ಹೊಸಪೇಟೆ: ತಾಲ್ಲೂಕಿನ ಹಂಪಿ ‘ಎದುರು ಬಸವಣ್ಣ’ ಸ್ಮಾರಕ ಬಳಿಯ ಮಂಟಪದ ಮೇಲ್ಛಾವಣಿ ಶನಿವಾರ ಕುಸಿದು ಬಿದ್ದಿದೆ.
ಮೇಲ್ಛಾವಣಿ ಬಿದ್ದದ್ದರಿಂದ ಅದಕ್ಕೆ ಹೊಂದಿಕೊಂಡಂತೆ ಇರುವ ಪೊಲೀಸ್ ಠಾಣೆ ಹಾಗೂ ಇತರೆ ಮಂಟಪಗಳ ಗೋಡೆಗಳಲ್ಲಿ ಬಿರುಕು ಮೂಡಿದೆ.
‘ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ವ್ಯಾಪಾರ ವಹಿವಾಟು ನಡೆಸಲು ಈ ಮಂಟಪಗಳನ್ನು ನಿರ್ಮಿಸಲಾಗಿತ್ತು. ಇದರ ಒಂದು ಬದಿಯಲ್ಲಿ ಈಗ ಪೊಲೀಸ್ ಠಾಣೆ ಕೆಲಸ ನಿರ್ವಹಿಸುತ್ತಿದೆ. ಠಾಣೆಗೆ ಹೊಂದಿಕೊಂಡ ಮಂಟಪದ ಮೇಲ್ಛಾವಣಿ ಕುಸಿದು ಬಿದ್ದಿದೆ. ಇತ್ತೀಚೆಗೆ ಸತತ ಸುರಿದ ಮಳೆಗೆ ನೆನೆದು ಬಿದ್ದಿರುವ ಸಾಧ್ಯತೆ ಇದೆ. ಘಟನೆಯಲ್ಲಿ ಯಾರಿಗೂ ಯಾವುದೇ ಅಪಾಯ ಆಗಿಲ್ಲ. ಇತರೆ ಸ್ಮಾರಕಗಳೊಂದಿಗೆ ಇದನ್ನೂ ಬರುವ ದಿನಗಳಲ್ಲಿ ಜೀರ್ಣೊದ್ಧಾರಗೊಳಿಸಲಾಗುವುದು’ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಹಂಪಿ ವೃತ್ತದ ಡೆಪ್ಯುಟಿ ಸೂಪರಿಟೆಂಡೆಂಟ್ ಪಿ. ಕಾಳಿಮುತ್ತು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.