
ಬಳ್ಳಾರಿ: ಕೃಷಿ ಮತ್ತು ಎಂಎಸ್ಎಂಇ (ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ)ಗೆ ಸಂಬಂಧಿಸಿದ ಪ್ರಮುಖ ಹಣಕಾಸು ಯೋಜನೆಗಳ ಅವಧಿಯನ್ನು ವಿಸ್ತರಿಸಬೇಕೆಂದು ಆಗ್ರಹಿಸಿ ‘ಬಳ್ಳಾರಿ ಉದ್ಯಮ ಪ್ರತಿಷ್ಠಾನ’ವು ಜಿಲ್ಲಾಧಿಕಾರಿ ಮೂಲಕ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಸಲ್ಲಿಸಿದೆ.
ಗ್ರಾಮೀಣ ಮತ್ತು ಸಣ್ಣ ವ್ಯವಹಾರಗಳ ಆರ್ಥಿಕತೆಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಈ ಯೋಜನೆಗಳು ಮಹತ್ವದ ಪಾತ್ರ ವಹಿಸುತ್ತದೆ ಎಂದು ಫೌಂಡೇಷನ್ನ ಸಂಚಾಲಕರಾದ ಪನ್ನರಾಜ್ ಅಭಿಪ್ರಾಯಪಟ್ಟಿದ್ದಾರೆ.
ಕೃಷಿ ಆದಾಯವನ್ನು ಸುಧಾರಿಸುವಲ್ಲಿ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸುವಲ್ಲಿ ಕೃಷಿ ಮೂಲಸೌಕರ್ಯ ನಿಧಿ (ಎಐಎಫ್), ಪಶುಸಂಗೋಪನಾ ಮೂಲಸೌಕರ್ಯ ಅಭಿವೃದ್ಧಿ ನಿಧಿ (ಎಎಚ್ಐಡಿಎಫ್), ರಾಷ್ಟ್ರೀಯ ಜಾನುವಾರು ಮಿಷನ್ (ಎನ್ಎಲ್ಎಂ), ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಿಗೆ ಕ್ರೆಡಿಟ್ ಗ್ಯಾರಂಟಿ ಟ್ರಸ್ಟ್ (ಸಿಜಿಟಿಎಂಎಸ್ಇ) ನಂತಹ ಯೋಜನೆಗಳು ಪ್ರಧಾನ ಪಾತ್ರ ವಹಿಸುತ್ತವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಕೃಷಿ ಮತ್ತು ಎಂಎಸ್ಎಂಇಗಳು ದೇಶದ ಜಿಡಿಪಿಗೆ ಶೇ. 30 ಪ್ರತಿಶತ ಕೊಡುಗೆ ನೀಡುತ್ತವೆ. ಈ ಕ್ಷೇತ್ರಗಳು ರಾಷ್ಟ್ರೀಯ ಬೆಳವಣಿಗೆಗೆ ಅತಿ ಮುಖ್ಯ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಕ್ಷೇತ್ರಗಳಿಗೆ ಪ್ರೋತ್ಸಹ ನೀಡುವ ಯೋಜನೆಗಳು ಇದೇ ಮಾರ್ಚ್ಗೆ ಅಂತ್ಯವಾಗುತ್ತಿವೆ. ಆದರೆ, ಯೋಜನೆಗಳನ್ನು ಕನಿಷ್ಠ 3ರಿಂದ ಐದು ವರ್ಷಗಳ ವರೆಗೆ ವಿಸ್ತರಿಸಬೇಕು ಎಂದು ಪ್ರತಿಷ್ಠಾನ ಕೋರಿದೆ. ಇದರ ಜತೆಗೆ ಪತ್ರ ಆಂದೋಲನವನ್ನೂ ಪ್ರತಿಷ್ಠಾನ ಆರಂಭಿಸಿದೆ.
ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ 371 (ಜೆ) ವಿಧಿಯ ಅಡಿಯಲ್ಲಿ ವಿಶೇಷ ಅನುದಾನ ಒದಗಿಸಬೇಕು ಎಂದೂ ಫೌಂಡಷನ್ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.