ಸಿರುಗುಪ್ಪ: ರೈತರಿಂದ ಸಹಕಾರ ಕ್ಷೇತ್ರವು ಇಂದು ಹೆಮ್ಮರವಾಗಿ ಬೆಳೆಯುತ್ತಿದೆ ಎಂದು ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಚೊಕ್ಕ ಬಸವನಗೌಡ ಹೇಳಿದರು.
ನಗರದ ಶ್ರೀಶೈಲ ಸಾಂಸ್ಕೃತಿಕ ಭವನದಲ್ಲಿ ಗುರುವಾರ ನಡೆದ 2024-25ನೇ ಸಾಲಿನ ಪಿಕಾರ್ಡ್ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.
ಸಹಕಾರ ಕ್ಷೇತ್ರಕ್ಕೆ ರೈತರೇ ಬೆನ್ನೆಲುಬು. ಬ್ಯಾಂಕಿನ ಅಭಿವೃದ್ಧಿಗೆ ಸಾಲ ವಸೂಲಾತಿಯೇ ಮುಖ್ಯ. ಅಂತಹ ಕೆಲಸವನ್ನು ಸಿಬ್ಬಂದಿ, ನಿರ್ದೇಶಕರು ಶ್ರಮದಿಂದ ಉತ್ತಮ ಸಾಲ ವಸೂಲಾತಿಗಾಗಿ ಕಲ್ಯಾಣ ಕರ್ನಾಟಕ ಕಲಬುರಗಿ ವಿಭಾಗ ಮಟ್ಟದಲ್ಲಿ ಪ್ರಥಮ ಸ್ಥಾನ ಹಾಗೂ ಬೆಂಗಳೂರು ಕಾಸ್ಕಾರ್ಡ್ ಬ್ಯಾಂಕಿನಿಂದ ರಾಜ್ಯಮಟ್ಟದಲ್ಲಿ ಸರ್ವಾಂಗೀಣ ಅಭಿವೃದ್ದಿಗೆ ನಮ್ಮ ಬ್ಯಾಂಕ್ ಆಯ್ಕೆಯಾಗಿರುವುದು ರೈತರಿಗೆ ಸಂಧ ಗೌರವವಾಗಿದೆ ಎಂದರು.
ಸಹಕಾರ ಬ್ಯಾಂಕ್ನಿಂದ ಪಡೆದ ಸಾಲವನ್ನು ಸದ್ಬಳಕೆ ಮಾಡಿಕೊಂಡು ಸರಿಯಾದ ಸಮಯಕ್ಕೆ ಸಾಲ ಮರುಪಾವತಿ ಮಾಡಿ ಹೆಚ್ಚಿನ ಅಭಿವೃದ್ಧಿ ಹೊಂದಬೇಕು ಎಂದು ರೈತರಿಗೆ ಸಲಹೆ ನೀಡಿದರು.
ನೂತನ ಯೋಜನೆಗಳಾದ ಭತ್ತ ಕಟಾವು ಯಂತ್ರ, ಭತ್ತ ಒಣಗಿಸುವ ಪ್ಲಾಟ್ ಫಾರಂ, ಸೌರಶಕ್ತಿ ದೀಪಗಳು, ಮೀನುಗಾರಿಕೆ, ಟ್ರಾಕ್ಟರ್, ಭೂ ಅಭಿವೃದ್ದಿ, ಕುರಿ ಸಾಕಾಣಿಕೆ, ಎತ್ತು ಬಂಡಿ ಸಾಲ, ಉಗ್ರಾಣ ಯೋಜನೆ ಸಾಲ ಪಡೆದುಕೊಂಡು ಆರ್ಥಿಕವಾಗಿ ಸದೃಢವಾಗಿ ಬ್ಯಾಂಕಿನ ಅಭಿವೃದ್ಧಿಗೆ ಸಹಕಾರ ನೀಡಲು ವಿನಂತಿಸಿಕೊಳ್ಳುತ್ತೇನೆ ಎಂದರು.
ಬ್ಯಾಂಕಿನ ವ್ಯವಸ್ಥಾಪಕ ತಿಪ್ಪಣ್ಣ ಎಂ.ಬನಸೋಡೆ ಪ್ರಾಸ್ತಾವಿಕವಾಗಿ ಮಾತನಾಡಿ, 2024-25ನೇ ಸಾಲಿನ ಬ್ಯಾಂಕಿನ ನಿವ್ವಳ ಲಾಭಾಂಶ ₹197.59 ಕೋಟಿ, ನಬಾರ್ಡ್ ಲಾಭಾಂಶ ₹31.30 ಕೋಟಿ, ಬ್ಯಾಂಕಿಂಗ್ ವಿಭಾಗದ ಲಾಭಾಂಶ ₹165.05 ಕೋಟಿ, ಕರೂರು ಬ್ಯಾಂಕಿನ ಲಾಭಾಂಶ ₹1.15 ಕೋಟಿ, ಕಾಸ್ಕಾರ್ಡ್ ಬ್ಯಾಂಕಿಗೆ 2025-26ನೇ ಸಾಲಿಗೆ ಬಡ್ಡಿ ಕಾಯ್ದಿರಿಸಿದ ಬ್ಯಾಂಕಿನ ನಿವ್ವಳ ಲಾಭಾಂಶ ₹32.45 ಲಕ್ಷ ಆಗಿದೆ ಎಂದು ಸಭೆಯಲ್ಲಿ ಪ್ರಸ್ತಾಪಿಸಿದರು.
ಬ್ಯಾಂಕಿನೊಂದಿಗೆ ಉತ್ತಮ ವ್ಯವಹಾರ ಮಾಡಿದ ಪ್ರಗತಿಪರ ರೈತರಿಗೆ ಸನ್ಮಾನಿಸಿ ಗೌರವಿಸಿದರು.
ಜಿಲ್ಲಾ ಸಹಾಯಕ ನಿಬಂಧಕ ಜ್ಞಾನೇಶ, ಉಪಾಧ್ಯಕ್ಷ ಬಿ.ಆರ್.ಚಂದ್ರಾರೆಡ್ಡಿ, ನಿರ್ದೇಶಕರಾದ ಪಿ.ತಿಮ್ಮಪ್ಪ, ಎಚ್.ಶಾಂತನಗೌಡ, ಬಿ.ಎಂ.ಜಡೇಸ್ವಾಮಿ, ಶಿವರಾಮಗೌಡ ಎಚ್, ಪುರಗೈ ತಾಯಪ್ಪ, ಮಲ್ಲಯ್ಯ ಕೆ, ತಿಮ್ಮನಗೌಡ.ವಿ, ಸರಸ್ವತಿ.ಹೆಚ್, ರಾಧಮ್ಮ.ಎಮ್, ಜಿ.ಮರೇಗೌಡ, ಶಂಕ್ರಪ್ಪ, ಟಿ.ನಾಗರಾಜ, ವೃತ್ತಿಪರ ನಿರ್ದೇಶಕರಾದ ಎಸ್.ಮಲ್ಲಿಕಾರ್ಜುನ, ಗಿರೀಶ್ಗೌಡ, ವ್ಯವಸ್ಥಾಪಕ ಟಿ.ಎಮ್.ಬನಸೋಡೆ, ಶಿಕ್ಷಕ ಪಿ.ದಿವಾಕರ ನಾರಾಯಣ, ತಾಲೂಕಿನ ವಿವಿಧ ಸಹಕಾರಿಗಳಿಂದ ಪದಾಧಿಕಾರಿಗಳು, ಸಿಬ್ಬಂದಿ ವರ್ಗ, ಬ್ಯಾಂಕಿನ ಸದಸ್ಯರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.