ADVERTISEMENT

ಸಂಡೂರು: ‘ದೇವದಾರಿ’ ವಿರುದ್ಧ ಸಿಡಿದ ಸಂಘಟನೆಗಳು

ಗಣಿಯ ಜಂಟಿ ಸರ್ವೆ ಕಾರ್ಯಕ್ಕೆ ಪ್ರತಿರೋಧ; ಸಮೀಕ್ಷೆ ಇಲ್ಲದೇ ಹಿಂದೆ ಸರಿದ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2025, 5:50 IST
Last Updated 29 ಅಕ್ಟೋಬರ್ 2025, 5:50 IST
ಕೆಐಒಸಿಎಲ್‌ನ ದೇವದಾರಿ ಗಣಿ ವಿರೋಧಿಸಿ ಸಂಘಟನೆಗಳು ಮಂಗಳವಾರ ಸಂಡೂರಿನ ನರಸಿಂಗಾಪುರ ಗ್ರಾಮದ ಬಳಿ ಪ್ರತಿಭಟನೆ ನಡೆಸಿದವು
ಕೆಐಒಸಿಎಲ್‌ನ ದೇವದಾರಿ ಗಣಿ ವಿರೋಧಿಸಿ ಸಂಘಟನೆಗಳು ಮಂಗಳವಾರ ಸಂಡೂರಿನ ನರಸಿಂಗಾಪುರ ಗ್ರಾಮದ ಬಳಿ ಪ್ರತಿಭಟನೆ ನಡೆಸಿದವು   

ಸಂಡೂರು: ಕುದುರೆಮುಖ ಕಬ್ಬಿಣದ ಅದಿರು ಕಂಪನಿಯ ದೇವದಾರಿ ಗಣಿಗೆಯ ಜಂಟಿ ಸರ್ವೆ ಕಾರ್ಯ ವಿರೋಧಿಸಿ ಜನಸಂಗ್ರಾಮ ಪರಿಷತ್‌, ಗಣಿಬಾಧಿತ ಪರಿಸರ ಜನ ಬದುಕಿನ ಪುನಶ್ಚೇತನ ಹೋರಾಟ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳು ಮಂಗಳವಾರ ಸಂಡೂರಿನ ನರಸಿಂಗಾಪುರ ಬಳಿ ತೀವ್ರ ಪ್ರತಿಭಟನೆ ನಡೆಸಿದವು.   

ನರಸಿಂಗಾಪುರ, ರಣಜಿತ್‌ಪುರ, ನಾರಾಯಣಪುರ, ಭುಜಂಗನಗರ, ಯಶವಂತನಗರ, ಸೇರಿದಂತೆ ಸುತ್ತಲಿನಲ್ಲಿ ಗ್ರಾಮಗಳ ಮಹಿಳೆಯರು, ರೈತರು ಸೇರಿದಂತೆ ಐನೂರಕ್ಕೂ ಅಧಿಕ ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. 

‘ಪಶ್ಚಿಮ ಘಟ್ಟದಂತೆ ವೈವಿಧ್ಯತೆಯನ್ನು ಹೊಂದಿರುವ ಈ ಬೆಟ್ಟದಲ್ಲಿ ಗಣಿಗಾರಿಕೆಗೆ ಅವಕಾಶ ನೀಡುವುದು ಪರಿಸರ ವಿರೋಧಿ ನಡೆಯಾಗಲಿದೆ’ ಎಂದು ಹೋರಾಟಗಾರರು ಎಚ್ಚರಿಸಿದರು. 

ADVERTISEMENT

ಪ್ರತಿಭಟನೆ ಹಿನ್ನೆಲೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಅರಣ್ಯ ಮತ್ತು ಸರ್ವೆ ಇಲಾಖೆಗಳು ಜಂಟಿ ಸರ್ವೆ ನಿಲ್ಲಿಸಿದವು.  

ಹೋರಾಟಕ್ಕೆ ಕರ್ನಾಟಕ ರಾಜ್ಯ ರೈತ ಸಂಘ, ಕೆ.ಆರ್.ಎಸ್‌ ಸಮಿತಿ, ಎಸ್‌ಯುಸಿಐ(ಸಿ), ಜನಾಂದೋಲನ ಮಹಾಮೈತ್ರಿ, ಚಾಗನೂರು ಸಿರಿವಾರ ಭೂ ಹೋರಾಟ ಸಮಿತಿ, ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ), ದಲಿತ ಸೇನೆ, ಎಕೆಕೆಎಸ್‌, ಎಐಕೆಕೆಎಂಸ್‌, ಕಣಿವೆಹಳ್ಳಿ ಸಂರಕ್ಷಣಾ ಸಮಿತಿ ಸೇರಿದಂತೆ ಹಲವು ಸಂಘಟನೆಗಳು ಬೆಂಬಲ ನೀಡಿದ್ದವು. 

ರೈತ ಮುಖಂಡ, ವಕೀಲ ಚಾಗನೂರು ಮಲ್ಲಿಕಾರ್ಜುನ ರೆಡ್ಡಿ, ಕರೂರ ಮಾಧವ ರೆಡ್ಡಿ, ಟಿ.ಎಂ ಶಿವಕುಮಾರ್‌, ಶ್ರೀಶೈಲ ಆಲದಳ್ಳಿ, ಎಂ.ಎಲ್.ಕೆ.ನಾಯ್ಡು, ಕೆ.ಬಿ ಮೌನೇಶ್‌, ಜಿ.ಕೆ ನಾಗರಾಜ, ನೀಲಕಂಠ ದೇಸಾಯಿ, ಕಾಡಪ್ಪ, ಪರಮೇಶಿ, ಮಹಿಳಾ ಸಂಘಟನೆಯ ಡಿ.ನಾಲಗಲಕ್ಷ್ಮಿ,  ರಾಮನಮಲೆ ಗಂಗಮ್ಮ, ಅಂಚಿಮನಮನೆ ಗೌರಮ್ಮ, ಚನ್ನಮ್ಮ, ಮುದುಕಲಪೆಂಟೆ ತಿಪ್ಪಮ್ಮ ಇದ್ದರು. 

 ‘ಉತ್ಪಾದನೆಯನ್ನು 20 ದಶಲಕ್ಷ ಟನ್‌ಗೆ ಇಳಿಸಿ’
ಸ್ಥಳೀಯ ಅದಿರು ಉತ್ಪಾದನೆಯನ್ನು 50 ದಶಲಕ್ಷ ಟನ್‌ನಿಂದ 20 ದಶಲಕ್ಷ ಟನ್‌ಗೆ ಇಳಿಸಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಕೇಂದ್ರದ ಉನ್ನತಾಧಿಕಾರ ಸಮಿತಿ (ಸಿಇಸಿ) ಸಲ್ಲಿಸಿರುವ ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ಈ ಮಧ್ಯೆ ಕೇಂದ್ರದ ಉಕ್ಕು ಸಚಿವಾಲಯದ  ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ (ಎನ್‌ಎಂಡಿಸಿ) ಅಕ್ರಮವಾಗಿ ತನ್ನ ಉತ್ಪಾದನೆಯನ್ನು 16 ದಶಲಕ್ಷ ಟನ್‌ಗೆ ಹೆಚ್ಚಿಸಿಕೊಂಡಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿರುವ ಈ ಕಂಪನಿಯ ನೇಮಕಾತಿಯಲ್ಲಿ ಮೀಸಲಾತಿ ಜಾರಿಯಾಗಿಲ್ಲ ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.