ADVERTISEMENT

ಹಾಗಲಕಾಯಿ ಬೆಳೆದು ಸಿಹಿಯುಂಡ ರೈತ

ಸಿ.ಶಿವಾನಂದ
Published 15 ಜುಲೈ 2019, 10:53 IST
Last Updated 15 ಜುಲೈ 2019, 10:53 IST
ತೋಟದಲ್ಲಿ ಬೆಳೆದ ಹಾಗಲಕಾಯಿಯೊಂದಿಗೆ ರೈತ ಸೆರೆಗಾರ ಮಂಜುನಾಥ
ತೋಟದಲ್ಲಿ ಬೆಳೆದ ಹಾಗಲಕಾಯಿಯೊಂದಿಗೆ ರೈತ ಸೆರೆಗಾರ ಮಂಜುನಾಥ   

ಹಗರಿಬೊಮ್ಮನಹಳ್ಳಿ: ಅರ್ಧ ಎಕರೆಯಲ್ಲಿ ಹಾಗಲಕಾಯಿ ಬೆಳೆದು ತೋಟಗಾರಿಕೆಯಲ್ಲಿ ಯಶಸ್ಸು ಗಳಿಸಿದ್ದಾರೆತಾಲ್ಲೂಕಿನ ಹಂಪಾಪಟ್ಟಣದ ರೈತ ಸೆರೆಗಾರ ಮಂಜುನಾಥ.

ಮಂಜುನಾಥ ಅವರ ತಂದೆ ಮಳೆಯಾಶ್ರಿತ ಬೆಳೆಗಳನ್ನು ಬೆಳೆದು ಕೈಸುಟ್ಟುಕೊಳ್ಳುತ್ತಿದ್ದರು. ತಂದೆಗಿಂತ ಸ್ವಲ್ಪ ಭಿನ್ನವಾಗಿ ಯೋಚಿಸಿದ ಫಲವಾಗಿ ಲಾಭದಾಯಕ ಕೃಷಿ ಮಾಡಲು ಸಾಧ್ಯವಾಗಿದೆ.

ಪದವಿ ಮುಗಿಸಿರುವ ಮಂಜುನಾಥ ಸರ್ಕಾರಿ ನೌಕರಿ ಹುಡುಕುವ ಗೋಜಿಗೆ ಹೋಗದೆ ಕೃಷಿಯಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಅರ್ಧ ಎಕರೆಯಲ್ಲಿ ಸಾಲಿನಿಂದ ಸಾಲಿಗೆ ನಾಲ್ಕು ಅಡಿ ಅಗಲದ ಅಂತರದಲ್ಲಿ ಒಟ್ಟು ಎರಡು ಸಾವಿರ ಗಿಡಗಳನ್ನು ಬೆಳೆದಿದ್ದಾರೆ. 50 ದಿನಗಳಲ್ಲಿ ಫಸಲು ಕೈ ಸೇರಿದೆ. ಮೊಳಕೆಯೊಡೆದ ಇಪ್ಪತ್ತು ದಿನಗಳಲ್ಲಿ ಬಳ್ಳಿ ಏರಲು ಗೂಟಗಳನ್ನು ಉಗಿಯಬೇಕು. ಗೂಟಕ್ಕೆ ಪ್ಲಾಸ್ಟಿಕ್‌ ದಾರ ಕಟ್ಟಿ, ಅದಕ್ಕೆ ಬಳ್ಳಿಗಳನ್ನು ಏರಿಸಿದ್ದಾರೆ. ನಾಲ್ಕು ಟ್ರ್ಯಾಕ್ಟರ್‌ ಸೆಗಣಿ ಗೊಬ್ಬರ ಹಾಕಿದ್ದಾರೆ. ಇದರಿಂದ ರೋಗ ಬಾಧಿಸಿಲ್ಲ.

ADVERTISEMENT

ಕೂಲಿಕಾರರ ನೆರವಿಲ್ಲದೆ ಮನೆಯವರೇ ಸೇರಿಕೊಂಡು ಜಮೀನು ನೋಡಿಕೊಳ್ಳುತ್ತಿದ್ದಾರೆ. ₹25 ಸಾವಿರ ಖರ್ಚು ಮಾಡಿ ಬೆಳೆ ಬೆಳೆದಿರುವ ಅವರಿಗೆ ಮೊದಲ ಹಂತದಲ್ಲಿ ₹80 ಸಾವಿರ ಲಾಭ ಬಂದಿದೆ. ಇನ್ನೂ ₹1 ಲಕ್ಷ ಲಾಭದ ನಿರೀಕ್ಷೆಯಲ್ಲಿದ್ದಾರೆ.

‘ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರಿಗೆ ಹಾಗಲಕಾಯಿ ನೈಸರ್ಗಿಕ ಔಷಧವಾಗಿ ಕೆಲಸ ಮಾಡುತ್ತದೆ. ಮಾರುಕಟ್ಟೆಯಲ್ಲಿ ಅದಕ್ಕೆ ಬಹಳ ಬೇಡಿಕೆ ಇದೆ. ಸಾಂಪ್ರದಾಯಿಕ ಬೆಳೆಗಳ ಬದಲಾಗಿ ಹಾಗಲಕಾಯಿ ಮೊರೆ ಹೋಗಿದ್ದೇನೆ. ಅದರಲ್ಲಿ ಯಶಸ್ಸು ಸಿಕ್ಕಿದೆ’ ಎಂದು ಮಂಜುನಾಥ ಖುಷಿಯಿಂದ ಹೇಳಿದರು.

‘ಮಾರುಕಟ್ಟೆಗೆ ಇದುವರೆಗೆ ಯಾವುದೇ ಸಮಸ್ಯೆ ಉಂಟಾಗಿಲ್ಲ. ಮುಂದಿನ ದಿನಗಳಲ್ಲಿ ಹೆಚ್ಚಿನ ಬೆಲೆ ಸಿಗುವ ನಿರೀಕ್ಷೆ ಇದೆ. ಹೆಚ್ಚಿನ ಪ್ರಮಾಣದಲ್ಲಿ ನೀರು ಸಿಕ್ಕರೆ ಐದಾರೂ ಎಕರೆಯಲ್ಲಿ ತೋಟಗಾರಿಕೆ ಮಾಡುವ ಚಿಂತನೆ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.