ಹೊಸಪೇಟೆ(ವಿಜಯನಗರ): ವಿದ್ಯುತ್ಚಾಲಿತ (ಎಲೆಕ್ಟ್ರಿಕ್) ಎಂಜಿನ್ ಒಳಗೊಂಡ ಮೊದಲ ಪ್ರಯಾಣಿಕ ರೈಲು ಶನಿವಾರ ನಗರ ರೈಲು ನಿಲ್ದಾಣಕ್ಕೆ ಬಂತು.
ಶುಕ್ರವಾರ ರಾತ್ರಿ ಬೆಂಗಳೂರಿನಿಂದ ಪ್ರಯಾಣ ಆರಂಭಿಸಿದ್ದ ಹಂಪಿ ಎಕ್ಸ್ಪ್ರೆಸ್ ರೈಲು ಶನಿವಾರ ಬೆಳಿಗ್ಗೆ 7.10ಕ್ಕೆ ನಗರ ನಿಲ್ದಾಣ ತಲುಪಿತು. ಬಳಿಕ ಡೀಸೆಲ್ ಎಂಜಿನ್ ಮೂಲಕ ಹುಬ್ಬಳ್ಳಿ ಕಡೆಗೆ ಪಯಣ ಬೆಳೆಸಿತು. ಎಂಜಿನ್ ಬದಲಾವಣೆಗೆ 25 ನಿಮಿಷ ಸಮಯ ತಗುಲಿತು. ನಗರದ ವರೆಗೆ ವಿದ್ಯುತ್ ಮಾರ್ಗ ಪೂರ್ಣಗೊಂಡಿರುವುದರಿಂದ ವಿದ್ಯುತ್ಚಾಲಿತ ರೈಲು ಸಂಚಾರ ಶುರುವಾಗಿದೆ.
ಈ ಹಿಂದೆ ಬಳ್ಳಾರಿ ವರೆಗೆ ಈ ಸೌಲಭ್ಯ ಇತ್ತು. ಬಳಿಕ ಅಲ್ಲಿಂದ ಡೀಸೆಲ್ ಎಂಜಿನ್ ಮೂಲಕ ರೈಲುಗಳು ಸಂಚರಿಸುತ್ತಿದ್ದವು. ಇದೇ ಮಾರ್ಗದಿಂದ ಸಂಚರಿಸುವ ಬೆಂಗಳೂರು–ಅಜ್ಮೇರ್, ಬೆಂಗಳೂರು–ಜೋಧಪುರ ರೈಲುಗಳು ಕೂಡ ವಿದ್ಯುತ್ಚಾಲಿತ ಎಂಜಿನ್ ಮೂಲಕ ಸಂಚರಿಸಲಿವೆ. ಬಳಿಕ ಹಂತ ಹಂತವಾಗಿ ಈ ಮಾರ್ಗದ ಎಲ್ಲ ರೈಲುಗಳು ಎಲೆಕ್ಟ್ರಿಕ್ ಎಂಜಿನ್ನಿಂದಲೇ ಸಂಚಾರ ಬೆಳೆಸಲಿವೆ.
ಹೊಸಪೇಟೆ–ಹುಬ್ಬಳ್ಳಿ ನಡುವಿನ ರೈಲು ಮಾರ್ಗದ ವಿದ್ಯುದ್ದೀಕರಣ ಕಾಮಗಾರಿ ಭರದಿಂದ ನಡೆದಿದೆ. ಕೆಲಸ ಪೂರ್ಣಗೊಂಡರೆ ಹುಬ್ಬಳ್ಳಿ ವರೆಗೆ ಯಾವುದೇ ಅಡೆತಡೆಯಿಲ್ಲದೆ ರೈಲುಗಳು ವಿದ್ಯುತ್ಚಾಲಿತ ಎಂಜಿನ್ನೊಂದಿಗೆ ಸಂಚರಿಸಬಹುದು. ವಿದ್ಯುತ್ಚಾಲಿತ ರೈಲು ಸಂಚಾರದಿಂದ ರೈಲ್ವೆ ಇಲಾಖೆಯ ಆರ್ಥಿಕ ಹೊರೆ ತಗ್ಗಲಿದೆ. ಪರಿಸರ ಮಾಲಿನ್ಯ ಕಡಿಮೆಯಾಗಲಿದೆ.
ಇದಕ್ಕೂ ಮುನ್ನ ವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿ ಮುಖಂಡರಾದ ದೀಪಕ್ ಉಳ್ಳಿ, ಮಹೇಶ್ ಕುಡುತಿನಿ ರೈಲಿಗೆ ಸ್ವಾಗತ ಕೋರಿದರು. ರೈಲು ನಿಲ್ದಾಣ ಅಧಿಕಾರಿ ಎಸ್.ಎಸ್. ಉಮೇಶ್, ಸಂಚಾರ ಇನ್ಸ್ಪೆಕ್ಟರ್ ಮಾರುತಿ, ರೈಲ್ವೆ ಪೊಲೀಸ್ ಮಂಜುನಾಥ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.