ADVERTISEMENT

ಶ್ರೀರಾಮುಲು ಹೆಸರಲ್ಲಿ ಮಾಜಿ ಶಾಸಕನ ದರ್ಬಾರ್: ಶಾಸಕ ಗಣೇಶ್ ಗಂಭೀರ ಆರೋಪ

ಸಮುದಾಯ ಭವನಕ್ಕೆ ಭೂಮಿ ಪೂಜೆ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2021, 3:30 IST
Last Updated 31 ಮಾರ್ಚ್ 2021, 3:30 IST
ಕಂಪ್ಲಿ ತಾಲ್ಲೂಕಿನ ದೇವಲಾಪುರ ಗ್ರಾಮದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಶಾಸಕ ಜೆ.ಎನ್. ಗಣೇಶ್ ಮಂಗಳವಾರ ಭೂಮಿಪೂಜೆ ನೆರವೇರಿಸಿದರು
ಕಂಪ್ಲಿ ತಾಲ್ಲೂಕಿನ ದೇವಲಾಪುರ ಗ್ರಾಮದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಶಾಸಕ ಜೆ.ಎನ್. ಗಣೇಶ್ ಮಂಗಳವಾರ ಭೂಮಿಪೂಜೆ ನೆರವೇರಿಸಿದರು   

ಕಂಪ್ಲಿ: ಮಾಜಿ ಶಾಸಕ ಟಿ.ಎಚ್. ಸುರೇಶ್‍ ಬಾಬು ಸಚಿವ ಬಿ. ಶ್ರೀರಾಮುಲು ಹೆಸರು ಹೇಳಿಕೊಂಡು ಕಂಪ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಅಧಿಕಾರ ಚಲಾಯಿಸುತ್ತಿದ್ದಾರೆ ಎಂದುಶಾಸಕ ಜೆ.ಎನ್. ಗಣೇಶ್ ಆರೋಪಿಸಿದರು.

ತಾಲ್ಲೂಕಿನ ದೇವಲಾಪುರ ಗ್ರಾಮದ ಆಂಜನೇಯ ದೇವಸ್ಥಾನ ಬಳಿ ₹ 3.30 ಲಕ್ಷ ಶಾಸಕರ ಅನುದಾನದಲ್ಲಿ ನಿರ್ಮಾಣವಾಗುತ್ತಿರುವ ಸಮುದಾಯ ಭವನಕ್ಕೆ ಮಂಗಳವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ತಾವು ಶ್ರೀರಾಮುಲು ಅಳಿಯ ಎಂದು ಹೇಳಿಕೊಳ್ಳುತ್ತಾ ಅಧಿಕಾರಿಗಳನ್ನೂ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಜತೆಗೆ ಕ್ಷೇತ್ರದ ಜನತೆಯಲ್ಲಿ ಗೊಂದಲದವಾತಾವಾರಣ ಮೂಡಿಸುತ್ತಿದ್ದಾರೆ ಎಂದು ದೂರಿದರು.

ADVERTISEMENT

ಶಾಸಕರಾಗಿದ್ದ ಎರಡು ಅವಧಿಯಲ್ಲಿ ಮತದಾರರಿಂದ ಅಂತರ ಕಾಯ್ದುಕೊಂಡ ಸುರೇಶ್‍ಬಾಬು ಅವರನ್ನು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜನ ತಿರಸ್ಕರಿಸಿದ್ದಾರೆ. ಪರಾಭವದ ನಂತರವೂ ನೈತಿಕತೆ ಮರೆತು ನಡೆದುಕೊಳ್ಳುತ್ತಿದ್ದಾರೆ ಎಂದು ಅಪಾದಿಸಿದರು.

ಪಟ್ಟಣದ ಮಾರುತಿ ನಗರದ ಬಲಭಾಗದ ನಿವೇಶನಗಳನ್ನು ಅಲ್ಲಿಯ ಜನತೆ ಬಳ್ಳಾರಿಗೆ ಪಾದಯಾತ್ರೆ ಮಾಡಿ ಹೋರಾಟದಿಂದ ಹಕ್ಕುಪತ್ರ ಪಡೆದುಕೊಂಡಿ ದ್ದಾರೆಯೇ ಹೊರತು ಇದರಲ್ಲಿ ಮಾಜಿ ಶಾಸಕರ ಪಾತ್ರವಿಲ್ಲ ಎಂದು ತಿಳಿಸಿದರು.

ಇಲ್ಲಿಯ ಸಕ್ಕರೆ ಕಾರ್ಖಾನೆಯ 176 ಎಕರೆ ಭೂಮಿಯನ್ನು ಸಚಿವ ಶ್ರೀರಾಮುಲು ಲೂಟಿ ಮಾಡಿದ್ದಾರೆ. ಈ ಬಗ್ಗೆ ಮಾಜಿ ಶಾಸಕರು ಸಮಯ, ಸ್ಥಳ ನಿಗದಿ ಮಾಡಿ ಚರ್ಚೆಗೆ ಆಹ್ವಾನಿಸಿದರೆ ರೈತರೊಂದಿಗೆ ಭಾಗವಹಿಸುತ್ತೇನೆ ಎಂದರು.

‘ಕಂಪ್ಲಿ ಮತ್ತು ಕುರುಗೋಡು ಪಟ್ಟಣದಲ್ಲಿ ರಾಜ್ಯ ಸರ್ಕಾರದ ₹ 10 ಲಕ್ಷ, ಜಿಲ್ಲಾ ಖನಿಜ ನಿಧಿ ಅನುದಾನ ₹ 5ಕೋಟಿ ಸೇರಿ ಒಟ್ಟು ₹ 15 ಕೋಟಿ ವೆಚ್ಚದಲ್ಲಿ ಶೀಘ್ರ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗುವುದು’ ಎಂದರು.

ಗ್ರಾ.ಪಂ ಉಪಾಧ್ಯಕ್ಷೆ ಈರಮ್ಮ ಪೂಜಾರಿ, ಸದಸ್ಯರಾದ ಕುಂಬಾರ ವಿರುಪಾಕ್ಷಪ್ಪ, ಬೂದಾಳು ರವಿಕುಮಾರ್, ಸೋಮಲಾಪುರ ಮಾರೇಶ್, ಪ್ರಮುಖರಾದ ಜಿ. ಮರೇಗೌಡ, ಜಿ. ಅಂಜಿನಪ್ಪ, ಕರೆಪ್ಪ ಗೌಡ್ರು, ಸುರೇಶಗೌಡ, ಉಮೇಶಗೌಡ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.