ಹೊಸಪೇಟೆ: ‘ವಿಜಯನಗರ ಜಿಲ್ಲೆ ರಚನೆ ಮಾಡಬೇಕು ಎನ್ನುವುದು ಈ ಭಾಗದ ಜನರ ಒಂದುವರೆ ದಶಕದ ಬೇಡಿಕೆಯಾಗಿದೆ. ರಾಜ್ಯ ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸಿ ಆ ಬೇಡಿಕೆ ಈಡೇರಿಸಬೇಕು’ ಎಂದು ಗಂಗಾಮತ ಸಮಾಜ ಆಗ್ರಹಿಸಿದೆ.
ಈ ಸಂಬಂಧ ಸಮಾಜದವರು ಸೋಮವಾರ ನಗರದಲ್ಲಿ ಮುಖ್ಯಮಂತ್ರಿಯವರ ಹೆಸರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ಎಚ್. ವಿಶ್ವನಾಥ್ ಅವರಿಗೆ ಸಲ್ಲಿಸಿ ಒತ್ತಾಯಿಸಿದರು.
‘ಜಿಲ್ಲೆ ರಚನೆಯ ಹೋರಾಟವೂ 15 ವರ್ಷಗಳ ಹಿಂದೆ ಆರಂಭವಾಗಿದ್ದು ನಗರದ ಗಂಗಾಪರಮೇಶ್ವರಿ ಸಮುದಾಯ ಭವನದಲ್ಲಿ ಎನ್ನುವುದು ವಿಶೇಷ. ಅದುವೇ ಹೋರಾಟದ ಶಕ್ತಿ ಕೇಂದ್ರವಾಗಿತ್ತು. ಸಮಾಜವು ದೇಣಿಗೆ ನೀಡಿ ಹೋರಾಟ ಬೆಂಬಲಿಸಿತ್ತು’ ಎಂದು ಸಮಾಜದ ಅಧ್ಯಕ್ಷ ರಾಮನಮಲಿ ಹುಲುಗಪ್ಪ ತಿಳಿಸಿದರು.
‘ಸಚಿವ ಆನಂದ್ ಸಿಂಗ್ ಅವರ ರಾಜಕೀಯ ಇಚ್ಛಾಶಕ್ತಿಯಿಂದ ವಿಜಯನಗರ ಜಿಲ್ಲೆ ಘೋಷಣೆಯಾಗಿದೆ. ಆಡಳಿತದ ದೃಷ್ಟಿಯಿಂದ ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸಿ ಜಿಲ್ಲೆ ರಚಿಸಬೇಕು’ ಎಂದು ಒತ್ತಾಯಿಸಿದರು.
ವಿಜಯನಗರ ಜಿಲ್ಲಾ ಹೋರಾಟ ಸಮಿತಿಯ ಸಂಚಾಲಕ ವೈ.ಯಮುನೇಶ್, ಗಂಗಾಮತ ಸಮಾಜದ ಎಸ್.ಗಾಳೆಪ್ಪ, ಅಭಿಮನ್ಯು, ಮಡ್ಡಿ ಹನುಮಂತಪ್ಪ, ಎಂ.ಸಣ್ಣಕ್ಕೆಪ್ಪ, ಕಂಪ್ಲಿ ಹನುಮಂತಪ್ಪ, ಸುಭಾಷ್ ಚಂದ್ರ, ಕೆ.ಈರಣ್ಣ, ಬಿ.ರಾಮು, ಕೆ.ರಾಘವೇಂದ್ರ, ಎಸ್.ಗುರುರಾಜ್, ಈ.ಕೆಂಚಪ್ಪ, ಎಂ.ಜಗನ್ನಾಥ್, ಜೆ.ರಮೇಶ್, ಎಂ. ರಾಮಾಲಿ, ಎಂ.ಹನುಮಂತ, ಪಿ.ಹನುಮಂತಪ್ಪ, ಎಂ.ಗುರುಶಾಂತಪ್ಪ, ಶಿವಾನಂದ ಕವಿತಾಳ್, ವಿಶ್ವನಾಥ ಕವಿತಾಳ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.