ADVERTISEMENT

ಮೂರಂಗಡಿ ವೃತ್ತದಲ್ಲಿ ಸಂಚಾರ ನಿರ್ಬಂಧ: ಎರಡನೇ ದಿನವೂ ತೆರವು ಮುಂದುವರಿಕೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2020, 8:40 IST
Last Updated 14 ಜುಲೈ 2020, 8:40 IST
ಹೊಸಪೇಟೆ ನಗರದ ಮೂರಂಗಡಿ ವೃತ್ತದಲ್ಲಿನ ದರ್ಗಾ ಮಸೀದಿ ಬಳಿ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ
ಹೊಸಪೇಟೆ ನಗರದ ಮೂರಂಗಡಿ ವೃತ್ತದಲ್ಲಿನ ದರ್ಗಾ ಮಸೀದಿ ಬಳಿ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ    

ಹೊಸಪೇಟೆ: ಇಲ್ಲಿನ ಮೂರಂಗಡಿ ವೃತ್ತದಲ್ಲಿನ ದರ್ಗಾ ಮಸೀದಿಯ 21 ಮಳಿಗೆಗಳ ತೆರವು ಕಾರ್ಯಾಚರಣೆ ಎರಡನೇ ದಿನ ಮಂಗಳವಾರವೂ ಮುಂದುವರಿಯಿತು.

ಮೂರಂಗಡಿ ವೃತ್ತದಿಂದ ಉದ್ಯೋಗ ಪೆಟ್ರೋಲ್‌ ಬಂಕ್‌ ಹಾಗೂ ನಗರಸಭೆ ಕಚೇರಿಗೆ ಸಂಪರ್ಕ ಕಲ್ಪಿಸುವ ಎರಡೂ ರಸ್ತೆಗಳಲ್ಲಿ ಬ್ಯಾರಿಕೇಡ್‌ ಅಳವಡಿಸಿ, ಸಾರ್ವಜನಿಕ ಸಂಚಾರದ ಮೇಲೆ ನಿರ್ಬಂಧ ಹೇರಿ ಜೆ.ಸಿ.ಬಿ.ಯಿಂದ ಕಟ್ಟಡಗಳನ್ನು ತೆರವುಗೊಳಿಸುವ ಕೆಲಸ ನಡೆಯಿತು. ಎರಡು ಪ್ರಮುಖ ರಸ್ತೆಗಳಲ್ಲಿ ಸಂಚಾರದ ಮೇಲೆ ನಿರ್ಬಂಧ ಹೇರಿದ್ದರಿಂದ ಮಹಾತ್ಮ ಗಾಂಧಿ ವೃತ್ತದಲ್ಲಿ ಜನದಟ್ಟಣೆ ಉಂಟಾಗಿತ್ತು.

ತಹಶೀಲ್ದಾರ್‌ ಎಚ್‌. ವಿಶ್ವನಾಥ್‌ ನೇತೃತ್ವದಲ್ಲಿ ಕಾರ್ಯಾಚರಣೆ ಮುಂದುವರಿದಿದೆ. ಸ್ಥಳದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದೆ.

ADVERTISEMENT

ಸುಪ್ರೀಂಕೋರ್ಟ್‌ ಆದೇಶದ ಪ್ರಕಾರ, ನಗರದಲ್ಲಿನ ಧಾರ್ಮಿಕ ಕಟ್ಟಡಗಳ ಅತಿಕ್ರಮಣ ತೆರವು ಕೆಲಸವನ್ನು ತಾಲ್ಲೂಕು ಆಡಳಿತ ಕೈಗೆತ್ತಿಕೊಂಡಿದೆ. ಇತ್ತೀಚೆಗೆ ಧಾರವಾಡ ಹೈಕೋರ್ಟ್‌ ಸಂಚಾರಿ ಪೀಠದಿಂದ ತಡೆಯಾಜ್ಞೆ ತೆರವಾಗಿತ್ತು.

ಇದೇ ಭಾಗದಲ್ಲಿನ ಹೂವಿನ ಅಂಗಡಿಗಳ ಎದುರಿನ ಕಟ್ಟಡಗಳನ್ನು ತೆರವುಗೊಳಿಸಲು ನಿರ್ಧರಿಸಲಾಗಿದ್ದು, ಸೋಮವಾರ ಮಾರ್ಕಿಂಗ್‌ ಮಾಡಲಾಗಿದೆ. ಮಂಗಳವಾರ ಆಯಾ ಕಟ್ಟಡಗಳ ಮಾಲೀಕರು ಸ್ವಯಂಪ್ರೇರಣೆಯಿಂದ ವಸ್ತುಗಳನ್ನು ಬೇರೆಡೆ ಕೊಂಡೊಯ್ದು ತಾಲ್ಲೂಕು ಆಡಳಿತಕ್ಕೆ ಸಹಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.