಆರಂಭದಲ್ಲಿ 100 ಹೆಕ್ಟೇರ್‌ ಪ್ರದೇಶದಲ್ಲಿ ಮರಗಳ ಗುರುತಿಸುವ ಕಾರ್ಯ ನಡೆಯುತ್ತದೆ. ಅದರಂತೆ ‘ಎಸ್‌ಟಿಪಿ ಎಂಟರ್‌ಪ್ರೈಸಸ್‌’ ಎಂಬ ಕಂಪನಿಯ ಸಿಬ್ಬಂದಿ ಮಂಗಳವಾರ ಸ್ವಾಮಿಮಲೆ ಅರಣ್ಯ ಪ್ರದೇಶದಲ್ಲಿ ಮರಗಳ ಎಣಿಕೆ ಮತ್ತು ಅವುಗಳಿಗೆ ಸಂಖ್ಯೆ ನೀಡುವ ಕಾರ್ಯವನ್ನು ಆರಂಭಿಸಿದರು. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ  ಬಂದ ಜನಸಂಗ್ರಾಮ ಪರಿಷತ್‌, ರೈತ ಸಂಘದ ಕಾರ್ಯಕರ್ತರು ಆಕ್ಷೇಪಿಸಿದರು. 

ಅನುಮತಿ ಪಡೆದಿಲ್ಲ ಎಂದ ಸಂಘಟನೆಗಳು: ಸ್ವಾಮಿಮಲೈ ಅರಣ್ಯ ಪ್ರದೇಶದಲ್ಲಿ ಮರಗಳ ಎಣಿಕೆ ಕಾರ್ಯ ನಡೆಯುತ್ತಿರುವುದನ್ನು ತಿಳಿದ ಜನಸಂಗ್ರಾಮ ಪರಿಷತ್‌ ಮತ್ತು ರೈತ ಸಂಘದ ಸದಸ್ಯರು ಕೂಡಲೇ ಸ್ಥಳಕ್ಕೆ ತೆರಳಿ ಸಿಬ್ಬಂದಿಯನ್ನು ತಡೆದು, ಹಿಡಿದಿಟ್ಟುಕೊಂಡರು. ಅಲ್ಲಿಯೇ ಹೋರಾಟ ಆರಂಭಿಸಿದರು.  

‘ಮರಗಳ ಎಣಿಕೆಗೆ ಅರಣ್ಯ ಇಲಾಖೆ ಅನುಮತಿಯನ್ನೇ ಕೊಟ್ಟಿಲ್ಲ. ಹೀಗಿರುವಾಗಲೇ ಏಜೆನ್ಸಿಯು ಎಣಿಕೆ ಆರಂಭಿಸಿದೆ. ಮರಗಳ ಎಣಿಕೆ ಇರಲಿ, ಕಾಡು ಪ್ರವೇಶ ಮಾಡುವುದಕ್ಕೂ ಏಜೆನ್ಸಿಯು ಅರಣ್ಯ ಇಲಾಖೆಯಿಂದ ಅನುಮತಿ ನೀಡಿಲ್ಲ’ ಎಂದು ಜನಸಂಗ್ರಾಮ ಪರಿಷತ್‌, ರೈತ ಸಂಘದ ಕಾರ್ಯಕರ್ತರು ಆರೋಪಿಸಿದರು. 

ಸ್ಥಳಕ್ಕೆ ಬಂದ ಕೆಐಒಸಿಎಲ್‌ ಅಧಿಕಾರಿಗಳು ಹೋರಾಟ ನಿಲ್ಲಿಸಲು ಮನವಿ ಮಾಡಿದರು. ಇದಕ್ಕೆ ಜಗ್ಗದ ಹೋರಾಟಗಾರರು ಅರಣ್ಯ ಇಲಾಖೆಗೆ ದೂರು ನೀಡಿದ್ದು, ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಗಣಿ ಗುತ್ತಿಗೆ ಒಪ್ಪಂದ ಬಳಿಕ ಮರಗಳ ಎಣಿಕೆಗೆ ಅನುಮತಿ ಅಗತ್ಯವಿಲ್ಲ. ಆದರೆ ಮರಗಳನ್ನು ಕಡಿಯಲು ಅರಣ್ಯ ಇಲಾಖೆಯ ಅನುಮತಿ ಬೇಕು. ಗಣಿಗಾರಿಕೆ ಕಾರ್ಯಾದೇಶ ಇನ್ನೂ ಕೊಡಲಾಗಿಲ್ಲ. 
ಬಸವರಾಜು, ಅರಣ್ಯ ಉಪ ಸಂರಕ್ಷಣಾಧಿಕಾರಿ ಬಳ್ಳಾರಿ ವಲಯ 

ಕೆಐಒಸಿಎಲ್‌ಗೆ ಡಿಸೆಂಬರ್‌ ಭೀತಿ

‘ಕೆಐಒಸಿಎಲ್‌ನ ದೇವದಾರಿ ಗಣಿಯ ಗುತ್ತಿಗೆ ಡಿಸೆಂಬರ್‌ಗೆ ಮುಗಿಯಲಿದೆ. ಅಷ್ಟರಲ್ಲಿ ಗಣಿಗಾರಿಕೆ ಆರಂಭಿಸಿ ಅದಿರು ಸಾಗಿಸುವ ಅನಿವಾರ್ಯತೆ ಕಂಪನಿಗೆ ಇದೆ. ಗಣಿಗಾರಿಕೆ ಪ್ರಕ್ರಿಯೆ ತರಾತುರಿಯಲ್ಲಿ ನಡೆಸುತ್ತಿದೆ. ಆದರೆ ‌ಸಂಘಟನೆಗಳಿಂದ ಗಣಿಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು ಕಂಪನಿಗೆ ಬಿಸಿತುಪ್ಪವಾಗಿದೆ. ಒಂದು ಬಾರಿ ಗುತ್ತಿಗೆ ರದ್ದಾದರೆ ಕಂಪನಿ ಎಲ್ಲ ಅನುಮತಿಗಳನ್ನು ಹೊಸದಾಗಿ ಪಡೆಯಬೇಕಾದ ಸಂದಿಗ್ಧತೆ ಇದೆ. ಈ ಮಧ್ಯೆ ಈ ವಿಷಯವನ್ನು ಕೇಂದ್ರ ಸರ್ಕಾರವೂ ಗಂಭೀರವಾಗಿ ಪರಿಗಣಿಸಿದೆ’ ಎಂದು ಗೊತ್ತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.