ಬಳ್ಳಾರಿ: ಜೋಳದರಾಶಿ ದೊಡ್ಡನಗೌಡ ಪ್ರತಿಷ್ಠಾನ, ರಂಗತೋರಣ ಮತ್ತು ರಾಮೇಶ್ವರ ಟ್ರಸ್ಟ್ ಸಹಯೋಗದಲ್ಲಿ ಜೋಳದರಾಶಿ ದೊಡ್ಡನಗೌಡರ 110ನೇ ಜಯಂತಿ ಪ್ರಯುಕ್ತ ಜುಲೈ 26ರಿಂದ 28ರವರೆಗೆ ಮೂರು ದಿನಗಳ ಕಾಲ ರಂಗ ಮುಂಗಾರು ನಾಟಕೋತ್ಸವವು ಇಲ್ಲಿನ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ನಡೆಯಲಿದೆ ಎಂದು ಪ್ರತಿಷ್ಠನದ ಗೌರವಾಧ್ಯಕ್ಷ ಬಿ.ಸಿದ್ಧನಗೌಡ ತಿಳಿಸಿದರು.
ಜಯಂತಿ ಅಂಗವಾಗಿ 27ರಂದು ಬೆಳಿಗ್ಗೆ 9ಕ್ಕೆ ಚೆಳ್ಳಗುರ್ಕಿಎರ್ರಿತಾತನವರ ದೇವಸ್ಥಾನದಿಂದ ರಂಗಜ್ಯೋತಿ ಯಾತ್ರೆ ನಡೆಯಲಿದೆ. ಅಂಚೆ ಇಲಾಖೆಯಿಂದ ದೊಡ್ಡನಗೌಡ ಸ್ಮರಣೆಯ ವಿಶೇಷ ಅಂಚೆ ಲಕೋಟೆ ಬಿಡುಗಡೆ ಮಾಡಲಾಗುತ್ತದೆ ಎಂದು ನಗರದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ರಂಗತೋರಣ ಸಂಸ್ಥೆಯ ಕಾರ್ಯದರ್ಶಿ ಕಪ್ಪಗಲ್ಲು ಪ್ರಭುದೇವ ಮಾತನಾಡಿ, ಜುಲೈ 26ರಂದು ಎಂ.ಗಣೇಶ್ ನಿರ್ದೇಶನದಲ್ಲಿ ಪ್ರೊ.ಅರವಿಂದ ಮಾಲಗತ್ತಿಯವರ ಆತ್ಮಕಥೆ ಆಧಾರಿತ ಗೌರ್ಮೆಂಟ್ ಬ್ರಾಹ್ಮಣ, 27ರಂದು ಪಾಂಡಿಚೇರಿಯ ಸವಿತಾರಾಣಿ ನಿರ್ದೇಶನದಲ್ಲಿ ಟ್ರಾನ್ಸ್ ನೇಷನ್ ಹಾಗೂ 28ರಂದು ಪಿ.ಗಂಗಾಧರಸ್ವಾಮಿ ನಿರ್ದೇಶನದಲ್ಲಿ ಬಂಗಾಳಿ ಮೂಲ ಬಾದಲ್ ಸರ್ಕಾರ್ ಅವರ ಮೆರವಣಿಗೆ (ಮಿಚಿಲ್) ನಾಟಕಗಳು ಪ್ರದರ್ಶನಗೊಳ್ಳಲಿವೆ ಎಂದರು.
ರಂಗಜ್ಯೋತಿ ಯಾತ್ರೆ: 27ರಂದು ಬೆಳಿಗ್ಗೆ 9ಕ್ಕೆ ಚೆಳ್ಳಗುರ್ಕಿ ಎರ್ರಿತಾತನವರ ದೇವಸ್ಥಾನದಿಂದ ರಂಗಜ್ಯೋತಿ ಯಾತ್ರೆಯು ದೊಡ್ಡನಗೌಡ ಸಮಾಧಿಯಿಂದ ಪರಮದೇವನಹಳ್ಳಿ, ಗೋಡೆಹಾಳು, ಅಮರಾಪುರ, ಕಕ್ಕಬೇವಿನಹಳ್ಳಿ, ಬಿಸಿಲಹಳ್ಳಿ ಮೂಲಕ ನಗರದ ರಾಘವ ಕಲಾ ಮಂದಿರ ತಲುಪಿ ರಾಘವ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಗುವುದು. 28ರಂದು ಅಂಚೆ ಚೀಟಿ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದರು.
ರಾಮೇಶ್ವರ ಟ್ರಸ್ಟ್ ಅಧ್ಯಕ್ಷ ಕೆ.ಪೊಂಪನಗೌಡ, ಅಡವಿ ಸ್ವಾಮಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.