ಹೊಸಪೇಟೆ (ವಿಜಯನಗರ): ಹೊನ್ನೂರು ಸ್ವಾಮಿ ತಂಡದ ಸದಸ್ಯರು 'ಕಿತ್ತೂರು ದಂಗೆ' ನಾಟಕವನ್ನು ಸೋಮವಾರ ನಗರ ಹೊರವಲಯದ ಕಾರಿಗನೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರದರ್ಶಿಸಿದರು.
ಖಡಕ್ ಸಂಭಾಷಣೆ, ಪಾತ್ರಾಭಿನಯ ಎಲ್ಲರ ಗಮನ ಸೆಳೆಯಿತು. ಕಿತ್ತೂರು ದಂಗೆಯ ಪ್ರತಿಯೊಂದು ಕ್ಷಣವನ್ನು ಮೆಲುಕು ಹಾಕುವಂತೆ ಮಾಡಿದರು.
ಇದಕ್ಕೂ ಮುನ್ನ ಕೃತಿ ಆಕೃತಿ ಕಲಾ ಟ್ರಸ್ಟ್ ಮಾರ್ಗದರ್ಶಕ ಆನಂದ್ ಪುರೋಹಿತ್ ಮಾತನಾಡಿ, ‘ಐತಿಹಾಸಿಕ ಹೋರಾಟಗಳನ್ನು ನಾಟಕಗಳ ಮೂಲಕ ಪ್ರಸ್ತುತ ಪಡಿಸಿದಾಗ ಜನರಿಗೆ ನಮ್ಮ ಚರಿತ್ರೆ ಪರಿಚಯಿಸಿ ಕೊಟ್ಟಂತಾಗುತ್ತದೆ. ಹಾಗಾಗಿ ಐತಿಹಾಸಿಕ ರಂಗ ಪ್ರಯೋಗಗಳಿಗೆ ಹೆಚ್ಚಿನ ಒತ್ತು ಕೊಡಲಾಗುತ್ತಿದೆ’ ಎಂದು ತಿಳಿಸಿದರು.
‘ಜಾನಪದ ಹಾಗೂ ಇತರ ಕಲೆಗಳು ಪ್ರಸ್ತುತ ದಿನಗಳಲ್ಲಿ ಮರೆಯಾಗುತ್ತಿವೆ. ಕಲಾಸಕ್ತರಿಗೆ ಸದಭಿರುಚಿ ಜೊತೆಗೆ ಸಂದೇಶಗಳನ್ನು ತಲುಪಿಸಲು ಬೀದಿ ನಾಟಕ, ತೊಗಲು ಗೊಂಬೆ, ಯಕ್ಷಗಾನ ಮುಂತಾದ ಕಲಾ ಪ್ರಕಾರಗಳನ್ನು ಪ್ರದರ್ಶಿಸಿ ಉಳಿಸಬೇಕಿದೆ’ ಎಂದರು.
ತೊಗಲುಗೊಂಬೆ ಕಲಾವಿದ ನಾರಾಯಣಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರಭಾರ ಮುಖ್ಯಶಿಕ್ಷಕ ಎಚ್.ಹೊನ್ನಪ್ಪ, ಎಸ್.ಡಿ.ಎಂ.ಸಿ. ಅಧ್ಯಕ್ಷ ಬಸವರಾಜ್, ಸೋಮಶೇಖರ್, ಭರತ್ಕುಮಾರ್.ಸಿ.ಆರ್, ನಾಗೇಂದ್ರ ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.