
ಹಗರಿಬೊಮ್ಮನಹಳ್ಳಿ: ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸುವುದಕ್ಕೆ ಅಗತ್ಯ ಅನುದಾನ ನೀಡಲಾಗುವುದು ಎಂದು ಪುರಸಭೆ ಅಧ್ಯಕ್ಷ ಎಂ.ಮರಿರಾಮಪ್ಪ ಹೇಳಿದರು.
ಇಲ್ಲಿನ ರಾಮನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಕಾಮಗಾರಿಗೆ ಮತ್ತು ಡಾ.ಬಿ.ಅಂಬೇಡ್ಕರ್ ಗ್ರಂಥಾಲಯಕ್ಕೆ ಚಾಲನೆ ನೀಡಿ ಮಾತನಾಡಿದರು.
ಶಾಲೆಯ ಕೊಠಡಿಗಳ ಮುಂದೆ ₹10ಲಕ್ಷ ಅಂದಾಜು ಮೊತ್ತದಲ್ಲಿ ನೆಲಹಾಸು ಹಾಕಲಾಗುವುದು, ಸುತ್ತುಗೋಡೆ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.
ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಗ್ರಂಥಾಲಯ ಸೌಲಭ್ಯ ಪಡೆಯಬೇಕು, ಅದಕ್ಕಾಗಿ ವಿಶ್ವಜ್ಞಾನಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಹೆಸರಿನಲ್ಲಿ ಗ್ರಂಥಾಲಯ ಸ್ಥಾಪಿಸಲಾಗಿದೆ, ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಇದು ಮಹತ್ವದ ಜ್ಞಾನ ನೀಡುವುದಕ್ಕೆ ಪೂರಕವಾಗಲಿದೆ ಎಂದರು. ವಿದ್ಯಾರ್ಥಿಗಳ ಜ್ಞಾನ ವಿಕಾಸಕ್ಕೆ 300ಪುಸ್ತಕಗಳನ್ನು ನೀಡಲಾಗಿದೆ ಎಂದು ತಿಳಿಸಿದರು.
ತಾಲ್ಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಸೊನ್ನದ ಗುರುಬಸವರಾಜ, ಜಿಲ್ಲಾ ಸಮಿತಿ ಸದಸ್ಯ ಹೆಗ್ಡಾಳ್ ಪರಶುರಾಂ, ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯ ಬಿ.ದೇವೇಂದ್ರಪ್ಪ, ಮುಖಂಡರಾದ ಜಿ.ಹನುಮಂತಪ್ಪ, ಕೋರಿ ಗೋಣಿಬಸಪ್ಪ, ಸಿಕಂದರ್, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಪರಮೇಶ್ವರಯ್ಯ ಸೊಪ್ಪಿಮಠ, ಮುಖ್ಯ ಶಿಕ್ಷಕ ಕೃಷ್ಣನಾಯ್ಕ, ಎಸ್ಡಿಎಂಸಿ ಅಧ್ಯಕ್ಷೆ ಗಂಗಮ್ಮ, ಮಾಜಿ ಅಧ್ಯಕ್ಷ ಶಾಬುದ್ದೀನ್, ಮುಖ್ಯ ಶಿಕ್ಷಕ ಕೆ.ರಾಮಪ್ಪ, ಶಿಕ್ಷಕರಾದ ಸೊನ್ನದ ಮುರುಘರಾಜೇಂದ್ರ, ಮೂಗಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.