
ಹರಪನಹಳ್ಳಿ: ‘ದೇವದಾಸಿ ಪದ್ಧತಿ ರದ್ದಾಗಿರುವ ಕುರಿತು ಜಾತ್ರೆ ಆರಂಭಕ್ಕೂ ಮುನ್ನ ಸುತ್ತಲಿನ ಗ್ರಾಮದಲ್ಲಿ ಜಾಗೃತಿ ಮೂಡಿಸಬೇಕು. ದೇವದಾಸಿ ಪದ್ಧತಿ ಆಚರಣೆ ಕಂಡುಬಂದಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಹೇಳಿದರು.
ತಾಲ್ಲೂಕಿನ ಉಚ್ಚಂಗಿದುರ್ಗದ ಯಾತ್ರಾನಿವಾಸದಲ್ಲಿ ಶನಿವಾರ ನಡೆದ ವಿವಿಧ ಇಲಾಖೆ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘ಜನವರಿ 31ರಿಂದ ಫೆಬ್ರುವರಿ 2ರವರೆಗೆ ಭರತ ಹುಣ್ಣಿಮೆ ಆಚರಣೆ, ಮಾರ್ಚ್ 17ರಿಂದ 22ರವರೆಗೆ ಯುಗಾದಿ ಹಬ್ಬದ ವೇಳೆ ದೇವಿ ಜಾತ್ರೆ ಜರುಗಲಿದೆ. ಎರಡು ಆಚರಣೆ ಸಂದರ್ಭದಲ್ಲಿ ಉಚ್ಚಂಗಿದುರ್ಗ ಗುಡ್ಡದ ಮೇಲೆ ಮತ್ತು ಹಾಲಮ್ಮನ ತೋಪಿನಲ್ಲಿ ಲಕ್ಷಾಂತರ ಭಕ್ತರು ಸೇರುತ್ತಾರೆ. ಕುಡಿಯುವ ನೀರು, ಶೌಚಾಲಯ, ರಸ್ತೆ ದುರಸ್ತಿ, ನಿರಂತರ ವಿದ್ಯುತ್ ಸಂಪರ್ಕ, ಪೊಲೀಸ್ ಬಂದೋಬಸ್ತ್, ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಬೇಕು’ ಎಂದು ತಾಲ್ಲೂಕು ಮಟ್ಟದ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ಸೂಚಿಸಿದರು.
‘ಭಕ್ತರ ಅನುಕೂಲಕ್ಕಾಗಿ ಹೊಸಪೇಟೆ ಮತ್ತು ದಾವಣಗೆರೆಯಿಂದ ವಿಶೇಷ ಬಸ್ಸೌಲಭ್ಯ ಒದಗಿಸಬೇಕು. ಗುಡ್ಡದ ಮೆಟ್ಟಿಲು ಮಾರ್ಗದಲ್ಲಿ ಐದಾರು ಕಡೆಗೆ ನೀರಿನ ಸೌಕರ್ಯ ಇರಬೇಕು’ ಎಂದರು.
ಉಪವಿಭಾಗಾಧಿಕಾರಿ ಸುರೇಶ್ ಕುಮಾರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೈ.ಎಚ್. ಚಂದ್ರಶೇಖರ್, ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತೆ ಸವಿತಾ, ತಹಶೀಲ್ದಾರ್ ಬಿ.ವಿ. ಗಿರೀಶ್ ಬಾಬು, ಡಿವೈಎಸ್ಪಿ ಸಂತೋಷ ಚೌವ್ಹಾಣ್, ಸಿಪಿಐ ಮಹಾಂತೇಶ ಸಜ್ಜನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.